ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್‌

Published : Nov 08, 2025, 11:23 AM IST
Mohan Bhagwat

ಸಾರಾಂಶ

ಸಮಾಜ ಕೇವಲ ಕಾನೂನಿನಿಂದ ಮಾತ್ರ ನಡೆಯುವುದಿಲ್ಲ. ಸಂವೇದನೆಯಿಂದ, ಸಾಂಸ್ಕೃತಿಕ ತಳಹದಿಯ ಮೇಲೆ ನಡೆಯುತ್ತದೆ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.  ಶುಕ್ರವಾರ ನಗರದಲ್ಲಿ ನಡೆದ ನೆಲೆ ಫೌಂಡೇಶನ್‌ನ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

  ಬೆಂಗಳೂರು :  ಸಮಾಜ ಕೇವಲ ಕಾನೂನಿನಿಂದ ಮಾತ್ರ ನಡೆಯುವುದಿಲ್ಲ. ಸಂವೇದನೆಯಿಂದ, ಸಾಂಸ್ಕೃತಿಕ ತಳಹದಿಯ ಮೇಲೆ ನಡೆಯುತ್ತದೆ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ನಡೆದ ನೆಲೆ ಫೌಂಡೇಶನ್‌ನ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜಕ್ಕೆ ತನ್ನತನ ಇರುತ್ತದೆ. ಸ್ಪಂದನೆ, ಸಂವೇದನಾಶೀಲತೆಯಿಂದ ಅದು ಜಾಗೃತಗೊಳ್ಳುತ್ತದೆ. ನಾವೆಲ್ಲರೂ ಸಂವೇದನೆಯನ್ನು ಹೊಂದಬೇಕು. ನಮ್ಮ ಹೃದಯದಲ್ಲಿ ಸಂವೇದನೆಯ ದೀಪವನ್ನು ಹಚ್ಚಿ ಅದರಂತೆ ಎಲ್ಲರ ಹೃದಯದಲ್ಲಿ ದೀಪ ಬೆಳಗಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡಬೇಕು. ಆಗ ನಮ್ಮ ಸಮಾಜ ಅಭಿವೃದ್ಧಿ ಕಾಣುತ್ತದೆ. ನಮ್ಮ ಸಮಾಜ ಒಟ್ಟಾಗಿ ನಿಂತರೆ ದೇಶವೂ ಎತ್ತರದಲ್ಲಿ ನಿಲ್ಲುತ್ತದೆ. ಆಗ ಭಾರತವೂ ಜಗತ್ತಿಗೆ ಮಾರ್ಗದರ್ಶನ ನೀಡುವ ಬೆಳಕಾಗಬಹುದು. ವಿಶ್ವಗುರು ಆಗಬಹುದು ಎಂದರು.

ಜಗತ್ತಿನಲ್ಲಿ ಜ್ಞಾನ ಭಂಡಾರವಿದೆ. ವಿಜ್ಞಾನ, ಹಣ ಸೇರಿದಂತೆ ಎಲ್ಲವೂ ಇದೆ. ಆದರೆ, ಮನುಷ್ಯ-ಮನುಷ್ಯರ ನಡುವೆ, ಮನುಷ್ಯ ಮತ್ತು ಕುಟುಂಬದ ನಡುವೆ ಸಂಬಂಧ ಇಲ್ಲದಂತಾಗಿದೆ. ಕುಟುಂಬಕ್ಕೆ ಸಮಾಜದೊಂದಿಗೆ, ಸಮಾಜಕ್ಕೆ ಸೃಷ್ಟಿಯೊಂದಿಗೆ ಸಂಬಂಧ ಇಲ್ಲವಾಗಿದೆ. ಎಲ್ಲರಿಗೂ ಬೇರೆ ಬೇರೆಯಾಗಿ ಹೋಗುವ ಧಾವಂತವಿದೆ. ಸಾಯುವವರೆಗೂ ಸುಖದಲ್ಲಿ ಬದುಕಬೇಕು ಎನ್ನುವ ಹಂಬಲವಿದೆ. ಹೀಗಾಗಿ, ಬೇರೆಯವರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ ಎನ್ನುವ ವಾತಾವರಣವಿದೆ ಎಂದು ಮೋಹನ್ ಭಾಗವತ್ ಬೇಸರ ವ್ಯಕ್ತಪಡಿಸಿದರು.

