ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ವಿವಿಧೆಡೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ 10ನೇ ದಿನವೂ ಮುಂದುವರಿದಿದೆ. ಉತ್ತರ, ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ಪಾಲಿಕೆಗಳಲ್ಲಿ ಒಟ್ಟು 26.10 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ.

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ರಾಜಾಜಿನಗರ ಹಾಗೂ ಬಸವನಗುಡಿ ವಿಭಾಗಗಳಲ್ಲಿ ಒತ್ತುವರಿ ತೆರವು ನಡೆಸಲಾಗಿದ್ದು, ಈ ವೇಳೆ 3 ಚಿಕ್ಕಅಂಗಡಿ, 4 ತಳ್ಳುಗಾಡಿ, 4 ಎಸಿ ಶೀಟ್ಸ್ ಪ್ರೊಜೆಕ್ಷನ್ಸ್, ಕ್ಯಾನೊಪಿ, 42 ಮೆಟ್ಟಿಲು, 9 ಜಾಹಿರಾತು ಪಿಲ್ಲರ್‌ ಮತ್ತು ಬೋರ್ಡ್‌ಗಳು, 2 ತಾತ್ಕಾಲಿಕ ಶೆಡ್‌ಗಳು, 6 ಟನ್‌ ಕಟ್ಟಡ ತ್ಯಾಜ್ಯ ತೆರವುಗೊಳಿಸಲಾಗಿದೆ.

ರಾಜಾಜಿನಗರ ವಿಭಾಗದಲ್ಲಿ ಬಸವೇಶ್ವರನಗರ 1ನೇ ಮುಖ್ಯರಸ್ತೆಯ ಶಾರದಾ ಕಾಲೊನಿ ಬಸ್‌ ನಿಲ್ದಾಣ, ಪವಿತ್ರಾ ಪ್ಯಾರಡೈಸ್‌ ಜಂಕ್ಷನ್‌, 0.50 ಕಿ.ಮೀ. ಬಸವನಗುಡಿ ವಿಭಾಗದಲ್ಲಿ ಸುಬ್ಬಾರಾಮ್‌ ಚೆಟ್ಟಿ ರಸ್ತೆಯಲ್ಲಿ ನೆಟ್ಟಕಲ್ಲಪ್ಪ ವೃತ್ತ, ಬುಲ್‌ ಟೆಂಪಲ್ ರಸ್ತೆ 1 ಕಿ.ಮೀ, ಹೊರ ವರ್ತುಲ ರಸ್ತೆ, ಹೊಸಕೆರೆಹಳ್ಳಿ ಅಡ್ಡರಸ್ತೆ ಪೆಟ್ರೋಲ್‌ ಬಂಕ್‌, ಕಾಮಾಕ್ಯ ಸಿಗ್ನಲ್‌ 2.5 ಕಿ.ಮೀ ಸೇರಿ ಒಟ್ಟು 4 ಕಿ.ಮೀ. ರಸ್ತೆ ತೆರವುಗೊಳಿಸಲಾಗಿದೆ.

