ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಭದ್ರಾವತಿ ನಗರಸಭೆ: 128 ಲಕ್ಷ ರು. ಉಳಿತಾಯ ಬಜೆಟ್‌ ಮಂಡನೆ

KannadaprabhaNewsNetwork | Published : Feb 14, 2024 2:19 AM

ಕಳೆದ ಸಾಲಿನ ವಾಸ್ತವ ಅದಾಯ ಮತ್ತು ವೆಚ್ಚವನ್ನು ಗಮನದಲ್ಲಿರಿಸಿಕೊಂಡು ಭದ್ರಾವತಿ ನಗರಸಭೆಯ ಈ ಬಾರಿಯ ಆಯವ್ಯಯ ತಯಾರಿಸಲಾಗಿದೆ ಎಂದು ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಗರಸಭೆಯಲ್ಲಿ ಮಂಗಳವಾರ ನಡೆದ 2024-25ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ 128 ಲಕ್ಷ ರುಪಾಯಿಗಳ ಉಳಿತಾಯ ಬಜೆಟ್ ಮಂಡಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ 2024-25ನೇ ಸಾಲಿನ ಆಯವ್ಯಯ ಮಂಡಿಸಿದ್ದು, ನಿರೀಕ್ಷಿತ ಪ್ರಾರಂಭಿಕ ಶುಲ್ಕ 4167.82 ಲಕ್ಷ, ನಿರೀಕ್ಷಿತ ಒಟ್ಟು ಜಮಾ 11207.21 ಲಕ್ಷ, ನಿರೀಕ್ಷಿತ ಒಟ್ಟು ಜುಮ್ಲಾ 15375.03 ಲಕ್ಷ ರು. ಗಳಾಗಿದ್ದು, ನಿರೀಕ್ಷಿತ ಒಟ್ಟು ಖರ್ಚು 11205.93 ಗಳಾಗಿರುತ್ತದೆ. ನಿರೀಕ್ಷಿತ ಅಖೈರು ಶಿಲ್ಕು 4169.10ಲಕ್ಷ ಗಳಾಗಿದ್ದು, ಒಟ್ಟು 128.00 ಲಕ್ಷ ರು. ಉಳಿತಾಯವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕಳೆದ ಸಾಲಿನ ವಾಸ್ತವ ಅದಾಯ ಮತ್ತು ವೆಚ್ಚವನ್ನು ಗಮನದಲ್ಲಿರಿಸಿಕೊಂಡು ಈ ಬಾರಿಯ ಆಯವ್ಯಯ ತಯಾರಿಸಲಾಗಿದೆ. ನಗರಸಭೆ ಕಚೇರಿ ಆಡಳಿತ ಪಾರದರ್ಶಕ ವಾಗಿಸಲು ಹಾಗೂ ತ್ವರಿತ ಸೇವೆ ಒದಗಿಸಲು ಇ-ಆಫೀಸ್ ತಂತ್ರಾಂಶದ ಮೂಲಕ ನಾಗರೀಕ ಸ್ನೇಹಿ ಆಡಳಿತ ನಡೆಸಲಾಗುತ್ತಿದೆ. ಸರ್ವರಿಗೂ ಸೂರು ಪರಿಕಲ್ಪನೆಯಡಿಯಲ್ಲಿ ವಸತಿರಹಿತ ನಿರಾಶ್ರಿತರಿಗೆ ಆಶ್ರಯ ತಂಗುದಾಣ ಪ್ರಾರಂಭಿಸಿದ್ದು, ಗುಣಮಟ್ಟದ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ನಗರದ ಸ್ತ್ರೀ ಸಶಕ್ತಿಕರಣಗೊಳಿಸುವ ಉದ್ದೇಶದಿಂದ ರಚಿಸಲಾದ ಮಹಿಳಾ ಸ್ವಸಹಾಯ ಸಂಘಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಒದಗಿಸುವ ಮೂಲಕ ಸರ್ಕಾರದ ಪ್ರೋತ್ಸಾಹಧನ ನೀಡಿ ಸಬಲೀಕರಣಗೊಳಿಸಲಾಗುತ್ತಿದೆ. ನಗರದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಉತ್ತೇಜಿಸಲು ನಗರಸಭೆಯಿಂದ ಕ್ರೀಡಾ ಪ್ರೋತ್ಸಾಹಧನ ನೀಡ ಲಾಗುತ್ತಿದೆ. ಕಚೇರಿ ದಾಖಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದಾಖಲಾತಿ ಕೊಠಡಿ ವಿಸ್ತರಿಸಿ ಸುರಕ್ಷತೆಗೆ ಕ್ರಮವಹಿಸಲಾಗಿದೆ ಎಂದರು.

