‘2 ವರ್ಷದಲ್ಲಿ ಹೆಚ್ಚುವರಿ ನೀರು ಹೊಂದಿದ ನಗರ ಮಾಡುವೆ‘

ಸಾರಾಂಶ

ಸದ್ಯ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ನಗರವನ್ನು ಮುಂದಿನ ಎರಡು ವರ್ಷದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣ ನೀರು ಹೊಂದಿದ ನಗರವನ್ನಾಗಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದ್ದಾರೆ.

ಬೆಂಗಳೂರು :  ಸದ್ಯ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ನಗರವನ್ನು ಮುಂದಿನ ಎರಡು ವರ್ಷದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣ ನೀರು ಹೊಂದಿದ ನಗರವನ್ನಾಗಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಗುರುವಾರ ಆಯೋಜಿಸಿದ್ದ ಸಂವಾದ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳು ಬೆಂಗಳೂರಿನ ನೀರಿನ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಜೂನ್‌ ಮೂರನೇ ವಾರಕ್ಕೆ ಕಾವೇರಿ 5 ಹಂತದ ಯೋಜನೆಯಿಂದ ಹೆಚ್ಚುವರಿಯಾಗಿ 750 ಎಂಎಲ್‌ಡಿ ನೀರು ನಗರಕ್ಕೆ ಲಭ್ಯವಾಗಲಿದೆ. ಜುಲೈ ವೇಳೆಗೆ ನಗರದ ನೀರಿನ ಕೊರತೆ ಸಂಪೂರ್ಣವಾಗಿ ನಿಗಲಿದೆ.

2024ರ ಜುಲೈ ನಿಂದ 2026ರ ಜುಲೈ ಅವಧಿಯಲ್ಲಿ ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರು ಲಭ್ಯ ಇಲ್ಲ. ಆದರೆ, ನೀರಿನ ಮರು ಬಳಕೆ, ಅಂತರ್ಜಲವೃದ್ಧಿ ಸೇರಿದಂತೆ ಮೊದಲಾದ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಎರಡು ವರ್ಷದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ನೀರು ಹೊಂದಿರುವ ನಗರವನ್ನಾಗಿಸುವುದು ಜಲಮಂಡಳಿಯ ಗುರಿಯಾಗಿದೆ. ಈ ಬಗ್ಗೆ ಜುಲೈ ನಲ್ಲಿ ಯೋಜನಾ ವರದಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.ಎಫ್‌ಕೆಸಿಸಿಐ ಪದಾಧಿಕಾರಿಗಳಾದ ಟಿ.ಸಾಯಿರಾಂ ಪ್ರಸಾದ್‌, ಎಂ.ಜಿ ಬಾಲಕೃಷ್ಣ, ಉಪಾಧ್ಯಕರಾದ ಉಮಾ ರೆಡ್ಡಿ, ಗೋಪಾಲ್‌ ರೆಡ್ಡಿ ಇದ್ದರು.

3 ತಿಂಗಳಲ್ಲಿ ಪೀಣ್ಯಗೆ ಸಂಸ್ಕರಿಸಿದ ನೀರು

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರು ನೀಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದು ರಾಂಪ್ರಸಾತ್‌ ಮನೋಹರ್‌ ತಿಳಿಸಿದರು.

ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಮಾತನಾಡಿ, ಬೆಂಗಳೂರು ಸುಸ್ಥಿರ ನಗರವನ್ನಾಗಿಸುವ ನಿಟ್ಟಿನಲ್ಲಿ ಎಫ್‌ಕೆಸಿಸಿಐ ಸಂಪೂರ್ಣ ಸಹಕಾರ ನೀಡಲಿದೆ. ಚುನಾವಣೆ ನೀತಿ ಸಂಹಿತೆ ನಡುವೆ ನಗರ ನೀರಿನ ಸಮಸ್ಯೆ ನಿವಾರಣೆಗೆ ಶ್ರಮಿಸಿದ ಜಲಮಂಡಳಿ ಅಧ್ಯಕ್ಷರನ್ನು ಅಭಿನಂದಿಸಿದರು.

 

Share this article