ಕನ್ನಡಪ್ರಭ ವಾರ್ತೆ ರಾಮನಗರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮತ್ತು ಜೆಡಿಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ರೀತಿ ಜನ ಸಾಮಾನ್ಯರನ್ನು ಶೋಷಣೆ ಮಾಡಿಕೊಂಡೆ ಬರುತ್ತಿದೆ. ಅಗತ್ಯ ಪದಾರ್ಥಗಳ ಬೆಲೆಯು ಹೆಚ್ಚಾಗುತ್ತಲೇ ಇದ್ದು, ಬಡ ಹಾಗೂ ಮಧ್ಯಮ ವರ್ಗದ ಜನತೆ ಜೀವನ ಸಾಗಿಸಲು ಕಷ್ಟವಾಗಿದೆ ಎಂದು ಕಿಡಿಕಾರಿದರು.ಕಳೆದ 20 ತಿಂಗಳ ಅಂತರದಲ್ಲಿ ಮೂರು ಬಾರಿ ಹಾಲಿನ ದರ ಏರಿಕೆ ಮಾಡಲಾಗಿದೆ. ಇತ್ತೀಚಿಗೆ ಡೀಸೆಲ್ ಮೇಲೆ ಬೆಲೆ ಏರಿಕೆಯಾಗಿದೆ. ಇನ್ನೊಂದೆಡೆ ವಿದ್ಯುತ್ ದರದಲ್ಲಿ ಬೆಲೆ ಹೆಚ್ಚಳ ಮಾಡಲಾಗಿದೆ. ಇದೇ ರೀತಿ ಅಗತ್ಯ ಪದಾರ್ಥಗಳು ಹಾಗೂ ಸುಂಕ ಅಧಿಕಗೊಳಿಸುತ್ತಿರುವುದರಿಂದ ಶ್ರೀಸಾಮಾನ್ಯನ ಬೆನ್ನೆಲುಬು ಮುರಿಯುವ ಕೆಲಸ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.ಬಿಜೆಪಿ ರಾಮನಗರ ಗ್ರಾಮಾಂತರ ಮಂಡಲದ ಅಧ್ಯಕ್ಷ ಜಗದೀಶ್ ಮಾತನಾಡಿ, ಸಿದ್ದರಾಮಯ್ಯ ನೇತತ್ವದ ಕಾಂಗ್ರೆಸ್ ರಾಜ್ಯ ಸರ್ಕಾರ ಸಂಪೂರ್ಣವಿಫಲವಾಗಿದೆ. ಸರ್ಕಾರ ನಡೆಸಲು ತೀವ್ರ ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ಕಾಂಗ್ರೆಸ್ ನಡೆ,ಕೋಮುವಾದಿಯಂತಿದ್ದು, ಒಂದು ಸಮುದಾಯದ ಓಲೈಕೆಗೆ ನಿಂತಿದೆ. ಜತೆಗೆ, ಸರ್ಕಾರದಲ್ಲಿನ ಭ್ರಷ್ಟಾಚಾರ , ಆಡಳಿತ ವಿರೋಧಿ ನಡೆಯು ಸಾಕಷ್ಟು ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸಾಲಿಗೆ ಹನಿ ಟ್ರ್ಯಾಪ್ ಸೇರ್ಪಡೆಗೊಂಡಿದೆ. ಈ ಬಗ್ಗೆ ಸಚಿವರೆ ತುಟ್ಟಿ ಬಿಚ್ಚುತ್ತಿದ್ದಾರೆ. ಇಷ್ಟೆಲ್ಲಾ ಪ್ರಕರಣಗಳು ಸರ್ಕಾರದ ಅರಾಜಕತೆ ತೋರಿಸುತ್ತದೆ ಎಂದು ಜಗದೀಶ್ ಟೀಕಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಸಹ ವಕ್ತಾರ ರುದ್ರದೇವರು, ಪರಿಷತ್ ಸದಸ್ಯ ಸುರೇಶ್ ನಗರ ಪ್ರಧಾನ ಕಾರ್ಯದರ್ಶಿ ಕಾಳಯ್ಯ, ಮುಖಂಡರಾದ ಶಿವಾನಂದ್, ಗೂಗಾರೆದೊಡ್ಡಿ ನಾಗರಾಜು, ರಾಘವೇಂದ್ರ, ರಾಜು, ನಾಗೇಶ್, ಲಕ್ಷ್ಮೀ, ನಾಗಮ್ಮ, ಜಯಕುಮಾರ್, ಕೆಂಪರಾಜು, ಚನ್ನಪ್ಪ, ಆನಂದ್, ಶಿವರುದ್ರಯ್ಯ, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.---------5ಕೆಆರ್ ಎಂಎನ್ 2.ಜೆಪಿಜಿರಾಮನಗರದ ಐಜೂರು ವತ್ತದಲ್ಲಿ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.--------