ಕದಂಬ ಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಆಗ್ರಹ
ದ್ವಿಭಾಷಾ ನೀತಿ ಕಡ್ಡಾಯವಾಗಿ ಜಾರಿಗೆ ತರಬೇಕು. ಕನ್ನಡಿಗರನ್ನು ನಿಂದಿಸುವವರ ವಿರುದ್ಧ ನಾಡ ದ್ರೋಹ ಕಾಯ್ದೆ ಜಾರಿಗೊಳಿಸಬೇಕು. 2017ರ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಕಾಯ್ದೆ ಜಾರಿಗೊಳಿಸಲು ಮತ್ತು ಸರ್ಕಾರಿ ಶಾಲೆಗಳ ದುಸ್ಥಿತಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕದಂಬ ಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಎಚ್ಚರಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯಲ್ಲಿದ್ದರೂ ಕನ್ನಡ ಕಡ್ಡಾಯವಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಜತೆಗೆ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಲು ನೂತನ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಹಾಗೂ ಕನ್ನಡಿಗರನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವವರ ವಿರುದ್ಧ ನಾಡ ದ್ರೋಹ ಕಠಿಣ ಕಾನೂನು ಜಾರಿಗೊಳಿಸಬೇಕು. ಹೊರ ರಾಜ್ಯದವರು, ಬಾಂಗ್ಲಾ ದೇಶದವರು ಅಕ್ರಮವಾಗಿ ಪಡೆದಿರುವ ಸುಮಾರು 80 ಸಾವಿರ ಪಡಿತರ ಚೀಟಿ ರದ್ಧುಗೊಳಿಸಲು ತಕ್ಷಣ ಕ್ರಮವಾಗಬೇಕು ಎಂದು ಆಗ್ರಹಿಸಿದರು.ಕೇಂದ್ರ ಹೃದಯ ಯೋಜನೆ ಅಡಿಯಲ್ಲಿ ಇಮ್ಮಡಿ ಪುಲೇಶಿ ಹಾಗೂ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ಸಿದ್ದವಾಗಿದ್ದರೂ ಅನಾವರಣಗೊಳಿಸಲು ಸ್ಥಳವಕಾಶ ನೀಡದೆ ಕಳೆದ 2 ವರ್ಷಗಳಿಂದ ಬಾದಾಮಿಯ ರಾಮದುರ್ಗ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದೆ. ಇದು ಸಮಸ್ತ ಕನ್ನಡಿಗರಿಗೆ ಸರ್ಕಾರ ಮಾಡಿದ ಅಪಚಾರ ಎಂದು ಆರೋಪಿಸಿದರು.
ಕದಂಬ ನಾಡಿನ ಮಯೂರವರ್ಮ, ತಲಕಾಡು ಗಂಗರು, ಚಾಲುಕ್ಯ ಪರಮೇಶ್ವರ, ಇಮ್ಮಡಿ ಪುಲಕೇಶಿ, ರಾಷ್ಟ್ರಕೂಟದ ನೃಪತುಂಗ, ಹೊಯ್ಸಳ ವಿಷ್ಣುವರ್ಧನ ಚಕ್ರವರ್ತಿಗಳ ಜೀವನ ಚರಿತ್ರೆಗಳನ್ನು ಕನ್ನಡ ಪಠ್ಯ-ಪುಸ್ತಕದಲ್ಲಿ ಅಳವಡಿಸಬೇಕು. ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು, ನೌಕರರು ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡಬೇಕು. ಈ ಎಲ್ಲ ವಿಷಯಗಳ ಕುರಿತು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.ಇಂಗ್ಲೆಂಡ್ನಲ್ಲಿ ಇಂಗ್ಲಿಷ್, ಫ್ರಾನ್ಸ್ನಲ್ಲಿ ಫ್ರೆಂಚ್, ಕರ್ನಾಟಕದಲ್ಲಿ ಕನ್ನಡವಿರಲೇಬೇಕು. ಕನ್ನಡಿಗರೇ ಕನ್ನಡ ಬಳಸದೇ ಪರಭಾಷಿಕರ ಜೊತೆ ಅವರವರ ಭಾಷೆಯಲ್ಲೇ ಹರಕು ಮುರುಕು ಭಾಷೆ ಮಾತನಾಡುವುದನ್ನು ನಿಲ್ಲಿಸಿ. ಸಾರ್ವತ್ರಿಕವಾಗಿ ಕನ್ನಡ ಭಾಷೆಯನ್ನೇ ಬಳಸಬೇಕು. ನೀವು ಕನ್ನಡಿಗರೆ ಆಗಿದ್ದರೆ ಎಂಬ ಭಿತ್ತಿಪತ್ರ ಅಭಿಯಾನ ಪ್ರಾರಂಭಿಸಲಾಗುತ್ತದೆ ಎಂದು ಬೇಕ್ರಿ ರಮೇಶ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಗುತ್ಯಪ್ಪ ಮಾದರ, ಕೃಷ್ಣಪ್ಪ ಶೆಟ್ಟಿ, ಶಿವರಾಮ ಎಲಗೆರೆ, ಪ್ರಕಾಶ ಕಬ್ಬೇರ, ಪ್ರಶಾಂತ ಪರಿವಾರ ಮತ್ತಿತರರು ಇದ್ದರು.