ಸದಸ್ಯರಾದ ಬಿ.ಟಿ.ನಾಗರಾಜ್, ಆನೇಕೊಪ್ಪ ಬಸವರಾಜ್ ಹಾಗೂ ಚನ್ನಪ್ಪ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಅನುದಾನಗಳನ್ನು ಇತರೆ ಯೋಜನೆಗಳಿಗೆ ಬಳಸಬಾರದು ಎಂದು ಆಗ್ರಹಿಸಿದರು.

ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ರೈಲ್ವೆ ನಿಲ್ದಾಣದ ರಸ್ತೆಗೆ ಡಾ.ರಾಜ್ ಕುಮಾರ್ ಎಂದು ನಾಮಕರಣಗೊಳಿಸಬೇಕು. ತ್ವರಿತವಾಗಿ ಕ್ರಮಕೈಗೊಳ್ಳುವುದರ ಜೊತೆಗೆ ಎಲ್ಲಾ ಅಂಗಡಿಗಳ ನಾಮಫಲಕದಲ್ಲಿ ರಾಜ್ ಕುಮಾರ್ ರಸ್ತೆ ಎಂದು ಬರೆಸಲು ಸೂಚಿಸಲು ತಿಳಿಸಿದರು.

ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಮಾಜಿ ಅಧ್ಯಕ್ಷರುಗಳಾದ ಶೃತಿ ವಸಂತಕುಮಾರ್, ಅನುಸುಧಾ ಮೋಹನ್ ಪಳನಿ, ಗೀತಾ ರಾಜ್ ಕುಮಾರ್, ಸದಸ್ಯರಾದ ಮಣಿ, ಜಾರ್ಜ್, ಆರ್ ಮೋಹನ್ ಕುಮಾರ್, ಬಿ.ಎಂ ಮಂಜುನಾಥ್, ಶಶಿಕಲಾ ನಾರಾಯಣಪ್ಪ, ಅನುಪಮ ಚನ್ನೇಶ್, ಸುದೀಪ್ ಕುಮಾರ್, ನಾಗರತ್ನ, ರೂಪಾವತಿ, ಸವಿತ, ಉದಯಕುಮಾರ್, ರೇಖಾ ಪ್ರಕಾಶ್, ಪ್ರೇಮ ಬದರಿನಾರಾಯಣ್, ಕೋಟೇಶ್ವರ ರಾವ್, ಪಪಲ್ಲವಿ ದಿಲೀಪ್, ಮಂಜುಳ ಸುಬ್ಬಣ್ಣ, ಅನಿತ ಮಲ್ಲೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.15 ಕೋಟಿ ರು. ವಿಶೇಷ ಅನುದಾನ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಕೋರಿಕೆ ಮೇರೆಗೆ ನಗರಸಭೆಗೆ ಸರ್ಕಾರ ಜ.17ರಂದು 15 ಕೋಟಿ ರು. ವಿಶೇಷ ಅನುದಾನ ಬಿಡುಗಡೆಗೊಳಿಸಿದೆ. ಈ ಅನುದಾನವನ್ನು ನಗರಸಭೆ ಆಡಳಿತ ರಸ್ತೆ, ಚರಂಡಿ, ಕಟ್ಟಡ ಸೇರಿದಂತೆ ಇನ್ನಿತರರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಮುಂದಾಗಿದೆ. * ಪ್ರಗತಿಯಲ್ಲಿರುವ ಕಾಮಗಾರಿ ಪೂರ್ಣಗೊಳಿಸುವ ಭರವಸೆನಗರದ ಬಿ.ಎಚ್ ರಸ್ತೆ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ 12 ಅಡಿ ಎತ್ತರದ ಬಿ.ಆರ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು, ಪೂರ್ಣಗೊಳಿಸುವುದು.

