ಭಗವದ್ಗೀತೆ ವಿಶ್ವ ಗ್ರಂಥ, ಸಂಸ್ಕೃತ ವಿಶ್ವ ಭಾಷೆ: ಪುತ್ತಿಗೆ ಶ್ರೀ

KannadaprabhaNewsNetwork | Published : Oct 27, 2024 2:21 AM

ಸಾರಾಂಶ

ಕೃಷ್ಣಮಠದ ರಾಜಾಂಗಣದಲ್ಲಿ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಭಗವದ್ಗೀತೆ ವಿಶ್ವ ಗ್ರಂಥವಾಗಿದೆ, ಸಂಸ್ಕೃತ ವಿಶ್ವ ಭಾಷೆಯಾಗಿದೆ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.ಶನಿವಾರ ಕೃಷ್ಣಮಠದ ರಾಜಾಂಗಣದಲ್ಲಿ ಸಂಪನ್ನಗೊಂಡ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ವಿಶ್ವದ ಬೇರೆ ಎಲ್ಲಾ ದೇಶಗಳಲ್ಲಿ ಒಂದೇ ಧರ್ಮದ ಆಚರಣೆ ಇರುತ್ತದೆ, ಆದರೆ ಭಾರತದಲ್ಲಿ ಮಾತ್ರ ಎಲ್ಲಾ ಧರ್ಮಗಳ ಆಚರಣೆ ನಡೆಯುತ್ತದೆ. ಇದು ಭಾರತದ ವಸುದೈವ ಕುಟುಂಬಕಂ ತತ್ವವಾಗಿದೆ. ಈ ತತ್ವಕ್ಕೆ ಭಗವದ್ಗೀತೆಯೇ ಮೂಲವಾಗಿದೆ ಎಂದರು.ಆಂಗ್ಲವೂ ಸೇರಿದಂತೆ ಎಲ್ಲಾ ಭಾಷೆಗಳಿಗೂ ಸಂಸ್ಕೃತವೇ ಮೂಲವಾಗಿದೆ. ಯಾಕೆಂದರೆ ಸಂಸ್ಕೃತ ದೇವಭಾಷೆಯಾಗಿದೆ ಎಂದವರು ವಿಶ್ಲೇಷಿಸಿದರು.

ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು. ಪೂನಾ ವಿಶ್ವ ವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕಿ ಪ್ರೊ. ಸರೋಜಾ ಭಾಟೆ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕೃತಕ್ಕೆ ನೀಡಿದ ಕೊಡುಗೆಗಾಗಿ ವಿದ್ವಾಂಸ ದಿನೇಶ್‌ ಕಾಮತ್ ಅವರಿಗೆ ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ ವತಿಯಿಂದ ಸಂಸ್ಕೃತ ಸೇವಾ ವಿಭೂತಿ ಬಿರುದಿನೊಂದಿಗೆ ಗೌರವಿಸಲಾಯಿತು.ವಿಶ್ವಸಂಸ್ಥೆಯಲ್ಲಿ ಪುತ್ತಿಗೆ ಶ್ರೀಗಳು ಮಾಡಿದ ಉಪನ್ಯಾಸಗಳ ಸಂಗ್ರಹ ಗ್ರಂಥವನ್ನು ದೆಹಲಿಯ ಕೇಂದ್ರೀಯ ಸಂಸ್ಕೃತ ವಿ.ವಿ.ಯ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅವರು ಬಿಡುಗಡೆ ಮಾಡಿದರು.ಭಾರತೀಯ ವಿದ್ವತ್ ಪರಿಷತ್ ಮುಖ್ಯಸ್ಥ ಮಹಾಮಹೋಪಾಧ್ಯಾಯ ಪ್ರೊ. ಕೊರಾಡ ಸುಬ್ರಹ್ಮಮಣ್ಯಂ, ಸಂಘಟನಾ ಕಾರ್ಯದರ್ಶಿ ವೀರನಾರಾಯಣ ಪಾಂಡುರಂಗಿ, ಎಐಒಸಿಯ ಪ್ರಧಾನ ಕಾರ್ಯದರ್ಶಿ ಕವಿತಾ ಹೊಳೆ, ಉಪಾಧ್ಯಕ್ಷ ಪ್ರೊ. ಅರುಣರಂಜನ್ ಮಿಶ್ರ ಇದ್ದರು.ಸ್ಥಳೀಯ ಕಾರ್ಯದರ್ಶಿ ಪ್ರೊ. ಶಿವಾನಿ ಸಮ್ಮೇಳನದ 3 ದಿನಗಳ ವರದಿ ಮಂಡಿಸಿದರು. ಪುತ್ತಿಗೆ ಮಠದ ಆಸ್ಥಾನವಿದ್ವಾಂಸ ಡಾ. ಗೋಪಾಲ್ ಆಚಾರ್ಯ ಸ್ವಾಗತಿಸಿದರು. ಡಾ.ಶ್ರೀನಿವಾಸ ಆಚಾರ್ ಮತ್ತು ಡಾ. ಶ್ರುತಿ ಎಚ್.ಕೆ. ಕಾರ್ಯಕ್ರಮ ನಿರೂಪಿಸಿದರು.

Share this article