ಕನ್ನಡಪ್ರಭ ವಾರ್ತೆ ಅರಕಲಗೂಡು
ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆ ಜಾರಿಯಾದ ಬಳಿಕ ಲಿಂಗಾನುಪಾತದಲ್ಲಿ ಏರಿಕೆಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಕುಮಾರ್ ತಿಳಿಸಿದರು.ತಾಲೂಕಿನ ಮೊಕಲಿ ಗ್ರಾಮದ ವಿಸ್ಡಂ ವ್ಯಾಲಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆಗಳು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ, ಶಿಶು ಅಭಿವೃದ್ಧಿ ಯೋಜನೆಗಳ ಸಹಯೋಗದಲ್ಲಿ ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಾಲ್ಯವಿವಾಹ ನಿಷೇಧಕಾಯ್ದೆ ಮತ್ತು ಪೋಕ್ಸೊ ಕಾಯ್ದೆಗಳ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಪೋಕ್ಸೋ ಕಾಯ್ದೆ ಮೂಲಕ ಕಠಿಣ ಶಿಕ್ಷೆ ವಿಧಿಸಲು ಕಾನೂನು ರೂಪಿಸಲಾಗಿದೆ ಎಂದು ತಿಳಿಸಿ ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಪಿಎಸ್ಐ ಸಿ.ಆರ್. ಕಾವ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದು, ಇದು ತೀವ್ರ ರೀತಿಯ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಮಕ್ಕಳನ್ನು ಸಾಧ್ಯವಾದಷ್ಟು ಮೊಬೈಲ್ನಿಂದ ದೂರವಿಡಲು ಹಾಗೂ ಅವರು ವೀಕ್ಷಿಸುತ್ತಿರುವ ವೆಬ್ ಸೈಟ್ ಗಳ ಬಗ್ಗೆ ಪೋಷಕರು ನಿಗಾ ವಹಿಸಬೇಕು ಎಂದರು. ಪೋಕ್ಸೊ ಕಾಯ್ದೆ ಕುರಿತು ಮಾಹಿತಿ ನೀಡಿದರು.ಸಿಡಿಪಿಒ ಎಂ.ಪಿ. ವೆಂಕಟೇಶ್, ಮಕ್ಕಳು ಒಬ್ಬಂಟಿಯಾಗಿರುವಾಗ ಅಪರಿಚಿತರೊಂದಿಗೆ ಬೆರೆಯಬಾರದು, ಕೆಟ್ಟ ಅನುಭವವಾದಲ್ಲಿ ಅದನ್ನು ವಿರೋಧಿಸುವ ಜತೆಗೆ ಪೋಷಕರಿಗೆ ತಿಳಿಸುವಂತೆ ಹೇಳಿ ಮಕ್ಕಳು ತಮ್ಮ ಸ್ವ ರಕ್ಷಣೆ ಮಾಡಿಕೊಳ್ಳುವ ಕುರಿತು ವಿವರಿಸಿದರು. ಮುಖ್ಯ ಶಿಕ್ಷಕಿ ನಜ್ಮಾ ಫಾತಿಮಾ ಉಪಸ್ಥಿತರಿದ್ದರು. ಹೊಳೆನರಸೀಪುರ ತಾಲೂಕು ಶ್ರೀರಾಮಪುರದ ಕಲ್ಪಿತ ಜನಜಾಗೃತಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ತಂಡದವರು ಬೀದಿ ನಾಟಕ ಪ್ರದರ್ಶಿಸಿ ಬಾಲ್ಯವಿವಾಹದ ದುಷ್ಪರಿಣಾಮ ಮತ್ತು ಪೋಕ್ಸೊ ಕಾಯ್ದೆಗಳ ಕುರಿತು ಅರಿವು ಮೂಡಿಸಿದರು.