ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಕುರುಹಿನಶೆಟ್ಟಿ ಜನಾಂಗದ ಶ್ರೀ ರಾಮಮಂದಿರದಲ್ಲಿ ೯೬ನೇ ವರ್ಷದ ಧನುರ್ಮಾಸ ತಿಂಗಳ ಭಜನಾ ಮಹೋತ್ಸವವು ಡಿ. ೧೭ರಂದು ಪ್ರಾರಂಭಗೊಂಡಿದ್ದು, ಸಂಪ್ರದಾಯದಂತೆ ಶ್ರೀರಾಮನ ಭಕ್ತರು ತೊಡಗಿಸಿಕೊಂಡು ಸಂಸ್ಕೃತಿಯ ಪಾಲನೆ ಮಾಡುವ ಜತೆಗೆ ಭಜನಾ ಮಹೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುತ್ತಾ ಸಾಗಿದ ಆಚರಣೆಯು ಸಂಕ್ರಾಂತಿಯ ಹಬ್ಬದ ದಿನದಂದು ಸಂಪನ್ನವಾಯಿತು.
ಧರ್ನುಮಾಸ ಭಜನಾ ಉತ್ಸವವನ್ನು ೧೯೨೮ರಲ್ಲಿ ದಿ. ಶ್ರೀನಿವಾಸ್, ನಾಗರಾಜ್, ರಂಗಸ್ವಾಮಿ, ಕೃಷ್ಣಪ್ಪ, ಪುಟ್ಟಸ್ವಾಮಿ, ವಸಂತಯ್ಯ ಹಾಗೂ ಇತರರು ಪ್ರಾರಂಭಿಸಿದ್ದರು. ಅಂದಿನಿಂದ ನಿರಂತರವಾಗಿ ಜರುಗುತ್ತಿರುವ ಭಜನೆ ಉತ್ಸವವು ಕಳೆದ ೩೮ ವರ್ಷಗಳಿಂದ ಹಿರಿಯರಾದ ಪುಟ್ಟಣ್ಣಶೆಟ್ಟರು, ಜಯರಾಮ, ಕೃಷ್ಣಮೂರ್ತಿ, ರಂಗಸ್ವಾಮಿ ಹಾಗೂ ಇತರರ ಮಾರ್ಗದರ್ಶನದಲ್ಲಿ ಜರುಗುತ್ತಿದೆ. ಪ್ರತಿನಿತ್ಯ ಮುಂಜಾನೆ ೫ ಗಂಟೆಗೆ ಪ್ರಾರಂಭಗೊಳ್ಳುವ ಭಜನಾ ಉತ್ಸವವು ಕೊಲ್ಲರಾಯನ ಬೀದಿ, ಕುಂಬಾರ ಬೀದಿ, ಪೇಟೆ ಮುಖ್ಯ ರಸ್ತೆ, ಜೈನಿಗರ ಬೀದಿ ಮೂಲಕ ಸಾಗಿ, ಎದುರು ಮುಖ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕಂಚುಗಾರರ ಬೀದಿಯ ಮೂಲಕ ಆಗಮಿಸಿ, ಶ್ರೀ ರಾಮಮಂದಿರಲ್ಲಿ ಮಂಗಳಾರತಿ ನಂತರ ಭಜನಾ ಉತ್ಸವ ಸಂಪನ್ನಗೊಳ್ಳುತ್ತದೆ. ಭಜನಾ ಉತ್ಸವದಲ್ಲಿ ಗಾಯಕರಾದ ಗುರುರಾಜ್, ನಾಗರಾಜ್, ನರಸಿಂಹಮೂರ್ತಿ ಶಾಸ್ತ್ರಿ, ರಮೇಶ್, ಧನಂಜಯ ಹಾಗೂ ಚೈತ್ರ ಅವರ ಗಾಯನಕ್ಕೆ ಹಾರ್ಮೋನಿಯಂ ನುಡಿಸುವ ಹರ್ಷಿತ್ ಹಾಗೂ ಗಿರೀಶ್ ಮತ್ತು ತಬಲ ನುಡಿಸುವ ಧನಂಜಯ ಹಾಗೂ ಗೋಪಾಲಕೃಷ್ಣ ಭಜನಾ ಮಹೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುತ್ತಿದ್ದಾರೆ.ಸುದರ್ಶನ್, ನರಸಿಂಹ, ಕೃಷ್ಣಪ್ಪ, ರಾಘವೇಂದ್ರ, ಮನುಕುಮಾರ್, ಯೋಗನರಸಿಂಹ, ಪುಟ್ಟರಾಜು, ಕೃಷ್ಣಕಾಂತ್, ಶ್ರೀನಿವಾಸ್ ಹಾಗೂ ಕುರುಹಿನಶೆಟ್ಟಿ ಜನಾಂಗ ಕಮಿಟಿ ಸದಸ್ಯರು, ಜೈ ಮಾರುತಿ ಯುವಕರ ಸಂಘದ ಅಧ್ಯಕ್ಷ ಹಾಗೂ ಸದಸ್ಯರು, ಕುರುಹಿನಶೆಟ್ಟಿ ಯುವಕರ ಸಂಘದ ಅಧ್ಯಕ್ಷ ಹಾಗೂ ಸದಸ್ಯರು, ಮಿತ್ರ ವೃಂದದ ಅಧ್ಯಕ್ಷ ಹಾಗೂ ಸದಸ್ಯರು ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ಹಾಗೂ ಸದಸ್ಯರು, ಎದುರುಮುಖ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯರು, ಇತರರು ಭಜನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.