ಕನ್ನಡಪ್ರಭ ವಾರ್ತೆ ಉಳ್ಳಾಲ
ಸವಾರನ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ಗೆ ಡಿಕ್ಕಿ ಹೊಡೆದ ಮತ್ತೊಂದು ರಸ್ತೆಗೆ ಹಾರಿ ಬಿದ್ದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಸವಾರ - ಸಹಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಉಳ್ಳಾಲದ ನಾಟೆಕಲ್ ಬಳಿ ಭಾನುವಾರ ನಡೆದಿದೆ. ಮಂಗಳೂರು ನಗರದ ಬೋಂದೆಲ್ ನಿವಾಸಿ ಶ್ರೀನಿಧಿ (29) ಬೈಕ್ ಸವಾರ ಯತೀಶ್ ದೇವಾಡಿಗ ಮೃತರು.ಭಾನುವಾರ ಮುಡಿಪುವಿನಲ್ಲಿನ ಸಂಬಂಧಿಕರ ಗೃಹಪ್ರವೇಶಕ್ಕೆ ನಗರದ ಬೋಂದೆಲ್ ನಿವಾಸಿ ದಿಕ್ಷೀತ್ ಅವರ ಪತ್ನಿ ತೋಕೂರು ಬಸ್ ನಿಲ್ದಾಣದ ಬಳಿಯ ನಿವಾಸಿ, ಶ್ರೀನಿಧಿ (29) ಸವಾರ ಯತೀಶ್ ದೇವಾಡಿಗ ಅವರೊಂದಿಗೆ ಬೈಕ್ ನಲ್ಲಿ ಹೋಗಿದ್ದರು. ವಾಪಸಾಗುತ್ತಿದ್ದ ವೇಳೆ ನಾಟೆಕಲ್ ಗ್ರೀನ್ ಗೌಂಡ್ ಸಮೀಪ ಬೈಕ್ ಸವಾರನ ನಿಯಂತ್ರಣ ತಪ್ಪಿ ಡಿವೈಡರ್ಗೆ ಬಡಿದು ಡಿವೈಡರ್ ಹಾರಿ ಮತ್ತೊಂದು ಬದಿಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಅಪಘಾತ ಸಂದರ್ಭದಲ್ಲಿ ಇನ್ನೊಂದು ಬದಿಯ ರಸ್ತೆಗೆ ಬಿದ್ದ ಇವರಿಬ್ಬರಲ್ಲಿ ಒಬ್ಬರ ಮೇಲೆ ಅದೇ ಸಂದರ್ಭ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಹಾಯ್ದಿರುವ ಸಾಧ್ಯತೆಯಿದೆ. ಇದು ಹಿಂಬದಿಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶ್ರೀನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯತೀಶ್ ಕೂಡಾ ಮೃತಪಟ್ಟಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶ್ರೀನಿಧಿಗೆ ಇಬ್ಬರು ಚಿಕ್ಕ ಮಕ್ಕಳಿದ್ದು ಯತೀಶ್ ದೇವಾಡಿಗ ಹೆತ್ತವರಿಗೆ ಒಬ್ಬನೇ ಪುತ್ರನಾಗಿದ್ದಾನೆ.
ಸ್ಕೂಟರ್-ಜೀಪ್ ಡಿಕ್ಕಿ- ಇಬ್ಬರು ಸಾವು:ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಸೂರಜ್ ಇಂಟರ್ ನ್ಯಾಷನಲ್ ಹೊಟೇಲ್ ಜಂಕ್ಷನ್ ಬಳಿ ಸ್ಕೂಟರ್ ಗೆ ಜೀಪು ಡಿಕ್ಕಿಯಾಗಿ ಗಾಯಗೊಂಡು ಇಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಸ್ಕೂಟರ್ ಸವಾರ ಕುಳಾಯಿ ಹೊನ್ನ ಕಟ್ಟೆ ವಿದ್ಯಾನಗರ ನಗರ ನಿವಾಸಿ ನೋಣಯ್ಯ ಬಂಗೇರ (72) ಮತ್ತು ಸಹ ಸವಾರ ಸುರತ್ಕಲ್ ಕಾನ ನಿವಾಸಿ ನಿಯಾಜ್ (47) ಮೃತರು.
ಮಂಗಳೂರಿನಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಜೀಪ್ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಸವಾರ ಬೀಡಿ ಕಾಂಟ್ರಾಕ್ಟರ್ ನೋಣಯ್ಯ ಬಂಗೇರ ಹಾಗೂ ಸಹ ಸವಾರ ನಿಯಾಜ್ ರಸ್ತೆಗೆ ಎಸೆಯಲ್ಪಟ್ಟುಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಾರು ಚಾಲಕ ಮಂಗಳೂರು ನಿವಾಸಿ ಪ್ರತಾಪ್ ವಿರುದ್ಧ ಪ್ರಕರಣ ದಾಖಲಾಗಿದೆ.