ಲಕ್ಷ್ಮೇಶ್ವರ: ಪುರಸಭೆಯ ಅಧ್ಯಕ್ಷರು ಹಾಗೂ ಮತ್ತು ಮುಖ್ಯಾಧಿಕಾರಿಗಳು ಸೇರಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಅನುಸರಿಸುತ್ತಿರುವ ಕ್ರಮ ಸರಿಯಲ್ಲ. 15ನೇ ಹಣಕಾಸು ಯೋಜನೆಯಡಿ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ₹ 1.93 ಲಕ್ಷಗಳ ಅನುದಾನ ಬಿಡುಗಡೆಯಾಗಿದೆ. ಆದರೆ ಪುರಸಭೆಯ ಅಧ್ಯಕ್ಷರು 14 ವಾರ್ಡುಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಿ ಬಿಜೆಪಿ ಸದಸ್ಯರು ಆಯ್ಕೆಯಾಗಿರುವ ವಾರ್ಡುಗಳಿಗೆ ಅನುದಾನ ನೀಡದಿರುವುದು ಖಂಡನೀಯ ಎಂದು ಪುರಸಭೆಯ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಅಶ್ವಿನಿ ಅಂಕಲಕೋಟಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಪಟ್ಟಣದ ಪುರಸಭೆ ಎದುರು ಪತ್ರಿಕೆಗಳಿಗೆ ಅವರು ಈ ಕುರಿತು ಹೇಳಿಕೆ ನೀಡಿದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಅವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಿಜೆಪಿ ಸದಸ್ಯರಿಗೆ ಅನುದಾನ ನೀಡುತ್ತಿಲ್ಲ. ಪುರಸಭೆಯ ಅನುದಾನ ಕೇವಲ ಕಾಂಗ್ರೆಸ್ ಸದಸ್ಯರಿಗೆ ಮಾತ್ರ ನೀಡಿರುವುದು ಕಾನೂನು ಬಾಹಿರ ಕ್ರಮವಾಗಿದೆ. ರಾಜ್ಯ ಸರ್ಕಾರ ಪುರಸಭೆಗಳ ವಿವಿಧ ವಾರ್ಡುಗಳ ಅಭಿವೃದ್ಧಿಗಾಗಿ 15ನೇ ಹಣಕಾಸು ಯೋಜನೆಯಡಿ ಅನುದಾನ ನೀಡಿರುತ್ತದೆ ಹೊರತು ಕೇವಲ ಕಾಂಗ್ರೆಸ್ ಸದಸ್ಯರ ವಾರ್ಡುಗಳ ಅಭಿವೃದ್ಧಿ ಮಾತ್ರ ಹಣ ನೀಡಿರುವುದಿಲ್ಲ. ಪಟ್ಟಣದ 23 ವಾರ್ಡುಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕು, ಎಲ್ಲ ವಾರ್ಡುಗಳಿಗೆ ಸರಿಯಾಗಿ ಅನುದಾನ ಹಂಚಿಕೆ ಮಾಡದೇ ಹೋದಲ್ಲಿ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಜಿಲ್ಲಾಧಿಕಾರಿಗಳು ಕುರಿತು ಸರಿಯಾದ ನಿರ್ಧಾರ ತೆಗೆದು ಕೊಳ್ಳುವ ವಿಶ್ವಾಸವಿದೆ. ಇಲ್ಲವಾದಲ್ಲಿ ದಿನಗಳಲ್ಲಿ ಪುರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಅವರು ಹೇಳಿದರು.ಈ ವೇಳೆ ಬಿಜೆಪಿ ಮುಖಂಡ ಗಂಗಾಧರ ಮೆಣಸಿನಕಾಯಿ ಮಾತನಾಡಿ, ಪುರಸಭೆ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿಗಳು ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಅದು ಬಿಟ್ಟು ಅನುದಾನ ಹಂಚಿಕೆ ವಿಷಯದಲ್ಲಿ ಕ್ಷುಲ್ಲಕ ರಾಜಕೀಯ ಮಾಡಬಾರದು. ಪೂರಸಭೆಗ ಬಂದು ಅನುದಾನ ಕೇವಲ ಕಾಂಗ್ರೆಸ್ಸಿಗರ ಸೊತ್ತೇ ಎಂಬುದನ್ನು ನೋಡಬೇಕು. ಬಿಜೆಪಿ ಸದಸ್ಯರ ಅನುದಾನ ಹಂಚಿಕೆ ವಿಷಯದಲ್ಲಿ ರಾಜಕೀಯ ಪ್ರತಿಷ್ಠೆ ಬಿಟ್ಟು ಪಟ್ಟಣದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಲಿ. ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿವೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳಬೇಕು, ಅದು ಬಿಟ್ಟು ಸಣ್ಣ ತನಕ್ಕೆ ಇಳಿಯಬಾರದು. ಬಿಜೆಪಿ ಸದಸ್ಯರ ವಾರ್ಡುಗಳ ಅಭಿವೃದ್ಧಿಗಾಗಿ ಅನುದಾನ ನೀಡಿಕೆ ವಿಷಯದಲ್ಲಿ ಹೆಚ್ಚು ಕಡಿಮೆ ಆದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಪುರಸಭೆಯ ಸದಸ್ಯೆ ಪೂರ್ಣಿಮಾ ಪಾಟೀಲ, ಪೂಜಾ ಕರಾಟೆ, ಕವಿತಾ ಶೆರಸೂರಿ. ಶೋಭಾ ಮೆಣಸಿನಕಾಯಿ, ವಾಣಿ ಹತ್ತಿ, ಮಂಜುಳಾ ಗುಂಜಳ, ಮಹಾದೇವಪ್ಪ ಅಣ್ಣಿಗೇರಿ, ವಿಶ್ವಕರ್ಮ ಹುಲಬಜಾರ. ಮಂಜುನಾಥ ಹೊಗೆಸೊಪ್ಪಿನ, ರಮೇಶ್ ಹಾಳದೋಟದ, ರುದ್ರಪ್ಪ ಉಮಚಗಿ ಇದ್ದರು.