ಒಂದೇ ಒಂದು ಡ್ಯಾಮ್‌ ನಿರ್ಮಿಸದ ಬಿಜೆಪಿ: ಜಾರಕಿಹೊಳಿ

KannadaprabhaNewsNetwork | Published : May 3, 2024 1:07 AM

ಸಾರಾಂಶ

ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಿದರು. ಆದರೆ, ಬಿಜೆಪಿಯವರು ಒಂದೇ ಒಂದು ಡ್ಯಾಮ್‌ನ್ನು ದೇಶದಲ್ಲಿ ನಿರ್ಮಿಸಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಬ್ರಿಟಿಷರು ಭಾರತ ಬಿಟ್ಟು ಹೋದ ಬಳಿಕ ಕಾಂಗ್ರೆಸ್ ಪಕ್ಷದ ಸರ್ವ ಪ್ರಧಾನಿಗಳು ದೇಶದಲ್ಲಿ ಡ್ಯಾಮ್‌ಗಳನ್ನು ನಿರ್ಮಿಸಿದರು. ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಿದರು. ಆದರೆ, ಬಿಜೆಪಿಯವರು ಒಂದೇ ಒಂದು ಡ್ಯಾಮ್‌ನ್ನು ದೇಶದಲ್ಲಿ ನಿರ್ಮಿಸಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ತಾಲೂಕಿನ ತೆಲಸಂಗದಲ್ಲಿ ಹಮ್ಮಿಕೊಂಡಿದ್ದ‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕೋಡಿ ಲೋಕಸಭೆಯ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಏಕೆ ಆಶೀರ್ವಾದ ಮಾಡಬೇಕೆಂದರೆ ಕಾಂಗ್ರೆಸ್ ಪಕ್ಷದ ಪ್ರಧಾನಿಗಳು, ರಾಜದಲ್ಲಿ ಇದುವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿಗಳು ರಾಜ್ಯದ ಜನಕ್ಕೆ ಜನಪರ ಯೋಜನೆಗಳನ್ನು ನೀಡುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯರ ಅವಧಿಯಲ್ಲಿ ಕೃಷಿ ಹೊಂಡಗಳ ನಿರ್ಮಾಣ ಮಾಡುವ ಯೋಜನೆ ಜಾರಿಗೆ ತಂದರು. ಇನ್ನು ಅಥಣಿ ತಾಲೂಕಿನಲ್ಲಿ ಆದ ಎಲ್ಲ ನೀರಾವರಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷವೇ ಮಾಡಿದೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರ ಸಾಲ, ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ. ಇನ್ನು ₹25 ಲಕ್ಷ ಆರೋಗ್ಯ ವಿಮೆ ಸೇರಿದಂತೆ ಅನೇಕ ಯೋಜನೆಗಳನ್ನು ಈಗಾಗಲೇ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಆದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಆಶೀರ್ವದಿಸಬೇಕು ಎಂದು ಕೋರಿದರು.

ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸಂಸದರಾಗಿ ಕೆಲಸ ಮಾಡುವ ಸಾಮರ್ಥ್ಯ ಇದೆ. ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಗಣೇಶ್ ಹುಕ್ಕೇರಿ, ಮಹೇಂದ್ರ ತಮ್ಮನ್ನವರ್ ಅವರು ಸೇರಿದಂತೆ ನಮ್ಮ ಜತೆ ಕೆಲಸ ಮಾಡುತ್ತಾರೆ. ಆದ್ದರಿಂದ ಕೆಲಸ ಮಾಡುವನುವರನ್ನು ಗುರುತಿಸುವ ಕೆಲಸವನ್ನು ನೀವು ಮಾಡಬೇಕು. ಅಂದಾಗ ಸರ್ವರು ಪ್ರಗತಿ ಹೊಂದಲು ಸಾಧ್ಯವಿದೆ. ಸರ್ವರೂ ಸಮಾನತೆಯಿಂದ ಬಾಳಬೇಕಾದರೆ ಕಾಂಗ್ರೆಸ್ ಪಕ್ಷವನ್ನೇ ಅಧಿಕಾರಕ್ಕೆ ತರ ತರಬೇಕು ಎಂದು ಕೋರಿದರು.

ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿಯವರು ನಂಬಿದವರನ್ನು ಯಾವತ್ತೂ ಕೈ ಬೀಡಲ್ಲ. ಇದಕ್ಕೆ ನಾನೇ ಸಾಕ್ಷಿ. ನಾನು ಇಂದು ಶಾಸಕನಾಗಿದ್ದೇನೆಂದರೆ ಅದಕ್ಕೆ ಸತೀಶ್ ಜಾರಕಿಹೊಳಿ ಅವರೇ ಕಾರಣ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಎಂದು ತಮ್ಮಲ್ಲಿ ಕೈ ಮುಗಿದು ಕೋರುತ್ತೇನೆ. ಏಕೆಂದರೆ ಕಳೆದ ಆರೇಳು ವರ್ಷಗಳಿಂದ ಪ್ರಿಯಾಂಕಾ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯವಾಗಿ ಸೇವೆ ಮಾಡಲು ಅವಕಾಶ ನೀಡಿ ಎಂದು ವಿನಂತಿಸಿದರು.

ಯುವ ನಾಯಕ ಚಿದಾನಂದ ಸವದಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಆಯ್ಕೆಮಾಡುವ ಮೂಲಕ ಈ ಭಾಗದ ಅಭಿವೃದ್ಧಿ, ಸೇವೆ ಮಾಡಲು ಅನುವು ಮಾಡಿಕೊಡಿ. ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸತೀಶ್ ಮಾಡಿದ ಕಾರ್ಯ ಯಾರು ಮರೆಯುವಂತಿಲ್ಲ. ಅವರ ಸೇವೆಯಿಂದ ಅಪಾರ ಸಂಖ್ಯೆಯ ಜೀವಗಳು ಉಳಿದೆವೆ. ತೆಲಸಂಗ ಭಾಗದ ಮತ್ತು ನಮ್ಮದು ಇನ್ನೊಂದು ಮನವಿ ಇದೆ. ಸಚಿವ ಸತೀಶ್ ತೆಲಸಂಗದಲ್ಲಿ ಪ್ರವಾಸಿ ಮಂದಿರ ನಿರ್ಮಿಸಿ ಕೊಡಬೇಕೆಂದು ಇದೇ ವೇಳೆ ಮನವಿ ಮಾಡಿದರು.

ತೆಲಸಂಗ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮೋಘ ಸಿದ್ದ ಕೊಬರಿ ಪ್ರಾಸ್ತಾವಿಕವಾಗಿ ಮಾತನಾಡಿ, 10 ವರ್ಷಗಳ ಹಿಂದೆ ಸರ್ವರೂ ಕನಸು ಕಂಡು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ, ನಿಮ್ಮ ಕನಸು ಈಡೇರಲಿಲ್ಲ. ನಮ್ಮ‌ ಕನಸವೂ ಈಡೇರಲಿಲ್ಲ. ದೇಶದಲ್ಲಿ ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತವೇ ಸಾಕ್ಷಿ ಎಂದರು.

ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ತೆಲಸಂಗನ ಮುಖಂಡರು ವಚನ ಸಾಹಿತ್ಯ ಪುಸ್ತಕವನ್ನು ನೀಡಿ ಸತ್ಕರಿಸಿದರು. ಕಾಂಗ್ರೆಸ್ ಮುಖಂಡರಾದ ಸದಾಶಿವ ಬೂಟಾಳೆ, ಗಜಾನನ ಮಂಗಸೂಳಿ, ಚಿದಾನಂದ ಸವದಿ, ಶ್ಯಾಮ್ ಪೂಜಾರಿ, ಶಿವು ಗುಡ್ಡಾಪುರ, ಉದಯ ಶೆಟ್ಟಿ, ಬಸವರಾಜ ಬೂಟಾಳೆ, ಸಿದ್ದರಾಯ ಯಲಿಹಡಲಗಿ, ಗುರು ದಾಶ್ಯಾಳ, ಬಾಬು ಕಾಕಾ ಜಮಖಂಡಿ, ಭಾರತಿ ಲೊಕಂಡೆ ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Share this article