ಗದಗ: ಪಕ್ಷಿಗಳು ನಮ್ಮ ಚೈತನ್ಯಕ್ಕೆ ಹಾಗೂ ಸದಾ ಕ್ರಿಯಾಶೀಲತೆಗೆ ಆದರ್ಶವಾಗಿವೆ. ಪ್ರಕೃತಿಯಲ್ಲಿ ಹಾರಾಡುವ ಹಕ್ಕಿಗಳಿಗೆ ನೀರು, ಕಾಳು ನೀಡಿ ಅವುಗಳ ಜೀವ ಮತ್ತು ಜೀವನಕ್ಕೆ ಸಹಕಾರ ಮಾಡಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆಯ ನಿರ್ದೇಶಕ ಸುರೇಶ ಕುಂಬಾರ ಹೇಳಿದರು.
ಮಾನವರಾದ ನಾವು ಎಲ್ಲ ಜೀವಿಗಳ ಮೇಲೆ ದಯವಿರಬೇಕು. ಅದರಂತೆ ಪಕ್ಷಿ ಪ್ರೇಮ ಎಂಬ ಪರಿಕಲ್ಪನೆ ವಿಭಿನ್ನವಾಗಿರುವ ಕಾರ್ಯಕ್ರಮವಾಗಿದ್ದು, ಬಿರು ಬಿಸಿಲಿನ ತಾಪಕ್ಕೆ ಬಳಲುವ ಹಕ್ಕಿಗಳಿಗೆ ಸಹಕಾರ ಮಾಡಿದರೆ ಪುಣ್ಯ ಗಳಿಸಿದಂತೆ. ಪಕ್ಷಿಗಳು ಕೇವಲ ಬದುಕುವದಷ್ಟೇ ಅಲ್ಲ ಮಾನವನ ಚಟುವಟಿಕೆ, ಕ್ರೀಯಾಶೀಲತೆಯಿಂದ ಬೆಳೆಯಲು ಜೀವಾಳವಾಗಿವೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಮಂಜುನಾಥ ಹುಯಿಲಗೋಳ ಮಾತನಾಡಿ, ವಿಶ್ವಕಲಾ ದಿನಾಚರಣೆಯ ರೂವಾರಿ ಲಿಯೊನಾರ್ಡಡ ವಿಂಚಿ ಈ ಜಗತ್ತು ಕಂಡ ಮಹಾನ್ ಕಲಾವಿದ ಅಂತಹ ಕಲಾವಿದರ ಜನ್ಮ ದಿನವನ್ನು ವಿಶ್ವಕಲಾ ದಿನಚರಣೆಯನ್ನಾಗಿ ಆಚರಿಸಲಾಗುತ್ತದೆ. ಮೊನಾಲಿಸಾ ಕಲಾಕೃತಿ ರಚಿಸಿದ ಕಲಾವಿದರ ಸ್ಮರಣೆಯಲ್ಲಿ ಪಕ್ಷಿ ನಿಸರ್ಗ ಸ್ಮರಿಸಲು ಚಿತ್ರಕಲಾ ಸ್ಪರ್ಧೆ ಆಯೋಜಿಸುವದು ಮತ್ತು ಪಕೃತಿಯ ಕುರಿತು ಕಾವ್ಯ ವಾಚನ ಮತ್ತು ಪಕ್ಷಿಗಳಿಗೆ ಕಾಳು ನೀರು ನೀಡುವ ಪರಿಕಲ್ಪನೆಯ ಕಾರ್ಯಕ್ರಮ ವಿಶೇಷವಾದದ್ದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿರ್ಮಲ ಸೇವಾ ಸಂಸ್ಥೆಯ ಅಧ್ಯಕ್ಷ ನಿರ್ಮಲಾ ತರವಾಡೆ ಮಾತನಾಡಿದರು. ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ, ಪ್ರಕಾಶ ಅಕ್ಕಿ, ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಮಂಜುಳಾ ವೆಂಕಟೇಶಯ್ಯ, ರಮೇಶ ಹಾದಿಮನಿ, ಸಂಸ್ಕೃತಿ, ಶಾರದಾ ಟಿ, ಎಸ್.ಎಫ್ ಬೆನಕಣ್ಣವರ, ಜಗದೀಶ ಶೀಲವಂತ, ನಿರಂಜನ ಬಗಲಿ ಉಪಸ್ಥಿತರಿದ್ದರು.