ಕಾರ್ಯಕರ್ತರ ಆಂತರಿಕ ಅಸಮಧಾನದಿಂದ ಬಿಜೆಪಿ ಸೋತಿದೆ: ಎಂ.ಕೆ.ಪ್ರಾಣೇಶ್ ವಿಷಾದ

KannadaprabhaNewsNetwork | Published : Dec 3, 2024 12:33 AM

ಸಾರಾಂಶ

ಕೊಟ್ಟಿಗೆಹಾರ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಒಳ ಅಸಮಧಾನದಿಂದ ಬಿಜೆಪಿ ಪಕ್ಷ ಸೋಲು ಅನುಭವಿಸು ವಂತಾಯಿತು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ವಿಷಾದ ವ್ಯಕ್ತಪಡಿಸಿದರು.

ಬಾಳೂರು ಬಿಜೆಪಿ ಘಟಕದ ನೂತನ ಅಧ್ಯಕ್ಷರ ಪದಗ್ರಹಣ-ಕಾರ್ಯಕರ್ತರ ಸಮಾವೇಶ

ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರ

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಒಳ ಅಸಮಧಾನದಿಂದ ಬಿಜೆಪಿ ಪಕ್ಷ ಸೋಲು ಅನುಭವಿಸು ವಂತಾಯಿತು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ವಿಷಾದ ವ್ಯಕ್ತಪಡಿಸಿದರು.

ಸೋಮವಾರ ಬಾಳೂರು ಹೋಬಳಿ ಬಿಜೆಪಿ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದರು. ಬಾಳೂರು ಶಕ್ತಿ ಕೇಂದ್ರದಲ್ಲಿ ಒಂದು ಸಮಯದಲ್ಲಿ ಕಮ್ಯೂನಿಸ್ಟ್ ಪಕ್ಷದ ವರ್ಚಸ್ಸಿತ್ತು. ಅದನ್ನು ಬಿಜೆಪಿ ಕಾರ್ಯಕರ್ತರು ಹಂತ ಹಂತವಾಗಿ ಕಮ್ಯುನಿಸ್ಟ್ ಜತೆ ಜಂಟಿಯಾಗಿ ಬಿಜೆಪಿ ಪಕ್ಷಕ್ಕೆ ಸೇರಿಸಿ ಈಗ ಬಿಜೆಪಿ ಪಕ್ಷ ಬೂತ್ ಮಟ್ಟದಲ್ಲಿ ಗಟ್ಟಿಯಾಗಿದೆ. ಇದು, ಕಾರ್ಯಕರ್ತರ ಪರಿಶ್ರಮದಿಂದ ಸಾಧ್ಯವಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಪಣ ತೊಡಬೇಕು ಎಂದು ಕರೆ ನೀಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ದೇಶದ ವಕ್ಫ್ ಕಾಯಿದೆಯನ್ನು ಸಂವಿಧಾನ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಸರ್ವ ಧರ್ಮದ ಶಾಸನಗಳು ಸಂವಿಧಾನದ ವ್ಯಾಪ್ತಿಗೆ ಬರಬೇಕು. ವಿವಿಧ ಮಂಡಳಿಗಳು ಸಂವಿಧಾನದಡಿಯಲ್ಲೇ ಕಾರ್ಯ ನಿರ್ವಹಿಸಬೇಕು ಎಂದರು.

ವಕ್ಫ್ ಕಾಯಿದೆ ಸಂವಿಧಾನದಡಿ ಕಾರ್ಯ ನಿರ್ವಹಿಸುತ್ತಿಲ್ಲ. ಅದನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದಡಿ ಕಾಯಿದೆ ತಿದ್ದುಪಡಿ ಮಾಡಲು ಮುಂದಾಗಿದೆ. ಬಿಜೆಪಿ ಸರ್ಕಾರ ವಕ್ವ್ ಕಾಯಿದೆ ರದ್ದು ಪಡಿಸಲು ಹೊರಟಿಲ್ಲ. ಅದನ್ನು ಕಾಂಗ್ರೆಸ್ ಸುಳ್ಳು ಹೇಳಿ ತಿರುಚುತ್ತಿದೆ. ಬಿಜೆಪಿ, ಕಾಂಗ್ರೆಸ್ ನ ಸುಳ್ಳುಗಳನ್ನು ಜನರ ಮುಂದೆ ತಿಳಿಸಲು ಹೊರಟಿದೆ ಎಂದು ಹೇಳಿದರು.

