ಬಿಜೆಪಿಗೆ ಗಾಂಧಿ, ಅಂಬೇಡ್ಕರ್‌ ತತ್ವದಲ್ಲಿ ನಂಬಿಕೆಯಿಲ್ಲ

KannadaprabhaNewsNetwork | Published : Oct 3, 2024 1:21 AM

ಪಾವಗಡ: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ತತ್ವ ಸಿದ್ದಾಂತ ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಭವ್ಯ ಭಾರತ ನಿರ್ಮಾಣದತ್ತ ಸಜ್ಜಾಗುವಂತೆ ಶಾಸಕ ಎಚ್.ವಿ.ವೆಂಕಟೇಶ್‌ ತಾಲೂಕಿನ ಸಮಸ್ತ ಜನತೆಗೆ ಕರೆ ನೀಡಿದರು.

ಪಾವಗಡ: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ತತ್ವ ಸಿದ್ದಾಂತ ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಭವ್ಯ ಭಾರತ ನಿರ್ಮಾಣದತ್ತ ಸಜ್ಜಾಗುವಂತೆ ಶಾಸಕ ಎಚ್.ವಿ.ವೆಂಕಟೇಶ್‌ ತಾಲೂಕಿನ ಸಮಸ್ತ ಜನತೆಗೆ ಕರೆ ನೀಡಿದರು.

ತಾಲೂಕು ಕಾಂಗ್ರೆಸ್‌ ವತಿಯಿಂದ ಮಂಗಳವಾರ ಪಟ್ಟಣದ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹುದೂರ್‌ ಶಾಸ್ತ್ರಿ ಅವರ ಜಯಂತ್ಯುತ್ಸವದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ರಾಷ್ಟ್ರದಲ್ಲಿ ಗಾಂಧಿಜೀ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ತತ್ವ ಸಿದ್ದಾಂತದ ಅಡಿಯಲ್ಲಿ ಕಾಂಗ್ರೆಸ್‌ ಪಕ್ಷ ಮುನ್ನಡೆಯುತ್ತಿದೆ. ಇದನ್ನು ಸಹಿಸದ ಬಿಜೆಪಿ ಹಿಂದೂ ಮುಸ್ಲಿಂ ಎಂದು ಒಡೆಯುವ ಮೂಲಕ ಹಿಂದೂತ್ವದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸಲು ನಿರತವಾಗಿದೆ ಎಂದು ಕಿಡಿಕಾರಿದರು.

ತಾಲೂಕು ಸೇರಿದಂತೆ ರಾಜ್ಯದಲ್ಲಿ ಶೀಘ್ರ ಜಿಪಂ ಹಾಗೂ ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಡವು ನಿಗದಿಯಾಗುವ ಸಾಧ್ಯತೆಗಳಿದ್ದು ಕಾರ್ಯಕರ್ತರು ಸಂಘಟಿತರಾಗಿ ಪಕ್ಷ ಸದೃಢವಾಗಿ ಕಟ್ಟಬೇಕು. ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಒಂದು ಸೀಟು ಗೆಲ್ಲಬಾರದು ಆ ರೀತಿ ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಸ್ಥಳೀಯ ಸಂಸ್ಥೆಯ ಚುನಾವಣೆಗಳಿಗೆ ಸ್ಪರ್ಧಿಸಲು ಉತ್ಸಾಹ ತೋರಿ ಟಿಕೆಟ್‌ ಒತ್ತಡ ಹೇರುವ ಅಭ್ಯರ್ಥಿ ಆಕಾಂಕ್ಷಿಗಳು ರಾಷ್ಟ್ರ ನಾಯಕ ಜಯಂತಿ ಕಾರ್ಯಕ್ರಮಗಳಿಗೆ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು. ಪಕ್ಷಕ್ಕೆ ನಿಷ್ಟೆ ತೋರಿ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಲಹೆ ನೀಡಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಾಂಜಿನಪ್ಪ, ಪುರಸಭೆ ಅಧ್ಯಕ್ಷ ಪಿ.ಎಚ್.ರಾಜೇಶ್ , ಹಿರಿಯ ಮುಖಂಡರಾದ ತೆಂಗಿನಕಾಯಿ ರವಿ, ಸಮಾಜ ಸೇವಕ ವೆಂಕಟಮ್ಮನಹಳ್ಳಿ ನಾಗೇಂದ್ರರಾವ್‌, ಶೇಷಗಿರಿಯಪ್ಪ,ರೈತ ಸಂಘದ ನರಸಿಂಹರೆಡ್ಡಿ ಹಾಗೂ ಪುರಸಭೆ ಉಪಾಧ್ಯಕ್ಷೆ ಗೀತಾ ಆರ್.ಎ.ಹನುಮಂತರಾಯಪ್ಪ,ಮಾಜಿ ಎಪಿಎಂಸಿ ಅಧ್ಯಕ್ಷ ಡಿ.ಮಂಜುನಾಥ್, ಗುತ್ತಿಗೆದಾರ ಶಂಕರರೆಡ್ಡಿ, ಆದಿ ನಾರಾಯಣಪ್ಪ,ಮೊಹಮ್ಮದ್ ಇಮ್ರಾನ್,ಗುಮ್ಮಘಟ್ಟ ಶ್ರೀನಿವಾಸ್,ಮಹಿಳಾ ಅಧ್ಯಕ್ಷೆ ಉಷಾರಾಣಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸುಜಿತ್ ರಿಜ್ವಾನ್‌ ಹಾಗೂ ಇನ್ನೂ ಮುಂತಾದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.