ಹಾನಗಲ್ಲ: ಬರ, ಬಿರು ಬೇಸಿಗೆಯ ನಡುವೆ ಶಾಲಾ ಮಕ್ಕಳಿಗೆ ರಜಾ ಅವಧಿಯ ಬಿಸಿಯೂಟ ಯೋಜನೆ ಏ. 12ರಿಂದ ಆರಂಭವಾಗಲಿದೆ. ಹಾನಗಲ್ಲ ತಾಲೂಕಿನ ೧೮೭೩೬ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು, ೧೮೧ ಅಡುಗೆ ಕೇಂದ್ರಗಳಲ್ಲಿ ೪೧ ದಿನ ಅನ್ನ ಸಾಂಬಾರು ಸೇವಿಸಲಿದ್ದಾರೆ.
ನಿತ್ಯ ಬಿಸಿಯೂಟ ಸ್ವೀಕರಿಸುವ ಮಕ್ಕಳ ಹಾಜರಾತಿ ಕಡ್ಡಾಯವಾಗಿ ನೀಡಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಬಿಸಿಯೂಟ ಸ್ವೀಕರಿಸುವ ಮಕ್ಕಳು ಹಾಗೂ ಪಾಲಕ ಪೋಷಕರು ಬಿಸಿಯೂಟ ಸ್ವೀಕರಿಸಲು ಒಪ್ಪಿಗೆ ಪತ್ರ ನೀಡಬೇಕು. ಅಲ್ಲದೆ ಮಕ್ಕಳನ್ನು ಶಾಲೆಗೆ ಕಳಿಸಿ ಊಟವಾದ ನಂತರ ಕರೆದುಕೊಂಡು ಹೋಗುವ ಜವಾಬ್ದಾರಿ ಪಾಲಕರದ್ದೇ ಆಗಿದೆ. ಭಾನುವಾರ ಹೊರತುಪಡಿಸಿ ಎಲ್ಲ ರಜಾ ದಿನಗಳನ್ನು ಒಳಗೊಂಡು ಏಪ್ರಿಲ್ 12ರಿಂದ ಮೇ ೨೮ರ ವರೆಗೆ ೪೧ ದಿನ ಈ ಬಿಸಿಯೂಟ ವ್ಯವಸ್ಥೆ ಇದೆ. ಬೇರೆ ಊರಿನ ಶಾಲೆಯ ಮಕ್ಕಳು ಬಂದರೂ ಪರವಾನಿಗೆ ಪಡೆದು ಯಾವುದೇ ಕೇಂದ್ರದಲ್ಲಿ ಬಿಸಿಯೂಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ೨೫೦ಕ್ಕಿಂತ ಹೆಚ್ಚು ಮಕ್ಕಳಿರುವ ಕೇಂದ್ರಗಳಲ್ಲಿ ಉಸ್ತುವಾರಿಗಾಗಿ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಲು ಅವಕಾಶವಿದೆ. ಅಲ್ಲದೆ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಗಳಿಕೆ ರಜೆ ಸೌಲಭ್ಯ ಕೂಡ ಇದೆ.
ಶುದ್ಧ ನೀರು: ಹಾನಗಲ್ಲ ತಾಲೂಕಿನಲ್ಲಿ ಈಗಾಗಲೇ ೬೬ಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿನ ಕೊರತೆ ಇದೆ ಎಂದು ಗುರುತಿಸಲಾಗಿದೆ. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರೀ ಬಿಸಿಲಿಗೆ, ಹೆಚ್ಚು ನೀರು ಬೇಕು. ಅದು ಶುದ್ಧವಾಗಿರಬೇಕು. ಶುದ್ಧ ಹಾಗೂ ಅಗತ್ಯ ನೀರನ್ನು ಒದಗಿಸುವುದು ತಾಲೂಕು ಆಡಳಿತಕ್ಕೆ ಒಂದು ದೊಡ್ಡ ಸವಾಲು ಎಂಬ ಸಂಗತಿಯೂ ಇದೆ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಶುಚಿ ರುಚಿಯಾದ ಬಿಸಿಯೂಟವನ್ನು ಮೆನುವಿನಂತೆ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ನೀರಿನ ಕೊರತೆಯಾದಲ್ಲಿ ಸಂಬಂಧಿಸಿದ ಅಡುಗೆ ಕೇಂದ್ರದ ಊರಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿ ವಹಿಸಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾಗುತ್ತದೆ.ಆಹಾರ ಪೂರೈಕೆ: ಈಗಾಗಲೇ ೨೮೦ ಶಾಲೆಗಳಿಂದ ಸಂಯೋಜಿಸಿ ಗುರುತಿಸಲಾದ ಎಲ್ಲ ೧೮೨ ಅಡುಗೆ ಕೇಂದ್ರಗಳಿಗೆ ಸಿಲಿಂಡರ್ ಸಹಿತ ಎಲ್ಲ ಆಹಾರ ಧಾನ್ಯ ಪೂರೈಕೆ ಮಾಡಲಾಗಿದೆ. ಈ ರಜಾ ಅವಧಿಯ ೪೧ ದಿನಗಳಿಗೆ ಯಾವುದೇ ರೀತಿಯಲ್ಲಿ ಆಹಾರ ಧಾನ್ಯದ ಕೊರತೆ ಇಲ್ಲ.
ಅಡುಗೆ ಕೇಂದ್ರ ಗುರುತಿಸಿ ಒಟ್ಟು ಶಾಲೆಗಳನ್ನು ಸಂಯೋಜಿಸಿ ೧೮೧ ಅಡುಗೆ ಕೇಂದ್ರಗಳನ್ನು ಸಿದ್ಧ ಮಾಡಲಾಗಿದೆ. ಇದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒಳಗೊಂಡು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಅಗತ್ಯ ಆಹಾರ ಧಾನ್ಯ ಕೊರತೆ ಇಲ್ಲದಂತೆ ಪೂರೈಸಲಾಗಿದ್ದು, ಯಾವುದೇ ಕೊರತೆ ಇಲ್ಲದೆ ಬಿಸಿಯೂಟ ಸಮರ್ಪಕವಾಗಿ ನಡೆಯಲಿದೆ. ಆಹಾರ ಧಾನ್ಯದ ಕೊರತೆ ಕಂಡು ಬಂದರೆ ತಕ್ಷಣ ಮತ್ತೆ ಪೂರೈಸಲಾಗುವುದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಯ್ಯ ಹಿರೇಮಠ ಹೇಳಿದರು.