ಬೆಂಗಳೂರಿನಿಂದ ಬೆಳಗಾವಿಗೂ ಇನ್ನು ವಂದೇಭಾರತ್‌ ರೈಲು

KannadaprabhaNewsNetwork |  
Published : Aug 06, 2025, 01:15 AM IST
ವಂದೇ ಭಾರತ್‌ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಬೆಳಗಾವಿ ಮಾರ್ಗದ ನೂತನ ‘ವಂದೇ ಭಾರತ್‌’ ರೈಲಿಗೆ ಈ ತಿಂಗಳ 10ರಂದು ಹಸಿರು ನಿಶಾನೆ ತೋರಲಿದ್ದಾರೆ. ಇದರೊಂದಿಗೆ ಬೆಳಗಾವಿಗರ ಬಹುದಿನದ ಬೇಡಿಕೆ ಈಡೇರಲಿದೆ.

- ಉಭಯ ನಗರ ಯಾನ ಅವಧಿ ಬರೀ 8.5 ತಾಸು

- ಆ.10ಕ್ಕೆ ಬೆಂಗಳೂರಲ್ಲಿ ಮೋದಿ ಹಸಿರು ನಿಶಾನೆ

--

ರೈಲು ಸಂಚಾರ ಹೇಗೆ?

- ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಹೊರಡಲಿರುವ ವಂದೇ ಭಾರತ್‌

- ಬೆಂಗಳೂರಿಗೆ ಮಧ್ಯಾಹ್ನ 1.50 ಗಂಟೆಗೆ ತಲುಪಲಿರುವ ರೈಲು

- ಬೆಂಗಳೂರಿನಿಂದ ವಾಪಸ್‌ ಮಧ್ಯಾಹ್ನ 2.20ಕ್ಕೆ ಹೊರಡುವ ರೈಲು

- ರಾತ್ರಿ 10.40ಕ್ಕೆ ಬೆಳಗಾವಿಗೆ ಆಗಮನ. 8.50 ಗಂಟೆಯ ಯಾನ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಬೆಳಗಾವಿ ಮಾರ್ಗದ ನೂತನ ‘ವಂದೇ ಭಾರತ್‌’ ರೈಲಿಗೆ ಈ ತಿಂಗಳ 10ರಂದು ಹಸಿರು ನಿಶಾನೆ ತೋರಲಿದ್ದಾರೆ. ಇದರೊಂದಿಗೆ ಬೆಳಗಾವಿಗರ ಬಹುದಿನದ ಬೇಡಿಕೆ ಈಡೇರಲಿದೆ.

ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1.50ಕ್ಕೆ ಈ ರೈಲು ಆಗಮಿಸಲಿದೆ. ಬೆಂಗಳೂರಿನಿಂದ ವಾಪಸ್‌ ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಳಗಾವಿಗೆ ತಲುಪಲಿದೆ. ಇದರಿಂದ ಸುಮಾರು ಉಭಯ ನಗರಗಳ ಯಾನದ ಅವಧಿ ಈಗಿನ 9 ಗಂಟೆ 50 ನಿಮಿಷದಿಂದ 8 ಗಂಟೆ 30 ನಿಮಿಷಗಳಿಗೆ ತಗ್ಗಲಿದೆ

ಈ ರೈಲಿನ ಜತೆಗೆ ಒಟ್ಟು ಮೂರು ವಂದೇ ಭಾರತ್‌ ರೈಲುಗಳ ಸಂಚಾರಕ್ಕೆ ಪ್ರಧಾನಿ ಮೋದಿ ಅವರು ಅಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಚಾಲನೆ ನೀಡಲಿದ್ದಾರೆ. ನಾಗ್ಪುರದ ಅಜ್ನಿ-ಪೂನಾ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೋದೇವಿ ಕಟ್ರಾ ಮಧ್ಯೆ ಅಂದು ಉದ್ಘಾಟನೆಯಾಗಲಿರುವ ಇನ್ನೆರಡು ನೂತನ ವಂದೇ ಭಾರತ್ ರೈಲುಗಳು.

ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಬೆಳಗಾವಿ ಸಂಸದರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಅವರು ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸಂಚಾರಕ್ಕಾಗಿ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ರೈಲು ಸಂಚಾರದಿಂದ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಮಧ್ಯೆ ಸಂಪರ್ಕ ಹೆಚ್ಚಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲ್ವೆ ಸೌಲಭ್ಯ ಕಲ್ಪಿಸುವಲ್ಲಿ ಶ್ರಮಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಪ್ರಹ್ಲಾದ್‌ ಜೋಶಿ ಮತ್ತು ಜಗದೀಶ್ ಶೆಟ್ಟರ್‌ ಧನ್ಯವಾದ ಅರ್ಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರಣಿ ಸ್ಥಳಕ್ಕೆ ಎಡಿಸಿ ಭೇಟಿ: ಪಟ್ಟು ಬಿಡದ ರೈತರು
ಸಂಕ್ರಮಣದ ಸಂಭ್ರಮದ ತೆಪ್ಪೋತ್ಸವ