ರಾಮನಗರ: ಎಣ್ಣೆ-ನೀರು ಬೆರೆಯುವುದಿಲ್ಲ. ಅದೇ ರೀತಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಲು ಸಾಧ್ಯವಿಲ್ಲ. ನಿಮ್ಮಿಬ್ಬರ ಅನೈತಿಕ ಸಂಬಂಧ, ಹೆಚ್ಚು ದಿನ ಇರುವುದಿಲ್ಲ. ಬಿಜೆಪಿ ಸಿದ್ಧಾಂತಕ್ಕೂ ದೇವೇಗೌಡರ ತತ್ವ ಸಿದ್ಧಾಂತಕ್ಕೂ ವ್ಯತ್ಯಾಸ ಇದೆ ಎಂದು ಆಹಾರ ಸಚಿವ ಕೆ.ಎಸ್.ಮುನಿಯಪ್ಪ ಭವಿಷ್ಯ ನುಡಿದರು.
ಮೇಕೆದಾಟು ಯೋಜನೆ, ಪಶ್ಚಿಮ ಘಟ್ಟಗಳಿಂದ ನೀರು ತರುವ ಯೋಜನೆ ಅಥವಾ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಪಾದಯಾತ್ರೆ ಮಾಡಿದ್ದರೆ ಪಾದಯಾತ್ರೆಯನ್ನು ನಾವು ಸ್ವಾಗತಿಸುತ್ತಿದ್ದೆವು. ಆದರೆ, ಕೇಂದ್ರ ಸರ್ಕಾರದಿಂದ ಒತ್ತಡ ಹೇರಿ ರಾಜ್ಯಪಾಲರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವುದು ಖಂಡನೀಯ ಎಂದರು.
ಎಲ್ಲ ಸರ್ಕಾರಗಳ ಅವಧಿಯಲ್ಲಿ ಮುಡಾದಲ್ಲಿ ಅರ್ಹರಿಗೆ ಸೈಟು ಕೊಡಲಾಗಿದೆ. ಆ ಸೈಟಿನ ವಿಚಾರ ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಹೋರಾಟ ಮಾಡುತ್ತಿರುವುದು ಬೆಟ್ಟ ಅಗೆದು ಇಲಿ ಹಿಡಿಯುವಂತಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಾದಯಾತ್ರೆ ಮಾಡಿ, ಇಲ್ಲದಿದ್ದರೆ ಜನರ ಮುಂದೆ ನೀವು ದುರ್ಬಲ ಆಗುತ್ತೀರಾ ಎಂದು ಎಚ್ಚರಿಸಿದರು.