ಚಿತ್ರದುರ್ಗ: ಬ್ರಿಟಿಷರ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿ ಅಮರನಾದ ಬಿರ್ಸಾ ಮುಂಡಾ ದೇಶದ ಆದಿವಾಸಿ ಬುಡಕಟ್ಟುಗಳ ಆತ್ಮಾಭಿಮಾನದ ಪ್ರತೀಕ ಎಂದು ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಬಣ್ಣಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ವಾಲ್ಮೀಕಿ ಭವನದಲ್ಲಿ ಜನಜಾತೀಯ ಗೌರವ್ ದಿವಸ್ ಅಂಗವಾಗಿ ಆಯೋಜಿಸಲಾಗಿದ್ದ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದ ಪ್ರಾಕೃತಿಕ ಸಂಪತ್ತಿನ ಮೇಲೆ ಒಡೆತನ ಸಾಧಿಸಲು ಬ್ರಿಟಿಷರು ಪ್ರಯತ್ನಿಸಿದಾಗ, ಬಿರ್ಸಾ ಮುಂಡಾ ಅವರ ವಿರುದ್ಧ ದಂಗೆ ಎದ್ದರು. ಪ್ರಕೃತಿಯನ್ನು ರಕ್ಷಿಸುವ ಹೋರಾಟದಲ್ಲಿ ಹುತಾತ್ಮರಾದರು. ಕೇವಲ 25 ವರ್ಷ ಬದುಕಿದ್ದ ಬಿರ್ಸಾ ಮುಂಡಾ ಅವರ ಹೋರಾಟದ ಕಥೆ ಕೇಳಿದರೆ ನಮಗೆ ರೋಮಾಂಚನವಾಗುತ್ತಿದೆ. ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು.ದೇಶದ ಬುಡಕಟ್ಟು ಸಮುದಾಯಗಳು ಮೊದಲಿನಿಂದಲೂ ಈ ನೆಲದ ಸಂಪತ್ತನ್ನು ರಕ್ಷಣೆ ಮಾಡಿಕೊಂಡು ಬಂದಿವೆ. ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ ಆಚರಣೆ ಮೂಲಕ ಪರಂಪರೆ ಕಾಯ್ದುಕೊಂಡು ಬಂದಿದ್ದಾರೆ. ಬ್ರಿಟಿಷರ ವಿರುದ್ಧ ಬಿರ್ಸಾ ಮುಂಡಾ ಹೋರಾಟ ಮಾಡುವಾಗ ಆದಿವಾಸಿಗಗಳ ಬದ್ಧತೆಗಳ ಗೋಚರಿಸಿದ್ದವೆಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರನಾಥ್ ಉಪನ್ಯಾಸ ನೀಡಿ, ದೇಶದ ಬುಡಕಟ್ಟು ಜನರ ಮೇಲೆ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು, ಧರ್ಮ ಪ್ರಚಾರಕರು ನಡೆಸುತ್ತಿದ್ದ ದಬ್ಬಾಳಿಕೆ ಹಾಗೂ ಯಜಮಾನಿಕೆಯನ್ನು ಬಿರ್ಸಾ ಮುಂಡಾ ದಿಟ್ಟತನದಿಂದ ಎದುರಿಸಿದ್ದ. ಜನರು ಬಿರ್ಸಾ ಮುಂಡಾನನ್ನು ‘ಧರ್ತಿ ಅಭಾ’ (ಭೂಮಿಯ ತಂದೆ) ಎಂದು ಕರೆದಿದ್ದಾರೆ. ಈಗಲೂ ಬುಡಕಟ್ಟು ಜನರ ಕಥೆಗಳಲ್ಲಿ ಬಿರ್ಸಾ ಮುಂಡಾ ಜೀವಂತವಾಗಿದ್ದಾನೆ ಎಂದು ಹೇಳುತ್ತಾರೆ ಎಂದು ತಿಳಿಸಿದರು. ಭಾರತ ಸರ್ಕಾರ 2019 ರಿಂದ ಭಗವಾನ್ ಬಿರ್ಸಾ ಮುಂಡಾರವರ ಜನ್ಮದಿನಾಚರಣೆಯನ್ನು ಜನ ಜಾತೀಯ ಗೌರವ ದಿವಸ್ ಎಂದು ಆಚರಿಸುತ್ತಿದೆ. ಭಾರತದ ಸಂಸತ್ತಿನ ಆವರಣದಲ್ಲಿ ಬಿರ್ಸಾ ಮುಂಡಾ ಪ್ರತಿಮೆ ಸ್ಥಾಪಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯ, ತಂತ್ರಜ್ಞಾನ ಕಾಲೇಜು, ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಸರ್ಕಾರಿ ಸಂಸ್ಥೆಗಳಿಗೆ ಜಾರ್ಖಂಡ್ ಸರ್ಕಾರ ಬಿರ್ಸಾ ಮುಂಡಾ ಹೆಸರನ್ನು ಇರಿಸಿ ಗೌರವ ಸೂಚಿಸಿದೆ ಎಂದು ಹೇಳಿದರು.ಇದೇ ವೇಳೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಮಕ್ಕಳು ಬುಡಕಟ್ಟು ನೃತ್ಯಗಳನ್ನು ಪ್ರದರ್ಶಿಸಿದರು.
ಪರಿಶಿಷ್ಟ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಎಚ್.ದಿವಾಕರ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಕೌಶಲ್ಯಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಹೇಮಣ್ಣ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.