ರಾಮನಗರ: ಬಿಡದಿ ಪಟ್ಟಣದ ಮುಖ್ಯರಸ್ತೆಯಲ್ಲಿ ಅರಳಿಮರದ ಹತ್ತಿರ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿನ ಮಹಾದ್ವಾರ (ಸ್ವಾಗತ ಕಮಾನು) ನಿರ್ಮಾಣಕ್ಕೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಿಡದಿಯಲ್ಲಿ ಡಾ.ಶ್ರೀ. ಶಿವಕುಮಾರ ಸ್ವಾಮೀಜಿಯವರ ಮಹಾದ್ವಾರದ ಶಂಕುಸ್ಥಾಪನೆಗೆ ಶ್ರದ್ದೆ, ಉತ್ಸಾಹ, ಶ್ರಮ ಎಲ್ಲದಕ್ಕಿಂದ ಮುಖ್ಯವಾಗಿ ಐಕ್ಯತೆಯಿಂದ ಎಲ್ಲಾ ಯುವಕರು ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಈ ಐಕ್ಯತೆಯನ್ನು ಅಳವಡಿಸಿಕೊಂಡು ಅನ್ಯೋನ್ಯವಾಗಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಬಿಜಿಎಸ್ ವೃತ್ತದಲ್ಲಿ ಆದಿಚುಚನಗಿರಿ ಕ್ಷೇತ್ರದ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಮಹಾದ್ವಾರವಿದೆ. ಈಗ ಇದರ ಸಮೀಪದಲ್ಲಿಯೇ ಡಾ.ಶ್ರೀ ಶಿವಕುಮಾರ ಸ್ವಾಮೀಜಿರವರ ಮಹಾದ್ವಾರ ನಿರ್ಮಾಣ ಮಾಡುತ್ತಿರುವುದು ಸಂತಸ ಮೂಡಿಸಿದೆ. ಇನ್ನೊಂದು ವರ್ಷದಲ್ಲಿ ಈ ಮಹಾದ್ವಾರದ ಕೆಲಸ ಮುಗಿಯಬೇಕು. ಇದನ್ನು ಸವಾಲು ಎಂದು ಭಾವಿಸಿ ಕೆಲಸ ಮಾಡಬೇಕು ತಿಳಿಸಿದರು.ದೂರದೃಷ್ಟಿಯುಳ್ಳ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಪ್ರಯಾಣ ಮಾಡುವಾಗ ಇದೇ ಗ್ರಾಮದಲ್ಲಿ ವಿಶ್ರಾಂತಿಯನ್ನು ಪಡೆದು ಹೋಗುತ್ತಿದ್ದರಂತೆ. ಅಂತಹ ವಿಶೇಷ ಮಹತ್ವ ಪಡೆದ ಗ್ರಾಮ ಇದಾಗಿದೆ. ಮೈಸೂರು ಮಹಾರಾಜರು ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿನ ಸಮಾಜಪರ ಕಾರ್ಯಗಳನ್ನು ನಾವುಗಳು ಮರೆಯುವಂತಿಲ್ಲ ಎಂದು ಶ್ರೀಗಳು ಹೇಳಿದರು.
ಪುರಸಭೆ ಸದಸ್ಯ ಬಿ. ಜೆ.ಲೋಹಿತ್ ಕುಮಾರ್ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಮಹಾದ್ವಾರ ನಿರ್ಮಾಣ ಭೂಮಿ ಪೂಜಾ ಕಾರ್ಯಕ್ಕೆ ಜನರು ಪಕ್ಷಾತೀತ, ಜಾತ್ಯತೀತವಾಗಿ ಬೆಂಬಲ ನೀಡಿದ್ದಾರೆ. ಮುಂದಿನ ಮೂರು ತಿಂಗೊಳೊಳಗೆ ಮಹಾದ್ವಾರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಮಹಾದ್ವಾರ ಭೂಮಿಪೂಜೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತ್ಯುತ್ಸವ ಪ್ರಯುಕ್ತ ಬಿಜಿಎಸ್ ವೃತ್ತದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
5ಕೆಆರ್ ಎಂಎನ್ 1,2.ಜೆಪಿಜಿ