ಕಾಯಂ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಗೆ ಜಿ+3 ಮಾದರಿಯ ಗುಂಪು ಮನೆ ನಿರ್ಮಾಣ ಪೂರ್ಣಗೊಂಡು ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು. ನಗರದ ವಿವಿಧೆಡೆ ಪ್ರಮುಖ ರಸ್ತೆಗಳಲ್ಲಿ ಡೆಕೋರೇಟಿವ್ ಕೊನಿಕಲ್ ಎಲೆಕ್ಟ್ರಿಕಲ್ ಪೋಲ್ ಅಳವಡಿಸಿ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು. ಕನಕ ಮಂಟಪ ಮೈದಾನದ ಹತ್ತಿರ ನಗರಸಭೆ ಅಧಿಕಾರಿಗಳು ಮತ್ತು ನೌಕರರಿಗೆ ಜಿ+3 ಮಾದರಿಯ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು. ನಗರದ ವಿವಿಧೆಡೆ ಪ್ರಮುಖ ರಸ್ತೆಗಳಲ್ಲಿ ಪುಟ್ ಪಾತ್ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು.ಅಮೃತ್ 1.0 ಮತ್ತು ಕೆ.ಎಂ.ಆರ್.ಪಿ ಯೋಜನೆಯಡಿ ಚರಂಡಿ ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು, ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವುದು.* ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ವಿಶ್ವಾಸ - ನಗರದ ವಿವಿಧಡೆ ಸೈಕಲ್ ಟ್ರ್ಯಾಕ್ ಮತ್ತು ಫುಟ್ ಪಾತ್ ನಿರ್ಮಾಣ ಹಾಗು ಮೈಸೂರಿನಲ್ಲಿರುವ ಸೈಕಲ್ ಟ್ರ್ಯಾಕ್ ಮಾದರಿಯಂತೆ ನ್ಯೂಟೌನ್ ಮಹಾತ್ಮ ಗಾಂಧಿ ಉದ್ಯಾನವನದ ಸುತ್ತಲೂ ಸೈಕಲ್ ಟ್ರ್ಯಾಕ್ ನಿರ್ಮಾಣ,ಮಾಧವ ನಗರ ಅಥವಾ ಜಟ್ ಪಟ್ ನಗರದಲ್ಲಿ ಹಾಗೂ ಬುಳ್ಳಾಪುರದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಬೊಮ್ಮನಕಟ್ಟೆ, ರಂಗಪ್ಪ, ಶಿವಾಜಿ, ಹೊಳೆಹೊನ್ನೂರು ಸೇರಿದಂತೆ ಪ್ರಮುಖ ವೃತ್ತಗಳನ್ನು ಅಭಿವೃದ್ಧಿ, ನಗರದ ಎಂ.ಎಂ ಕಾಂಪೌಂಡ್ ಹತ್ತಿರದಿಂದ ಜಟ್ ಪಟ್ ನಗರದವರೆಗೆ ಭದ್ರಾ ನದಿಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇನ್ನು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು 2 ಫ್ಯಾಬ್ರಿಕೇಟೆಡ್ ವಿಶ್ರಾಂತಿ ಕೊಟ್ಟಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.