ಕಾರವಾರ: ₹7,20,230 ಮೌಲ್ಯದ ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ಜೋಯಿಡಾದ ಬಾಪೇಲಿ ಚೆಕ್ಪೋಸ್ಟ್ನಲ್ಲಿ ಎಸ್ಎಸ್ಟಿ ತಂಡದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಪ್ರಚಾರ ಸಾಮಗ್ರಿಗಳನ್ನು ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಗೆ ಸಾಗಿಸಲಾಗುತ್ತಿತ್ತು. ಆದರೆ ಸೂಕ್ತ ದಾಖಲೆಗಳನ್ನು ನೀಡದ ಕಾರಣ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅದೇ ರೀತಿ ನೀತಿ ಸಂಹಿತೆ ಜಾರಿಯಾದ ಬಳಿಕ ಇಲ್ಲಿಯವರೆಗೆ ಜಿಲ್ಲೆಯಲ್ಲಿ ₹2,08,69,586 ಮೌಲ್ಯದ 95,210.815 ಲೀ. ಮದ್ಯ ಹಾಗೂ ₹68,500 ಮೌಲ್ಯದ 3.827 ಕೆಜಿ ಗಾಂಜಾ, 16 ದ್ವಿಚಕ್ರ ವಾಹನ, 2 ಭಾರಿ ವಾಹನ, 2 ನಾಲ್ಕು ಚಕ್ರದ ವಾಹನ, 28 ಸ್ಟೇಶನರಿ ಫುಡ್ ಕಿಟ್, ₹35,24,000 ಮೌಲ್ಯದ 40 ಸೀರೆಗಳು, ₹14,335 ಮೌಲ್ಯದ ಚೂಡಿದಾರ್ ಹಾಗೂ ₹7,20,230 ಮೌಲ್ಯದ ಪ್ರಚಾರ ಸಾಮಗ್ರಿಗಳನ್ನು ವಶಕ್ಕೆ ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆ ವತಿಯಿಂದ ಒಟ್ಟೂ 374 ಮತ್ತು ಪೊಲೀಸ್ ಇಲಾಖೆಯಿಂದ 42 ಎಫ್ಐಆರ್ ದಾಖಲಿಸಲಾಗಿದೆ. ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ₹28,78,000 ವಶಕ್ಕೆ ಪಡೆದಿದ್ದು, ಇವುಗಳಲ್ಲಿ ಸೂಕ್ತ ದಾಖಲೆ ನೀಡಿದ ₹5,40,000 ಹಿಂದಿರುಗಿಸಲಾಗಿದೆ.ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಮೂವರು ಪಾರು
ದಾಂಡೇಲಿ: ಬೆಳಗಾವಿಯಿಂದ ದಾಂಡೇಲಿಗೆ ಬರುತ್ತಿದ್ದ ಕಾರಿಗೆ ತಾಲೂಕಿನ ನಾನಾಕೇಸರೋಡ ಬಳಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟಿದ್ದು, ಅದೃಷವಶಾತ್ ವಾಹನದಲ್ಲಿದ್ದ ಮೂವರು ಪಾರಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.ಕಾರಿನಲ್ಲಿದ್ದವರು ಬೆಳಗಾವಿ ಮೂಲದವರು ಎನ್ನಲಾಗಿದೆ. ಬೆಳಗಾವಿಯಿಂದ ದಾಂಡೇಲಿಗೆ ಬರುತ್ತಿದ್ದ ಕಾರಿನಲ್ಲಿ ನಾನಾಕೇಸರೋಡದ ಹತ್ತಿರ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕಾರಿನಲ್ಲಿದ್ದ ಮೂವರು ವಾಹನದಿಂದ ಇಳಿದಿದ್ದಾರೆ. ಕೆಲವೇ ಕ್ಷಣದೊಳಗೆ ಕಾರು ಸಂಪೂರ್ಣವಾಗಿ ಸುಟ್ಟಿದೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.