ಸಾಧಕಿಯರ ಜೀವನ ಚರಿತ್ರೆ ಮಹಿಳೆಯರ ಸಾಧನೆಗೆ ಸ್ಫೂರ್ತಿ

KannadaprabhaNewsNetwork | Published : Mar 24, 2025 12:35 AM

8 ದಿನಕ್ಕೆಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಗಗನಯಾನಿ ಸುನಿತಾ ವಿಲಿಯಮ್ಸ್‌ 9 ತಿಂಗಳ ಕಾಲ ಅಲ್ಲಿಯೇ ಸಿಲುಕಿ ಸುರಕ್ಷಿತವಾಗಿ ಮರಳಿ ಬಂದಿರುವುದು ವಿಶ್ವದ ಮಹಿಳಾ ಸಮುದಾಯ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಅಕ್ಕಮಹದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ವಿವೃತ್ತ ಉಪಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

8 ದಿನಕ್ಕೆಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಗಗನಯಾನಿ ಸುನಿತಾ ವಿಲಿಯಮ್ಸ್‌ 9 ತಿಂಗಳ ಕಾಲ ಅಲ್ಲಿಯೇ ಸಿಲುಕಿ ಸುರಕ್ಷಿತವಾಗಿ ಮರಳಿ ಬಂದಿರುವುದು ವಿಶ್ವದ ಮಹಿಳಾ ಸಮುದಾಯ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಅಕ್ಕಮಹದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ವಿವೃತ್ತ ಉಪಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು. ನಗರದ ಅನ್ನಪೂಣೇಶ್ವರಿ ಹೋಟೆಲ್‌ ಸಭಾಭವನದಲ್ಲಿ ರಾಣಿ ಚನ್ನಮ್ಮ ಮಹಿಳಾ ಮಂಡಳದವರು ಶನಿವಾರ ಸಂಜೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗೆ ಸಾಕಷ್ಟು ಪ್ರೋತ್ಸಾಹವಿದೆ. ಅದರ ಸದುಪಯೋಗ ಪಡಿಸಿಕೊಳ್ಳಬೇಕು, ರಾಷ್ಟ್ರಪತಿ ದ್ರೌಪತಿ ಮುರ್ಮು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ದೆಹಲಿಯ ಸಿಎಂ ರೇಖಾಗುಪ್ತಾ, ಅವರಂತೆ ಸಾಧನೆ ಮಾಡಬೇಕು. ವೇದಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿ, 12ನೇ ಶತಮಾನದಲ್ಲಿ ಅಕ್ಕಮಹದೇವಿ, ಸ್ವತಂತ್ರ್ಯಹೋರಾಟದಲ್ಲಿ ರಾಣಿ ಚನ್ನಮ್ಮ, ಒನಕೆ ಓಬವ್ವ, ರಾಜಮಾತೆ ಜೀಜಾಬಾಯಿ, ಝಾನ್ಸಿ ರಾಣಿಯಂಥ ಸಾಧಕಿಯರ ಜೀವನ ಚರಿತ್ರೆಗಳು ಮಹಿಳೆಯರ ಸಾಧನೆಗೆ ಮಾರ್ಗದರ್ಶಕಗಳಾಗಿವೆ. ಮಹಿಳೆಯರು ಗಂಡಸರಿಗಿಂತ 8 ಪಟ್ಟು ಹೆಚ್ಚು ಕೆಲಸ ಮಾಡುತ್ತಾರೆ. ಇಬ್ಬರೂ ಸಮಾನರಾಗಿ ಹೊಂದಾಣಿಕೆಯಿಂದ ಜೀವನ ನಡೆಸಿದರೆ ಸಂಸಾರದ ರಥ ಸುಗಮವಾಗಿ ಸಾಗುತ್ತದೆ ಎಂದು ಹೇಳಿದರು.

ಈ ಬಾರಿಯ ಘೋಷವಾಕ್ಯ ಎಕ್ಸಲರೇಟ್‌ ಅ್ಯಕ್ಶನ್‌ ಎಂದಿದೆ. ಕೆಲಸದ ವೇಗ ಹೆಚ್ಚಿಸಬೇಕು. ಎಲ್ಲಾ ರಂಗಗಳಲ್ಲಿ ದಾಪುಗಾಲು ಹಾಕುತ್ತ ಮುನ್ನುಗ್ಗಬೇಕು ಎಂದು ಹೇಳಿದರು,

ಸಿಟ್ಟು, ಸೊಕ್ಕು, ಸೇಡುಗಳು ಮನಸ್ಸು, ಆರೋಗ್ಯವನ್ನು ವಿಕೃತ ಗೊಳಿಸುತ್ತವೆ. ಕಲೆ, ಕೌಶಲ, ಸೃಜನಶೀಲತೆ ಬಳಸಿಕೊಂಡು ಮರ್ಯಾದೆಯ ಚೌಕಟ್ಟಿನಲ್ಲಿದ್ದು ಆದರ್ಶ ಮಹಿಳೆಯರಾಗಿ ಹೊರಹೊಮ್ಮಬೇಕೆಂದರು.