ದಕ್ಷಿಣ ಪಾಲಿಕೆಯಲ್ಲಿ 6 ಕಿ.ಮೀ ಒತ್ತುವರಿ ತೆರವು


ದಕ್ಷಿಣ ಪಾಲಿಕೆ ಅಂಜನಾಪುರ ಮತ್ತು ಬೇಗೂರು ವಿಭಾಗದಲ್ಲಿ ಬ್ರಿಡ್ಜ್ ಮಿಲೇನಿಯಂ ಸಿಗ್ನಲ್‌ನಿಂದ ಗ್ರೀನ್ ವ್ಯಾಲಿ ಶಾಲೆವರೆಗಿನ ಆರ್‌ಬಿಐ ಲೇಔಟ್ ಮುಖ್ಯ ರಸ್ತೆಯಲ್ಲಿ 1.80 ಕಿ.ಮೀ., ಪೂರ್ಣಪ್ರಜ್ಞ ಲೇಔಟ್‌ನಿಂದ ನೈಸ್ ರಸ್ತೆ ಸೇತುವೆವರೆಗಿನ ಉತ್ತರಹಳ್ಳಿ ರಸ್ತೆಯಲ್ಲಿ 2 ಕಿ.ಮೀ. ಹಾಗೂ ಬೇಗೂರು ಮುಖ್ಯ ರಸ್ತೆಯಿಂದ ನ್ಯಾಯಪ್ಪನಹಳ್ಳಿ ಮುಖ್ಯ ರಸ್ತೆವರೆಗಿನ ದೇವರಚಿಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿ 1.20 ಕಿ.ಮೀ. ಸೇರಿ ಒಟ್ಟು 5 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಅರಕೆರೆ ವಿಭಾಗದಲ್ಲಿ ಅರಕೆರೆ ಗೇಟ್‌ನಿಂದ ಆ‌ರ್‌ಟಿಒ ಕಚೇರಿವರೆಗಿನ ಅರಕೆರೆ ಮುಖ್ಯ ರಸ್ತೆಯಲ್ಲಿ ಒಟ್ಟು 1 ಕಿ.ಮೀ. ಪಾದಚಾರಿ ಮಾರ್ಗವನ್ನು ತೆರವುಗೊಳಿಸಲಾಗಿದೆ.

ಉತ್ತರ ನಗರ ಪಾಲಿಕೆ 6.40 ಕಿ.ಮೀ

ಉತ್ತರ ಪಾಲಿಕೆಯಲ್ಲಿ 6.40 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ಒತ್ತುವರಿ ಮುಕ್ತಗೊಳಿಸಲಾಗಿದೆ. ಸರ್ವಜ್ಞನಗರ ವಿಭಾಗದಲ್ಲಿ ರಾಜ್‌ಕುಮಾರ್ ಪಾರ್ಕ್ ರಸ್ತೆಯಲ್ಲಿ ಎಚ್‌ಆರ್‌ಬಿಆರ್ 2ನೇ ಬ್ಲಾಕ್ 5ನೇ ಮುಖ್ಯರಸ್ತೆಯಿಂದ 7ನೇ ಮುಖ್ಯರಸ್ತೆಯವರೆಗೆ ಸುಮಾರು 0.80 ಕಿ.ಮೀ. ಯಲಹಂಕ ವಿಭಾಗ, ಹೆಬ್ಬಾಳ ವಿಭಾಗ, ದಾಸರಹಳ್ಳಿ ವಿಭಾಗದಲ್ಲಿ ಹಲವು ಕಡೆಗಳಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲಾಗಿದೆ.

ಪೂರ್ವ ವಿಭಾಗದಲ್ಲಿ 9.7 ಕಿ.ಮೀ ತೆರವು

ನಗರದ ಪೂರ್ವ ಪಾಲಿಕೆ ವಿಭಾಗದಲ್ಲಿ ಮಹದೇವಪುರ ಹಾಗೂ ಕೆ.ಆರ್.ಪುರ ವಲಯಗಳಲ್ಲಿ ಹಲವು ರಸ್ತೆಗಳು ಸೇರಿ ಒಟ್ಟು 9.7 ಕಿಲೋಮೀಟರ್ ರಸ್ತೆಯ ಒತ್ತುವರಿ ತೆರವುಗೊಳಿಸಲಾಗಿದೆ. ಇವುಗಳಲ್ಲಿ ದೊಡ್ಡನಕುಂದಿ ಹಾಗೂ ರಾಮಮೂರ್ತಿನಗರಗಳಲ್ಲಿ ಗುರುತು ಮಾಡಲಾಗಿದ್ದ ಒತ್ತುವರಿ ತೆರವು ಮುಕ್ತಾಯಗೊಂಡಿದೆ. ಉಳಿದ ಸ್ಥಳಗಳಲ್ಲಿ ತೆರವು ಮುಂದುವರಿಯಲಿದೆ.