ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತನ್ನ ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್ಗೆ ಮನೆ ಮಾಲೀಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ತಾಲೂಕಿ ಮಾದಾಪುರದಲ್ಲಿ ಬುಧವಾರ ನಡೆದಿದೆ.ಜಂಬೂರು ನಿವಾಸಿ ಜಯಾನಂದ ಎಂಬವರು ತಮ್ಮ ಬೈಕ್ನ್ನು ಮಾದಾಪುರದ ಶಾದಿ ಮಹಲ್ ಮುಂಭಾಗ ಇರುವ ಪೃಥ್ವಿ ಎಂಬವರ ಮನೆಯ ಮುಂಭಾಗ ನಿಲ್ಲಿಸಿ, ಶಾದಿಮಹಲ್ನಲ್ಲಿ ನಡೆಯುತ್ತಿದ್ದ ರಕ್ತದಾನ ಶಿಬಿರಕ್ಕೆ ತೆರಳಿದ್ದರು. ಮನೆಯ ಗೇಟ್ ಮುಂಭಾಗ ಬೈಕ್ ನಿಲ್ಲಿಸಿದ್ದಕ್ಕೆ ಸಿಟ್ಟುಗೊಂಡ ಪೃಥ್ವಿ ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೈಕ್ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಕೆಲ ಮಂದಿ ತಕ್ಷಣ ನೀರು ಸುರಿದು ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಬೈಕ್ಗೆ ತೀವ್ರ ತರದ ಹಾನಿಯಾಗಿದೆ.
ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪೃಥ್ವಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಘಟನೆಯ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಶಾಸಕ ಡಾ. ಮಂತರ್ ಗೌಡ ಹುಟ್ಟುಹಬ್ಬದ ಅಂಗವಾಗಿ ಮಾದಾಪುರ ವಲಯ ಕಾಂಗ್ರೆಸ್ನಿಂದ ಶಾದಿ ಮಹಲ್ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತ ಜಯಾನಂದ ಅವರು ರಕ್ತದಾನ ಮಾಡಲು ತೆರಳುವ ಸಂದರ್ಭ, ತಮ್ಮ ಬೈಕ್ನಲ್ಲಿ ಪೃಥ್ವಿ ಅವರ ಮನೆಯ ಮುಂಭಾಗದ ಗೇಟ್ ಬಳಿ ನಿಲ್ಲಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
--------------------------------------ಸಾಲಬಾಧೆ: ಕೋವಿಯಿಂದ ಗುಂಡಿಕ್ಕಿ ರೈತ ಆತ್ಮಹತ್ಯೆ
ಶನಿವಾರಸಂತೆ: ವ್ಯವಸಹಾಯಕ್ಕಾಗಿ ವಿವಿಧ ಬ್ಯಾಂಕ್ಗಳಲ್ಲಿ ಸಾಲ ಮತ್ತು ಕೈಸಾಲ ಮಾಡಿಕೊಂಡಿದ್ದ ರೈತ ಸಾಲಬಾಧೆಯಿಂದ ನೊಂದು ಮನೆಯಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಬೆಳಗ್ಗೆ ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಹೊಸಗುತ್ತಿ ಗ್ರಾಮದಲ್ಲಿ ನಡೆದಿದೆ.ಹೊಸಗುತ್ತಿ ಗ್ರಾಮದ ಮಜೀದ್ (45) ಆತ್ಮಹತ್ಯೆ ಮಾಡಿಕೊಂಡ ರೈತ. ಮಜೀದ್ ಕಾಫಿತೋಟದ ನಿರ್ವಹಣೆ ಸೇರಿದಂತೆ ಶುಂಠಿ ಇನ್ನಿತ್ತರ ಕೃಷಿ ಬೆಳೆಯ ನಿರ್ವಹಣೆಗಾಗಿ ವಿವಿಧ ಬ್ಯಾಂಕ್ಗಳಲ್ಲಿ ಕೃಷಿ ಸಾಲ ಸೇರಿದಂತೆ ಕೈಸಾಲ ಮಾಡಿಕೊಂಡಿದ್ದರು. ಜೊತೆಯಲ್ಲಿ ಹಲವು ದಿನಗಳಿಂದ ಅನಾರೋಗ್ಯದಿಂದಲೂ ಬಳಲುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಬುಧವಾರ ಮುಂಜಾನೆ ಮಜೀದ್ ತನ್ನ ಕೋವಿಯಿಂದ ಮನೆಯೊಳಗೆ ಗುಂಡು ಹೊಡೆದುಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಮಜೀದ್ ಅವರನ್ನು ತಕ್ಷಣ ಅರಕಲಗೂಡು ಆಸ್ಪತ್ರೆಗೆ ಕರೆದೊಯ್ದರೂ ಆಸ್ಪತ್ರೆ ತಲುಪುತ್ತಿದ್ದಂತೆ ಮಜೀದ್ ಮೃತಪಟ್ಟಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.