ಕುಂದಾಪುರ: ಇಲ್ಲಿನ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ವಿಶ್ವ ಕುಂದಾಪ್ರ ದಿನದ ಅಂಗವಾಗಿ ಆಸಾಡಿ ಒಡ್ರ್ ಕಾರ್ಯಕ್ರಮ ಅ. 9ರಂದು ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಜರಗಲಿದ್ದು, ಇದರ ಪೋಸ್ಟರ್‌ನ್ನು ಸೋಮವಾರ ಕೋಟದ ಪಂಚವರ್ಣದ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ತಾಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಕುಂದಾಪ್ರ ಭಾಷೆ ಬದುಕಿನ ವಿಚಾರವನ್ನು ಮುಂದಿನ ತಲೆಮಾರಿಗೆ ಈ ಆಸಾಡಿ ಒಡ್ರ್ ಮೂಲಕ ಸಹಕಾರಿಯಾಗಲಿದೆ. ನಮ್ಮ ಕುಂದಾಪ್ರ ಭಾಷೆ ಮತ್ತು ಬದುಕು ತನ್ನದೇ ಆದ ವಿಶಿಷ್ಟತೆಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿಕೊಂಡಿದೆ. ಪಂಚವರ್ಣ ಸಂಘಟನೆಯ ಈ ಗ್ರಾಮೀಣ ಹಬ್ಬವನ್ನು ಮನೆ ಮನಮುಟ್ಟುವಂತೆ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಸಮಾರಂಭದ ಮುಖ್ಯ ಅಭ್ಯಾಗತರಾಗಿ ಟೆಕ್ನೋ ಡೆಂಟಲ್ ಲ್ಯಾಬ್ ಮುಖ್ಯಸ್ಥೆ ಭಾರತಿ ಪ್ರವೀಣ್ ಪೂಜಾರಿ ಸಾಸ್ತಾನ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಮಾಜಿ ಅಧ್ಯಕ್ಷೆ ಲೀಲಾವತಿ ಗಂಗಾಧರ್, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಕೋಟ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಚಾಲಕಿ ಸುಜಾತ ಬಾಯರಿ ಉಪಸ್ಥಿತರಿದ್ದರು.

ಸದಸ್ಯೆ ವೀಣಾ ಪ್ರಕಾಶ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು.