ಭಾರತಾಂಬೆಯ ಸಿಂದೂರ ಮುಟ್ಟಿದ್ರೆ ಪಾಕ್ ಮಾಯ

KannadaprabhaNewsNetwork | Published : May 21, 2025 2:02 AM
ಶಿವಮೊಗ್ಗ: ಭಾರತ ಮಾತೆಯ ಸಿಂದೂರವನ್ನು ಮುಟ್ಟಲು ಬಂದರೆ ಪಾಕಿಸ್ತಾನ ಭೂಪಟದಿಂದಲೇ ಮಾಯವಾಗಲಿದೆ ಎಂಬ ಸಂದೇಶವನ್ನು ನಮ್ಮ ಭಾರತೀಯ ಸೇನೆ ಈಗಾಗಲೇ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Follow Us

ಶಿವಮೊಗ್ಗ: ಭಾರತ ಮಾತೆಯ ಸಿಂದೂರವನ್ನು ಮುಟ್ಟಲು ಬಂದರೆ ಪಾಕಿಸ್ತಾನ ಭೂಪಟದಿಂದಲೇ ಮಾಯವಾಗಲಿದೆ ಎಂಬ ಸಂದೇಶವನ್ನು ನಮ್ಮ ಭಾರತೀಯ ಸೇನೆ ಈಗಾಗಲೇ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದಲ್ಲಿ ಮಂಗಳವಾರ ಶಿವಮೊಗ್ಗ ನಾಗರಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ವಿಜಯ ತಿರಂಗಾಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುತಾತ್ಮ ಸೈನಿಕರಿಗೆ ಮತ್ತು ವಿಜಯ ತಂದುಕೊಟ್ಟ ವೀರ ಸೈನಿಕರಿಗೆ ಮತ್ತು 26 ಪ್ರವಾಸಿಗರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ವಿಶ್ವಾಸ ತುಂಬಲು ಈ ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ನಮ್ಮ ತಾಯಂದಿರು ಸಿಂದೂರಕ್ಕಾಗಿ ಮತ್ತು ನಮ್ಮ ದೇಶದ ಮುಂದಿನ ಭವಿಷ್ಯಕ್ಕಾಗಿ ಚಳಿ, ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಗಡಿ ಕಾಯುತ್ತಿರುವ ಸೈನಿಕರಿಗೆ ಧೈರ್ಯ ತುಂಬಲು ದೇಶಾದ್ಯಂತ ಈ ಯಾತ್ರೆ ಹಮ್ಮಿಕೊಂಡಿದ್ದು, ದೇಶದ ಜನರಲ್ಲಿ ಇಮ್ಮಡಿ ಉತ್ಸಾಹ ತುಂಬಿ ದೇಶಸೇವೆ ಬಗ್ಗೆ ಅರಿವು ಮೂಡಿಸಿದಂತಾಗಿದೆ ಎಂದರು.

ಮೋದಿ ಹೆಡ್‌ಲೈನ್ ಮಾತ್ರ ಎಂದವರಿಗೆ ಡೆಡ್‌ಲೈನ್ ಗೊತ್ತಿದೆ ಎಂದು ತೋರಿಸಿದ್ದಾರೆ. ನಮ್ಮ ದೇಶದ ನೀರು ಕುಡಿದು, ವಿಷ ಕಕ್ಕುವ ಎಲ್ಲಾ ದೇಶದ್ರೋಹಿಗಳಿಗೆ ಮತ್ತು ಒಳಗಿನ ಉಗ್ರಗಾಮಿಗಳಿಗೆ ಎಚ್ಚರಿಕೆ ನೀಡಲಾಗಿದೆ. 2008 ರಿಂದ 2014ರವರೆಗೆ ದೇಶವನ್ನು ಆಳಿದವರು ದೇಶದಲ್ಲಿ ಸಾವಿರಕ್ಕೂ ಹೆಚ್ಚು ನಾಗರಿಕರು ಮತ್ತು ಸೈನಿಕರನ್ನು ಕಳೆದುಕೊಂಡಾಗ ಅವರನ್ನು ಬಲಿಕೊಟ್ಟು ಶಾಂತಿಮಂತ್ರ ಜಪಿಸುತ್ತಿದ್ದರು. ನಮ್ಮ ಮುಖ್ಯಮಂತ್ರಿ ಹಾಗೂ ಕೋಲಾರದ ಶಾಸಕರೊಬ್ಬರು ಹಗುರವಾಗಿ ಮಾತನಾಡಿದ್ದಾರೆ. ಅವರ ಬಾಯನ್ನು ಮುಚ್ಚಿಸುವ ಕೆಲಸ ನಾಡಿನ ಜನ ಈ ತಿರಂಗಾಯಾತ್ರೆಯ ಮೂಲಕ ಮಾಡಿದ್ದಾರೆ ಎಂದರು.

ಪ್ರೊ.ಪುನೀತ್‌ಕುಮಾರ್ ಮಾತನಾಡಿ, ಹಿಂದೆ ನಮ್ಮ ದೇಶದಲ್ಲಿ ಸಿಂಹಸೈನ್ಯ ಇದ್ದರೂ ನಾಯಕತ್ವ ಸಿಂಹದ್ದು ಆಗಿರಲಿಲ್ಲ. ಈಗ ಸಿಂಹಸೈನ್ಯಕ್ಕೆ ಸಿಂಹದ ನಾಯಕತ್ವವೇ ಸಿಕ್ಕಿದೆ. ಹಲವಾರು ಭಯೋತ್ಪಾದಕ ದಾಳಿಗೆ ಬಡ್ಡಿ ಸಮೇತ ತಕ್ಕ ಉತ್ತರ ನೀಡಲಾಗಿದೆ. ರೆಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಆದಾಗ, ಚೌಕಿದಾರ್ ಚೋರ್ ಎಂದವರು ಈಗ ಚೌಕಿದಾರನ ತಾಕತ್ತನ್ನು ಕಂಡಿದ್ದಾರೆ. ನಮ್ಮ ರೆಫೇಲ್, ಹ್ಯಾಮರ್, ಸ್ಕಾಲ್, ಕಾಮಿರೇಟ್ ಡ್ರೋಣ್‌ಗಳು ಹಾಗೂ ಬ್ರಹ್ಮೋಸ್ ಕ್ಷಿಪಣಿ ಚೈನಾದ ರಾಡರ್‌ಗಳು ಕೂಡ ಗುರುತಿಸಲಾಗದಂತಹ ಶಬ್ದಕ್ಕಿಂತ ವೇಗವಾಗಿ ಗರ್ಜಿಸಿ, ಶತ್ರುಪಾಳೆಯವನ್ನು ದೇಶದ ಮೇಲೆ ಕಣ್ಣೆತ್ತಿ ನೋಡದಂತೆ ಮಾಡಿದೆ. ಮೋದಿ ಎಪ್ಪತ್ತೊಂದು ದೇಶಕ್ಕೆ ಹೋಗಿ ಬಂದಿದ್ದು, ಎಲ್ಲಾ ದೇಶಗಳು ಮೋದಿಪರ ನಿಂತಿವೆ. ಇದು ನಾಯಕತ್ವ ಎಷ್ಟು ಅಗತ್ಯ ಎಂಬುದನ್ನು ವಿಶ್ವಕ್ಕೆ ತೋರಿಸಿದೆ ಎಂದರು.

ಪತ್ರಕರ್ತೆ ಶೋಭಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ದಕ್ಷಿಣಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್, ಪೂರ್ಣ ಭಂಡಾರ್ಕರ್ ಇದ್ದರು.

ವೇದಿಕೆಯ ಮುಂಭಾಗದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಎಸ್.ದತ್ತಾತ್ರಿ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ವಿರುಪಾಕ್ಷಪ್ಪ, ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್, ಮಾಲ್ತೇಶ್, ಬಳ್ಳೇಕೆರೆ ಸಂತೋಷ್, ಶಾಂತಾ ಸುರೇಂದ್ರ, ರಶ್ಮಿ ಶ್ರೀನಿವಾಸ್, ರಮೇಶ್ ಮತ್ತಿತರರು ಇದ್ದರು.

ತಿರಂಗಾ ಯಾತ್ರೆಗೆ ಮಳೆಯ ಸಿಂಚನಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಗೋಪಿ ವೃತ್ತದ ವರೆಗೆ ಮಂಗಳವಾರ ನಡೆದ ತಿರಂಗ ಯಾತ್ರೆಗೆ ಮಳೆಯ ಸಿಂಚನವಾಯಿತು. ಸುರಿಯುವ ಮಳೆಯಲ್ಲೂ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ಜೈ ಘೋಷ ಹಾಕುತ್ತ ಹೆಜ್ಜೆ ಹಾಕಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಧನಂಜಯ್ ಸರ್ಜಿ, ನಿವೃತ್ತ ಯೋಧರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಮೆರವಣಿಗೆಯಲ್ಲಿ ಭಾಗಿಯಾದ್ದರು.

ಕಾರ್ಯಕರ್ತ ಉತ್ಸಾಹ ಕಂಡು ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ ಸೇರಿದಂತೆ ಬಿಜೆಪಿಯ ಗಣ್ಯರು ಮಳೆಯಲ್ಲೇ ಕುಣಿದು ಕುಪ್ಪಳಿಸಿದರು. ಗೋಪಿ ವೃತ್ತದ ಬಳಿ ಸಾರ್ವಜನಿಕರು ಜೈಕಾರ ಘೋಷಣೆ ಕೂಗಿದರು.