ಕನ್ನಡಪ್ರಭ ವಾರ್ತೆ ಕಂಪ್ಲಿ
2025ರ ಮಾ. 1ರಂದು ಪಟ್ಟಣದ ವಾಲ್ಮೀಕಿ ವೃತ್ತದ ಮುಂದೆ ನಿಲ್ಲಿಸಿದ್ದ ವ್ಯಕ್ತಿಯೊಬ್ಬರ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಆತ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದ. ಈ ಒಂದು ಬೈಕ್ ಕಳ್ಳತನ ಪ್ರಕರಣ ಪತ್ತೆಗಾಗಿ ಪಿಐ ಕೆ.ಬಿ. ವಾಸುಕುಮಾರ್ ಮತ್ತು ಪೊಲೀಸರ ತಂಡ ರಚನೆಗೊಂಡಿತ್ತು.
ಗುರುವಾರ ಪಟ್ಟಣದ ಕಮ್ಮವಾರಿ ಭವನದ ಮುಂದೆ ವಾಹನ ತಪಾಸಣೆ ಸಂದರ್ಭ ಕಳುವಾದ ಬೈಕ್ನೊಂದಿಗೆ ಆರೋಪಿಗಳಾದ ದಿನೇಶ, ಯಶ್ವಂತರನ್ನು ಪೊಲೀಸರು ಪತ್ತೆ ಹಚ್ಚಿ ಸ್ವಾಧೀನಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದರು.ಆಗ ಕಂಪ್ಲಿಯ ಎಲ್.ಜಿ. ಕಾರ್ತಿಕ, ಕೃಷ್ಣ, ಮೆಟ್ರಿ ಬಾಷರೊಂದಿಗೆ ಇಬ್ಬರು ಸೇರಿ ಕಳೆದ ಒಂದು ವರ್ಷದಿಂದ ಅಂಜನಾದ್ರಿ ಬೆಟ್ಟ, ತುಮಕೂರು, ಚಿತ್ರದುರ್ಗ, ದಮ್ಮೂರು ಬಸ್ನಿಲ್ದಾಣ, ಅಂಬಾಮಠ, ಆಂಧ್ರದ ವಿಡಪನಕಲ್ಲು, ತೋರಣಗಲ್ಲು, ಮುನಿರಾಬಾದ್ ರೈಲ್ವೆ ಸ್ಟೇಷನ್ನಲ್ಲಿ ₹9 ಲಕ್ಷ ಮೌಲ್ಯದ 11 ಬೈಕ್ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. 11 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರ ಕಾರ್ಯಕ್ಕೆ ಬಳ್ಳಾರಿ ಎಸ್ಪಿ ಡಾ. ಶೋಭಾರಾಣಿ ವಿ.ಜೆ. ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ. ಈ ಸಂದರ್ಭ ತೋರಣಗಲ್ಲು ಉಪ ವಿಭಾಗದ ಡಿವೈಎಸ್ಪಿ ಪ್ರಸಾದ್ ಗೋಖಲೆ, ಕಂಪ್ಲಿ ಠಾಣೆಯ ಪಿಎಸ್ಐ ಅವಿನಾಶ್ ಕಾಂಬ್ಳೆ, ಎಎಸ್ಐ ಬಿ.ಬಸವರಾಜ್, ಎಚ್.ಸಿ. ಬಸವರಾಜ ಹಿರೇಮಠ, ಪಿಸಿಗಳಾದ ಸತ್ಯನಾರಾಯಣ, ಮಲ್ಲೇಶ ರಾಠೋಡ್, ಮುತ್ತುರಾಜ, ಸುರೇಶ, ಶರಣಪ್ಪ ಟಿ., ತಿಮ್ಮಯ್ಯ, ಪ್ರಭಾಕರ, ಗಾದಿಲಿಂಗಪ್ಪ, ವಿಶ್ವನಾಥ, ಸುದರ್ಶನ ಇದ್ದರು.ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ 3 ವಾಹನ ಜಪ್ತಿ:
ಸಿರುಗುಪ್ಪ ತಾಲೂಕು ವ್ಯಾಪ್ತಿಯಲ್ಲಿ ಅರಳಿಗನೂರು ಕಡೆಯಿಂದ ಸಿರುಗುಪ್ಪ ಪಟ್ಟಣದ ಕಡೆಗೆ ಶನಿವಾರ ಬೆಳಗಿನ ಜಾವ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ಮೂರು ವಾಹನಗಳನ್ನು ಜಪ್ತಿ ಮಾಡಿ, 385 ಅಕ್ಕಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.ಅಕ್ಕಿಯು ಸರ್ಕಾರದ ವಿವಿಧ ಯೋಜನೆಗಳಡಿ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಣೆ ಮಾಡುವ ಪಡಿತರ ಅಕ್ಕಿಯಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ವಿವಿಧ ಕಾನೂನುಗಳಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿರುಗುಪ್ಪ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಸಿರುಗುಪ್ಪ ತಾಲೂಕಿನ ಆಹಾರ ನಿರೀಕ್ಷಕ ಎಂ.ವಿಜಯ್ ಕುಮಾರ್ ತಿಳಿಸಿದ್ದಾರೆ.