ಬೆಂಗಳೂರು : ರಾಜ್ಯ ಸರ್ಕಾರ ಕಲಾವಿದರ ಬಹು ವರ್ಷಗಳ ಬೇಡಿಕೆ ಈಡೇರಿಸಿದ್ದು ಹಿರಿಯ ಕಲಾವಿದರ ಮಾಸಾಶನವನ್ನು 2500 ರು.ಗಳಿಗೆ ಹೆಚ್ಚಿಸಿ ಅನುದಾನ ಬಿಡುಗಡೆ ಮಾಡಿದೆ.
2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು 2 ಸಾವಿರ ರು.ಗಳಿಂದ 2500 ರು.ಗಳಿಗೆ ಹೆಚ್ಚಿಸಿ, ಮಾಸಾಶನಕ್ಕೆ ಬೇಕಾಗುವ ಒಟ್ಟು ಮೊತ್ತ 32.94 ಕೋಟಿ ರು.ಅನ್ನು ಮಂಜೂರು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಆದೇಶಿಸಿದೆ. ಇದರಿಂದಾಗಿ 60 ವರ್ಷ ಮೇಲ್ಪಟ್ಟ 12000ಕ್ಕೂ ಹೆಚ್ಚು ಮಂದಿ ಹಿರಿಯ ಕಲಾವಿದರ ಇದರ ಲಾಭ ಪಡೆಯಲಿದ್ದಾರೆ.
ಕಲಾವಿದರು ಹಲವು ವರ್ಷಗಳಿಂದ ಮಾಸಾಶನ ಹೆಚ್ಚಿಸುವಂತೆ ಮನವಿ ಮಾಡುತ್ತಲೇ ಬಂದಿದ್ದರು. ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾಸಾಶನ ಹೆಚ್ಚಿಸುವ ಭರವಸೆ ನೀಡಿದ್ದರು. ಅಂತೆಯೇ ಈ ಬಾರಿಯ ಬಜೆಟ್ನಲ್ಲಿ ಮಾಸಾಶನ ಹೆಚ್ಚಿಸುವುದಾಗಿ ಹೇಳಿದ್ದರು. ಇದೀಗ ನುಡಿದಂತೆ ನಡೆದಿದ್ದು, ಜೂ. 25ರಿಂದಲೇ ಪರಿಷ್ಕೃತ ಮಾಸಾಶನ ಜಾರಿಗೆ ಬರಲಿದೆ.