ಮಹಿಳಾ ಮಂಡಲ ಅಧ್ಯಕ್ಷೆ ಆಶಾದೇವಿ ಗುಡಗುಂಟಿ ಮಾತನಾಡಿ, ರಾಣಿ ಚನ್ನಮ್ಮ ಮಹಿಳಾ ಮಂಡಳಿಯ ವತಿಯಿಂದ ಕೈಗೊಂಡ ಸಮಾಜ ಮುಖಿ ಕಾರ್ಯಗಳನ್ನು ವಿವರಿಸಿದರು. ರಾಜಕಾರಣದಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರಂತೆ ಸಾಧನೆ ಮಾಡಬೇಕು ಎಂದು ಹೇಳಿದರು. ಅನೇಕ ಅವಕಾಶಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕೆಂದು ಹೇಳಿದರು.

ಉಪಾಧ್ಯಕ್ಷೆಯರಾದ ಸವಿತಾ ಸನದಿ, ಕಸ್ತೂರಿ ಹೊಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಮಾಳಿ, ಆಶಾ ಶಿರಗುಪ್ಪಿ, ವೇದಿಕೆಯಲ್ಲಿದ್ದರು. ಮಹಿಳಾ ಸಾಧಕಿಯರ ವೇಶ ಭೂಷಣ ತೊಟ್ಟು ಮಹಿಳೆಯರು ಏಕಪಾತ್ರಾಭಿನಯ ಮಾಡಿದರು. ಮಹಿಳಾ ಮಂಡಳದ ಸದಸ್ಯೆಯರು ಇದ್ದರು. ಡಾ.ಅಶ್ವಿನಿ ಪೂಜಾರ ಸ್ವಾಗತಿಸಿದರು. ಪೂರ್ಣಿಮಾ ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾನಮ್ಮ ಪಂಚಗಟ್ಟಿಮಠ ಅನಿಸಿಕೆ ಹೇಳಿದರು, ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ಕವಿತಾಗಾಡಿ, ಕವಿತಾ ಹೊಟ್ಟಿ, ರಾಣಿ ಬಾಗೇವಾಡಿ, ಮಹಾನಂದಾ ಪಾಂಚಾಳ, ಕಸ್ತೂರಿ ಹೊಟ್ಟಿ ಅವರಿಗೆ ಬಹುಮಾನ ನೀಡಲಾಯಿತು. ಡಾ.ಗೀತಾ ಉಮದಿ, ಆಶಾ ಸಿರಗುಪ್ಪಿ ಇದ್ದರು.

ಸ್ತ್ರೀಯರಲ್ಲಿ ಕರ್ತೃತ್ವ, ಮಾತೃತ್ವ, ನೇತೃತ್ವದ ಶಕ್ತಿ ಇದೆ. ಸಿದ್ದೇಶ್ವರ ಸ್ಮಾಮಿಗಳು ಹೇಳಿದಂತೆ ನಮ್ಮ ಸಾಧನೆ ಸದ್ದು ಮಾಡಬೇಕು, ಸದ್ದಿಲ್ಲದ ಸಾಧನೆ ಇರಬೇಕು, ಅದರಂತೆ ನಡೆದುಕೊಳ್ಳಬೇಕು, ಅಹಂಕಾರ ಇರಬಾರದು, ಸ್ವಾಭಿಮಾನ ವಿರಬೇಕು, ಮನೆ-ಮನಗಳನ್ನು ಜೋಡಿಸುವ ಕೆಲಸ ಮಹಿಳೆಯರಿಂದಾಗಬೇಕು, ನಮ್ಮ ಸಂಸ್ಕೃತಿ ಆಚಾರ-ವಿಚಾರ ಬಿಡಬಾರದು, ಸ್ತ್ರೀಸಶಕ್ತಿಕರಣದ ದುರುಪಯೋಗ ಪಡೆಸಿಕೊಳ್ಳಬಾರದು.

ಮೀನಾ ಚಂದಾವರಕರ, ಅಕ್ಕಮಹದೇವಿ ಮಹಿಳಾ ವಿವಿ ನಿವೃತ್ತ ಉಪಕುಲಪತಿ