ಆ.1ರಿಂದ ಫುಟ್ಪಾತ್‌ ಮೇಲಿನಬೆಸ್ಕಾಂ ಸಾಮಗ್ರಿ ತೆರವು: ಕೃಷ್ಣ

KannadaprabhaNewsNetwork |  
Published : Jul 29, 2026, 03:45 AM IST
ಕೃಷ್ಣ ಬೈರೇಗೌಡ | Kannada Prabha

ಸಾರಾಂಶ

ನಗರದ ಪಾದಚಾರಿ ಮಾರ್ಗಗಳ ಮೇಲೊರುವ ಬೆಸ್ಕಾಂ ಸಂಬಂಧಿಸಿದ ಪರಿವರ್ತಕ (ಟ್ರಾನ್ಸ್‌ಫಾರ್ಮರ್‌) ಮತ್ತಿತರಗಳ ಸಾಮಗ್ರಿಗಳ ಸಮಗ್ರ ಪಟ್ಟಿ ಸಿದ್ಧಪಡಿಸಿ ಆ.1ರಿಂದ ಪ್ರಾರಂಭವಾಗುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದ ವೇಳೆ ತೆರವುಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಪಾದಚಾರಿ ಮಾರ್ಗಗಳ ಮೇಲೊರುವ ಬೆಸ್ಕಾಂ ಸಂಬಂಧಿಸಿದ ಪರಿವರ್ತಕ (ಟ್ರಾನ್ಸ್‌ಫಾರ್ಮರ್‌) ಮತ್ತಿತರಗಳ ಸಾಮಗ್ರಿಗಳ ಸಮಗ್ರ ಪಟ್ಟಿ ಸಿದ್ಧಪಡಿಸಿ ಆ.1ರಿಂದ ಪ್ರಾರಂಭವಾಗುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದ ವೇಳೆ ತೆರವುಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜನರ ಓಡಾಟಕ್ಕೆ ಅಡ್ಡಿಯಾಗಿರುವ ಟ್ರಾನ್ಸ್‌ಫಾರ್ಮರ್‌ ಮತ್ತಿತರ ವಿದ್ಯುತ್ ಸಾಮಗ್ರಿ ಸ್ಥಳಾಂತರಿಸುವ ಕುರಿತು ಮಂಗಳವಾರ ವರ್ಚ್ಯುವಲ್ ಸಭೆ ನಡೆಸಿದ ಅವರು, ಬಳಕೆಯಲ್ಲಿ ಇಲ್ಲದ ಹಳೆಯದಾಗಿರುವ ಹಾಗೂ ಮುರಿದ ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳಿಗೆ ಅಳವಡಿಸಿರುವ ರಾಡ್‌ಗಳು ನಾಗರಿಕರ ತಲೆಗೆ ತಾಗುವ ರೀತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿವೆ. ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಟ್ರಾನ್ಸ್‌ಫಾರ್ಮರ್‌ಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದರು.

ಸ್ಥಳಾಂತರದ ಕುರಿತು ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕು. ನಗರದ ಅಂದ ಕಾಪಾಡಿ, ಸುರಕ್ಷಿತ ಪಾದಚಾರಿ ಮಾರ್ಗ ನಿರ್ಮಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪಾದಚಾರಿ ಮಾರ್ಗಗಳ ಮಧ್ಯಭಾಗದಲ್ಲಿರುವ ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಕೆಲವರು ಸಂಪೂರ್ಣ ಮಾರ್ಗವನ್ನು ಅತಿಕ್ರಮಿಸಿದ್ದಾರೆ. ಖಾಸಗಿ ಅಪಾರ್ಟ್‌ಮೆಂಟ್‌ಗಳು ಅಳವಡಿಸಿಕೊಂಡಿರುವ ಟ್ರಾನ್ಸ್‌ಫಾರ್ಮರ್‌ಗಳು ಪಾದಚಾರಿ ಮಾರ್ಗ/ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದು, ಅಂತಹವುಗಳನ್ನು ಪಟ್ಟಿ ಮಾಡಿಕೊಂಡಿ ಅವರ ಜಾಗದಲ್ಲಿಯೇ ಅಳವಡಿಸಿಕೊಳ್ಳಲು ಸೂಚನೆ ನೀಡಬೇಕು. ಬೆಸ್ಕಾಂನ ಎಲ್ಲ ಯುಟಿಲಿಟಿಗಳನ್ನು ಸ್ಥಳಾಂತರಿಸಲು ವಿಶೇಷ ಅಭಿಯಾನ ಹಮ್ಮಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವರು ಸೂಚಿಸಿದರು.

ಭವಿಷ್ಯದ ಯೋಜನೆ ವ್ಯವಸ್ಥಿತವಾಗಿರಲಿ:

ಟ್ರಾನ್ಸ್‌ಫಾರ್ಮರ್‌ಗಳು ನಾಗರಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ವಿನ್ಯಾಸಗೊಳಿಸಬೇಕು. ಜನರಿಗೆ ತೊಂದರೆಯಾಗದಂತೆ ನಗರದಾದ್ಯಂತ ಒಂದೇ ಮಾದರಿಯ ವಿನ್ಯಾಸವನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಸಚಿವರು ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

7000 ಟ್ರಾನ್ಸ್‌ಫಾರ್ಮರ್

ಸ್ಥಳ ಬದಲಾಗಿದೆ: ಬೆಸ್ಕಾಂ

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಮಾತನಾಡಿ, ನಗರದ ಫುಟ್‌ಪಾತ್‌ಗಳ ಮೇಲಿದ್ದ ಸುಮಾರು ಏಳು ಸಾವಿರ ಹಳೆಯ ಟ್ರಾನ್ಸ್‌ಫಾರ್ಮರ್‌ಗಳ ಸ್ಥಳವನ್ನು ಈಗಾಗಲೇ ಬದಲಿಸಲಾಗಿದೆ. ಉಳಿದ ಟ್ರಾನ್ಸ್‌ಫಾರ್ಮರ್‌ಗಳು, ಇನ್ನಿತರ ಅಡೆತಡೆಗಳ ಸಮಗ್ರ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ವಿಶೇಷ ಅಭಿಯಾನದ ಮೂಲಕ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಎಂಟಿಸಿ ಬಸ್ಸಲ್ಲಿ ಕನ್ನಡಿಗ ಸ್ಟಿಕ್ಕರ್‌ತೆಗೆಸಿದ ಡಿಪೋ ವ್ಯವಸ್ಥಾಪಕ: ಕಿಡಿ
4 ಕಳ್ಳರ ಬಂಧಿಸಿ 1.28 ಕೋಟಿ ಚಿನ್ನ ಜಪ್ತಿ