ಸಂವಿಧಾನ ಬದಲಾವಣೆ ಹೇಳಿಕೆಗೆ ಬಿಜೆಪಿ ಆಕ್ರೋಶ

KannadaprabhaNewsNetwork | Updated : Mar 26 2025, 01:31 AM IST

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಂವಿಧಾನ ಬದಲಾವಣೆ ಹೇಳಿಕೆ ನೀಡಿರುವುದನ್ನು ಖಂಡಿಸಿ ಇಂದು ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಂವಿಧಾನ ಬದಲಾವಣೆ ಹೇಳಿಕೆ ನೀಡಿರುವುದನ್ನು ಖಂಡಿಸಿ ಇಂದು ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಪಿ.ಎಚ್.ಪೂಜಾರ ಅವರ ಜನಸಂಪರ್ಕ ಕಾರ್ಯಾಲಯದಿಂದ ಪ್ರತಿಭಟನೆ ಆರಂಭಗೊಂಡು ನಗರದ ಡಾ.ಬಿ.ಆರ್. ಅಂಬೇಡ್ಕರ್‌ ಸರ್ಕಲ್ ವರೆಗೆ ಆಗಮಿಸಿ, ಡಿ.ಕೆ.ಶಿವಕುಮಾರ್‌ ವಿರುದ್ದ ಘೋಷಣೆ ಕೂಗಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪಿ.ಎಚ್. ಪೂಜಾರ ಅವರು, ಡಾ.ಬಾಬಾಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಶೆಡ್ಯೂಲ್‌ನಲ್ಲಿ ಇಲ್ಲದ ಮೀಸಲಾತಿ ಕಲ್ಪಿಸುವ ಮೂಲಕ ಡಾ.ಅಂಬೇಡ್ಕರ್‌ ರಚಿಸಿದ ಸಂವಿಧಾನಕ್ಕೆ ಅಪಮಾನ ಮಾಡುತ್ತಿದೆ. ಮೇಲ್ನೋಟಕ್ಕೆ ಗುತ್ತಿಗೆಗಳಲ್ಲಿ ಶೇ.4 ಮೀಸಲಾತಿ ಕೊಡುವ ಕಾನೂನು ಮಾಡಿರಬಹುದು. ಆದರೆ, ದೂರಗಾಮಿ ಪರಿಣಾಮ ಮೀಸಲಾತಿ ಚರ್ಚೆಗೆ ಧಕ್ಕೆ ತರುವ ಹುನ್ನಾರಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ ಎಂದು ಆರೋಪಿಸಿದರು.

ಸಂವಿಧಾನ ವಿರೋಧಿಯಾಗಿರುವ ಮುಸ್ಲಿಮರಿಗೆ ಮೀಡಲಾತಿ ನೀಡುವ ನಿರ್ಧಾರಿಂದ ಕಾಂಗ್ರೆಸ್‌ ಸರ್ಕಾರ ಹಿಂದೆ ಸರಿಯಬೇಕು. ಸಂವಿಧಾನ ಹಾಗೂ ಡಾ. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಶಂಭುಗೌಡ ಪಾಟೀಲ, ಸಂಗನಗೌಡ ಗೌಡರ, ಡಾ.ಶೇಖರ ಮಾನೆ, ವಿರೂಪಾಕ್ಷ ಅಮೃತಕರ, ಮಲ್ಲಿಕಾರ್ಜುನ ಸುರಪುರ, ರಾಘು ನಾಗೂರ, ರಾಜು ಗೌಳಿ, ರಾಜು ಲಮಾಣಿ, ಸುಧೀರ ಜಾಧವ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ ಅಂಗಡಿ, ಗಂಗಾಬಾಯಿ ರಜಪೂತ, ಯಮನಪ್ಪ ಮಂಡಿಕೇರಿ, ರಾಜು ಚಿತ್ತವಾಡಗಿ, ಕುಮಾರ ಗಿರಿಜಾ, ಮಂಜುನಾಥ ಬಳೂರಗಿ, ರಾಜು ನಾಯಕ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

ಡಾ.ಬಾಬಾಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಶೆಡ್ಯೂಲ್‌ನಲ್ಲಿ ಇಲ್ಲದ ಮೀಸಲಾತಿ ಕಲ್ಪಿಸುವ ಮೂಲಕ ಕಾಂಗ್ರೆಸ್‌ ಸರ್ಕಾರ ಸಂವಿಧಾನಕ್ಕೆ ಅಪಮಾನ ಮಾಡುತ್ತಿದೆ. ಮೇಲ್ನೋಟಕ್ಕೆ ಗುತ್ತಿಗೆಗಳಲ್ಲಿ ಶೇ.4 ಮೀಸಲಾತಿ ಕೊಡುವ ಕಾನೂನು ಎಂದೆನಿಸಿದರೂ ದೂರಗಾಮಿ ಆಗಿ ಮೀಸಲಾತಿ ಚರ್ಚೆಗೆ ಧಕ್ಕೆ ತರುವ ಹುನ್ನಾರ ಅಡಗಿದೆ.

-ಪಿ.ಎಚ್‌. ಪೂಜಾರ ವಿಧಾನ ಪರಿಷತ್ ಸದಸ್ಯ

Share this article