ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ, ನಿರ್ವಹಣೆ, ಸಮಗ್ರ ರೋಗ, ನಿರ್ವಹಣೆ ಮಾಹಿತಿ
ದಾಳಿಂಬೆಯು ನಮ್ಮ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಲ್ಲಿ ಒಂದಾಗಿದ್ದು ಬೆಳೆಯಲ್ಲಿ ಸಮರ್ಪಕ ನೀರಿನ ನಿರ್ವಹಣೆ, ಸುಸಜ್ಜಿತ ಉತ್ಪಾದನೆ ತಾಂತ್ರಿಕತೆಗಳು ಮತ್ತು ಸಮಗ್ರ ಪೀಡೆ ನಿರ್ವಹಣೆಯ ಪದ್ದತಿ ಅಳವಡಿಕೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ತಿಳಿಸಿದರು.
ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿಯಲ್ಲಿ ವೈಜ್ಞಾನಿಕ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ, ದಾಳಿಂಬೆ ಬೆಳೆಯ ಸುಸಜ್ಜಿತ ಉತ್ಪಾದನೆ ಕ್ರಮಗಳು, ನೀರಿನ ನಿರ್ವಹಣೆ, ಸಮಗ್ರರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಭೂಮಿಯ ಮೇಲೆ ಶೇ 70 ರಷ್ಟು ನೀರಿದ್ದರೂ ಶೇ 2 ಮಾತ್ರ ಕೃಷಿ, ಕೈಗಾರಿಕೆ ಮತ್ತು ದಿನ ನಿತ್ಯ ಬಳಕೆಗೆ ಯೋಗ್ಯವಾಗಿದೆ. ವೈಜ್ಞಾನಿಕವಾಗಿ ಈ ನೀರಿನ ಮಿತ ಹಾಗೂ ಸಮರ್ಥ ಬಳಕೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬಿದ್ದ ನೀರನ್ನು ಇಂಗಿಸಲು ಕಂದಕ ಬದುಗಳ ನಿರ್ಮಾಣ ಮಾಡಬೇಕು ಮತ್ತು ಕೃಷಿ ಹೊಂಡದಲ್ಲಿ ನೀರು ಸಂಗ್ರಹಣೆ ಮಾಡಿ ಬೆಳೆಯ ಸಂದಿಗ್ಧ ಹಂತದಲ್ಲಿ ನೀರು ಹಾಯಿಸಲು ಅನೂಕೂಲವಾಗುತ್ತದೆ. ಕೃಷಿ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್ ಪಡೆಯಲು ಅವಕಾಶವಿದೆ ಎಂದರು.
ಕೀಟ ಶಾಸ್ತ್ರಜ್ಞ ಡಾ ತಾರಣ, ಮುನಿರಬಾದ್ನ ತೋಟಗಾರಿಕೆ ಕಾಲೇಜಿನ ರೋಗಶಾಸ್ತ್ರಜ್ಞ ಡಾ,ರಾಘವೇಂದ್ರ ಆಚಾರಿ, ಜೈನ್ ಇರಿಗೇಷನ್ ಸಂಸ್ಥೆಯ ಪ್ರತಿನಿಧಿ ಕೆ.ದೇವರಾಜ್, ರೈತರು ಹಾಜರಿದ್ದರು.