ನಗರ ಸುತ್ತಮುತ್ತ ಬರೋಬ್ಬರಿ 85 ಚಿರತೆಗಳು!

Sujatha NR | Published : Jun 6, 2025 10:52 AM

ಬೆಂಗಳೂರು ಸುತ್ತಮುತ್ತಲಿನ ಚಿರತೆಗಳ ಸಂಖ್ಯೆ ಕುರಿತಂತೆ ಅರಣ್ಯ ತಜ್ಞ ಡಾ. ಸಂಜಯ್‌ಗುಬ್ಬಿ ನೇತೃತ್ವದ ಹೊಳೆಮತ್ತಿ ನೇಚರ್‌ ಫೌಂಡೇಷನ್‌ನ ತಂಡವು ಅಧ್ಯಯನ ನಡೆಸಿದ್ದು, ಅದರಂತೆ ಬೆಂಗಳೂರು ಸುತ್ತಮುತ್ತ 80 ರಿಂದ 85 ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ.

  ಬೆಂಗಳೂರು : ಬೆಂಗಳೂರು ಸುತ್ತಮುತ್ತಲಿನ ಚಿರತೆಗಳ ಸಂಖ್ಯೆ ಕುರಿತಂತೆ ಅರಣ್ಯ ತಜ್ಞ ಡಾ. ಸಂಜಯ್‌ಗುಬ್ಬಿ ನೇತೃತ್ವದ ಹೊಳೆಮತ್ತಿ ನೇಚರ್‌ ಫೌಂಡೇಷನ್‌ನ ತಂಡವು ಅಧ್ಯಯನ ನಡೆಸಿದ್ದು, ಅದರಂತೆ ಬೆಂಗಳೂರು ಸುತ್ತಮುತ್ತ 80 ರಿಂದ 85 ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ.

ಕ್ಯಾಮರಾ ಟ್ರ್ಯಾಪ್‌ಗಳನ್ನು ಬಳಸಿ ಸತತ ಒಂದು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ಪ್ರಮುಖವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಬಿಎಂ ಕಾವಲ್‌, ಯುಎಂ ಕಾವಲ್‌, ತುರಹಳ್ಳಿ, ತುರಹಳ್ಳಿಗುಡ್ಡ, ಸೂಳಿಕೆರೆ, ಹೆಸರಘಟ್ಟ, ಮಾರಸಂದ್ರ, ಮಂಡೂರು ಸೇರಿದಂತೆ ಇನ್ನಿತರ 282 ಚದರ ಕಿಮೀ ಪ್ರದೇಶದಲ್ಲಿ ಅಧ್ಯಯನ ಕೈಗೊಳ್ಳಲಾಗಿತ್ತು. ಅದರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 54 ಹಾಗೂ ಬೆಂಗಳೂರು ಸುತ್ತಮುತ್ತಲಿನ ಕಾಯ್ದಿಟ್ಟ ಮತ್ತು ಪರಿಭಾವಿತ ಅರಣ್ಯ ಪ್ರದೇಶಗಳಲ್ಲಿ ಸುಮಾರು 30 ಚಿರತೆಗಳಿರುವುದು ತಿಳಿದುಬಂದಿದೆ.

ಚಿರತೆಗಳಲ್ಲದೆ ಇತರ 34 ಪ್ರಭೇದದ ಸಸ್ತನಿಗಳು ಈ ಅಧ್ಯಯನದಲ್ಲಿ ದಾಖಲಾಗಿವೆ. ಅವುಗಳಲ್ಲಿ ನಾಲ್ಕು ನಶಿಸುವ ಮತ್ತು ನಾಲ್ಕು ಅಪಾಯದಂಚಿನಲ್ಲಿರುವ ಪ್ರಭೇದಗಳಾಗಿವೆ. ಅವುಗಳಲ್ಲಿ 27 ಪ್ರಭೇದದ ಸಸ್ತನಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತೆ ಸಂರಕ್ಷಿಸಲಾಗುತ್ತಿವೆ. ಹೀಗಾಗಿ ಬೆಂಗಳೂರು ಸುತ್ತಲಿನ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸಬೇಕಿದೆ.

ಈ ಅಧ್ಯಯನದ ಹಿನ್ನೆಲೆಯಲ್ಲಿ ಹೊಳೆಮತ್ತಿ ನೇಚರ್‌ ಫೌಂಡೇಷನ್‌ ಸರ್ಕಾರಕ್ಕೆ ಕೆಲ ಶಿಫಾರಸುಗಳನ್ನು ಮಾಡಿದ್ದು, ವನ್ಯಜೀವಿ ಹಾಗೂ ವಿಶೇಷ ಸಸ್ತನಿಗಳ ಸಂರಕ್ಷಣೆಗಾಗಿ ಬಿಎಂ ಕಾವಲ್‌, ಯುಎಂ ಕಾವಲ್‌, ರೋರಿಚ್‌ ಎಸ್ಟೇಟ್‌, ಗುಲ್ಲಹಳ್ಳಿಗುಡ್ಡ ಕಾಡುಗಳನ್ನು ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸಬೇಕು. ದುರ್ಗದಕಲ್‌, ಬೆಟ್ಟಹಳ್ಳಿವಾಡೆ ಕಾಯ್ದಿಟ್ಟ ಅರಣ್ಯ ಪ್ರದೇಶಗಳು ಮತ್ತು ಜೆಐ ಬಾಚಹಳ್ಳಿ, ಎಂ.ಮಣಿಯಂಬಳ್‌ ಪ್ರದೇಶಗಳ ಪರಿಭಾವಿತ ಅರಣ್ಯ ಪ್ರದೇಶಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸೇರಿಸಬೇಕು ಎಂದು ತಿಳಿಸಲಾಗಿದೆ.

ಅದರೊಂದಿಗೆ ಮುನೇಶ್ವರಬೆಟ್ಟ-ಬನ್ನೇರುಘಟ್ಟ ವನ್ಯಜೀವಿ ಕಾರಿಡಾರ್‌ ಸಂರಕ್ಷಣೆಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಬೇರೆ ಕಡೆಗಳಲ್ಲಿ ಸೆರೆ ಹಿಡಿಯುವ ಚಿರತೆಗಳನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಲಾಗಿದೆ.

Read more Articles on