ಮಾಜಿ ಸಚಿವ ಡಿ.ಎನ್‌. ಜೀವರಾಜ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರ ಬಿಪಿಎಲ್ ಕಾರ್ಡುಗಳನ್ನು ಹಿಂಪಡೆಯಲು ಹೊರಟಿದೆ. ನಗರಗಳಲ್ಲಿ ಪಡಿತರ ಅಂಗಡಿದಾರರಿಗೆ ಅಕ್ರಮ ಬಿಪಿಎಲ್ ಕಾರ್ಡುಗಳಿವೆ. ಅವುಗಳನ್ನು ಮೊದಲು ರದ್ದು ಪಡಿಸಲಿ, ರೈತರು ಬಡವರಾಗಿದ್ದು ಅವರ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದು ಕಾಂಗ್ರೆಸ್ ಸರ್ಕಾರದ ನೀತಿ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಮನುಷ್ಯರ ಪ್ರಾಣಕ್ಕೆ ಬೆಲೆಯಿಲ್ಲ, ಪ್ರಾಣಿಗಳ ಜೀವಕ್ಕೆ ಬೆಲೆ ನೀಡುವಂತಾಗಿದೆ. ಕಾಂಗ್ರೆಸ್ ಸರ್ಕಾರ ಬಡವರ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದನ್ನು ನಿಲ್ಲಿಸಲಿ ಎಂದರು.

ನೂತನ ಅಧ್ಯಕ್ಷ ಬಿ.ಬಿ.ಮಂಜುನಾಥ್ ಮಾತನಾಡಿ, ಮುಂದೆ ಸೊಸೈಟಿ ಚುನಾವಣೆ ಬರುತ್ತಿವೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಸಹಕಾರ ನೀಡಿ ಬೆಜೆಪಿ ಗೆಲ್ಲಿಸಲು ಪಣ ತೊಡಬೇಕು. ಎಲ್ಲರ ಸಹಕಾರದಿಂದ ಮಾತ್ರ ಬಿಜೆಪಿ ಪಕ್ಷ ಗೆಲ್ಲಿಸಲು ಸಾಧ್ಯ ಎಂದು ಹೇಳಿದರು.

ಪಕ್ಷದ ಮುಖಂಡ ದೀಪಕ್ ದೊಡ್ಡಯ್ಯ, ಟಿ.ಎಂ. ಗಜೇಂದ್ರ, ಬಿ.ಎಂ.ಭರತ್, ನರೇಂದ್ರ, ಬಿ.ಆರ್.ಬಾಲಕೃಷ್ಣ, ನೂತನ ಅಧ್ಯಕ್ಷ ಬಿ.ಬಿ.ಮಂಜುನಾಥ್ ಅವರಿಗೆ ನಿರ್ಗಮಿತ ಅಧ್ಯಕ್ಷ ಎಂ.ಎಲ್. ವಿಜೇಂದ್ರ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಬಿಜೆಪಿ ಬಲವರ್ಧನೆಗೆ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಾಯಿಸಿದ ಪರೀಕ್ಷಿತ್ ಜಾವಳಿ, ದಿನಕರ್ ಪೂಜಾರಿ ಹಾಗೂ ನಿಕಟಪೂರ್ವ ಅಧ್ಯಕ್ಷ ಎಂ.ಎಲ್.ವಿಜೇಂದ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಮನೋಜ್, ಪ್ರಮೋದ್, ಕೆ.ಸಿ.ರತನ್, ಜೆ.ಎಸ್.ರಘು, ಬಿ.ಎಸ್.ವಿಕ್ರಂ, ಧನಿಕ್, ಯತೀಶ್, ಶರತ್, ರಘುಪತಿ, ವೆಂಕಟೇಶ್, ಪ್ರಮೀಳಾ ಮಂಜಯ್ಯ, ಸುಧಾ ಯೋಗೇಶ್, ಲೋಕೇಶ್ ಇದ್ದರು.2 ಕೆಸಿಕೆಎಂ 6ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಬಿಜೆಪಿ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮವನ್ನು ಎಂ.ಕೆ. ಪ್ರಾಣೇಶ್‌ ಸೋಮವಾರ ಉದ್ಘಾಟಿಸಿದರು. ಡಿ.ಎನ್‌. ಜೀವರಾಜ್‌, ಎನ್‌. ಮಹೇಶ್‌, ಬಿ.ಬಿ. ಮಂಜುನಾಥ್‌, ಎಂ.ಎಲ್‌. ವಿಜೇಂದ್ರ, ಪರೀಕ್ಷಿತ್‌ ಜಾವಳಿ ಇದ್ದರು.

Share this article