ಲೆಕ್ಕಾಚಾರ ಮಾಡಿಯೇ ಮುಂದುವರೆಯುತ್ತೇವೆ

ನಮಗೆ ಚೆನ್ನಾಗಿರಲು ಏನು ಬೇಕೋ ಅದನ್ನು ಮಾಡುತ್ತೇವೆ. ಏನೇ ಮಾಡಿದರೂ ನನಗೆ ಲಾಭ ಏನು? ಎನ್ನುವುದರ ಲೆಕ್ಕಾಚಾರ ಮಾಡಿಯೇ ಮುಂದುವರೆಯುತ್ತೇವೆ. ಲಾಭ ಇಲ್ಲದಿದ್ದರೆ ಮಾಡುವುದಿಲ್ಲ. ನಷ್ಟವಾಗುತ್ತದೆ ಎನ್ನುವುದಾದರೆ ಅದನ್ನು ಬೇರೆಯವರು ಮಾಡಲೂ ಬಿಡುವುದಿಲ್ಲ. ಜಗತ್ತು ಇದೇ ರೀತಿ ಸುಮಾರು 2000 ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದರಿಂದ ಬಗೆ ಬಗೆಯ ಸಮಸ್ಯೆಗಳು, ದುಃಖ- ದುಮ್ಮಾನಗಳು ಎದುರಾಗಿವೆ. ಅದನ್ನು ಕಡಿಮೆ ಮಾಡಲು ಪ್ರಯತ್ನಗಳೂ ನಡೆದಿವೆ. ಆದರೆ, ಫಲ ಸಿಕ್ಕಿಲ್ಲ ಎಂದು ಹೇಳಿದರು.

ಇಂದು ಜಗತ್ತು ಸಮೃದ್ಧವಾಗಿದೆ.

ಇಂದು ಜಗತ್ತು ಸಮೃದ್ಧವಾಗಿದೆ. ಜ್ಞಾನವಂತರಿಂದ ತುಂಬಿದೆ. ವಿಜ್ಞಾನದಿಂದ ಕೆಲಸಗಳು ಸರಳವಾಗಿ ಸುಖ, ಸಂತೋಷಕ್ಕೆ ಅವಕಾಶಗಳು ಇವೆ. ಆದರೂ, ಅನಾಥರನ್ನು ನೋಡಿಕೊಳ್ಳಲು ಜನರು ಇಲ್ಲ. ಇಂತಹ ಸಂದರ್ಭದಲ್ಲಿ ಲಾಭದ ಉದ್ದೇಶವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ನೆಲೆ ಫೌಂಡೇಶನ್‌ನ ಕಾರ್ಯ ಶ್ಲಾಘನೀಯ. ಇಂತಹ ಸಂಸ್ಥೆಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು ಎಂದು ಭಾಗವತ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಳ್ಳಿ ಬೆಳಕು ಕಿರು ಹೊತ್ತಿಗೆಯನ್ನು ಮೋಹನ್ ಭಾಗವತ್ ಬಿಡುಗಡೆ ಮಾಡಿದರು. ನೆಲೆ ಫೌಂಡೇಶನ್ ಅಧ್ಯಕ್ಷ ಡಿ. ಶಿವಕುಮಾರ್, ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಶ್ರೀನಾಥ ಮತ್ತಿತರರು ಉಪಸ್ಥಿತರಿದ್ದರು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರ್ಕಾರಿ ಸವಲತ್ತುಗಳು ಅರ್ಹರಿಗೆ ತಲುಪಿಸಿ
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಿ: ಸಿದ್ದಲಿಂಗಶ್ರೀ