ನಾಪೋಕ್ಲು: ಹೊದ್ದೂರು ಗ್ರಾಮದ ಕೂಡಂಡ ರವಿ ಮೊಣ್ಣಪ್ಪ 2025-26ನೇ ಸಾಲಿನ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ವಿಭಾಗದ ಹೈನುಗಾರಿಕಾ ಕ್ಷೇತ್ರದಲ್ಲಿ ಮಡಿಕೇರಿ ತಾಲೂಕು ಮಟ್ಟದ ಪ್ರಶಸ್ತಿಗೆ ಪಾತ್ರರಾಗಿ 10 ಸಾವಿರ ರು. ನಗದು ಬಹುಮಾನ ಪಡೆದುಕೊಂಡಿದ್ದಾರೆ ಎಂದು ಮಡಿಕೇರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಸುಮಾರು 60ಕ್ಕೂ ಅಧಿಕ ಮಲಬಾರಿ ಆಡುಗಳು, ಸಾಹಿವಾಲ್ ಮತ್ತು ಸಿಂಧಿ ಹಸುಗಳನ್ನು ಸಾಕುತ್ತಿದ್ದಾರೆ. ಜೊತೆಗೆ ಭತ್ತ ಮತ್ತು ಇತರ ಮಿಶ್ರ ಕೃಷಿಗಳನ್ನು ಮಾಡುತ್ತಿದ್ದಾರೆ. ಸಾಹಿವಾಲ್ ಹಸುಗಳ ಸಾಕಣೆ ಮಾಡುತ್ತಿರುವ ಬೆರಳೆಣಿಕೆ ಹೈನುಗಾರರಲ್ಲಿ ಇವರು ಒಬ್ಬರಾಗಿದ್ದಾರೆ. ಅವರ ಕಾರ್ಯಗಳಿಗೆ ಪತ್ನಿ ಧರಣಿ ಕೈ ಜೋಡಿಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಅವರು ಬೆಳೆಸಿದ್ದ 14 ಅಡಿ ಎತ್ತರದ ಬೋಗನ್ ವಿಲ್ಲಾ ಹೂವಿನ ಗಿಡ ಜಿಲ್ಲೆಯ ಮಾಧ್ಯಮಗಳ ಮೂಲಕ ಕೃಷಿಕರ ಗಮನ ಸೆಳೆದಿತ್ತು. ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ರವಿ ಅವರ ಜೀವಾಮೃತ, ಬೀಜಾಮೃತ, ಟ್ರೈಕೋಡರ್ಮ ಬಳಕೆ, ಬೋಗನ್ ವಿಲ್ಲಾ ನರ್ಸರಿ, ಕಸಿ ಕಾಳುಮೆಣಸು ಬಳ್ಳಿಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಮೆಚ್ಚುಗೆ ವ್ಯಕ್ತಪಡಿಸಿದರು.