-ಬೀದರ್ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಂಸದ ಖೂಬಾ । ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಪಕ್ಷ ಸೂಚಿಸುವ ಅಭ್ಯರ್ಥಿ ಗೆಲ್ಲಿಸಲು ಮನವಿ
ಕನ್ನಡಪ್ರಭ ವಾರ್ತೆ ಬೀದರ್
ಪಕ್ಷದ ಹಿಂಬಾಲಕರಾಗಬೇಕೆ ವಿನಃ ವ್ಯಕ್ತಿಯ ಹಿಂಬಾಲಕರಾಗಬಾರದು. ಮುಂಬರುವ ತಾ.ಪಂ ಹಾಗೂ ಜಿ.ಪಂ ಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಪಕ್ಷವು ಸೂಚಿಸುವ ಅಭ್ಯರ್ಥಿಗಳಿಗೆ ಗೆಲ್ಲಿಸಿಕೊಂಡು ಬರಬೇಕಾಗಿದೆ, ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮನವಿ ಮಾಡಿದರು.ಅವರು ಶನಿವಾರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರು ಕರೆ ಕೊಟ್ಟಿದ್ದ 400 ಪಾರ್ ಮಾಡಲು ನಮ್ಮಿಂದ ಸಾಧ್ಯವಾಗಿಲ್ಲಾ, ನಮ್ಮಲ್ಲಿಯ ಕಾಂಗ್ರೆಸ್ ಮಾನಸಿಕತೆ, ರಾಷ್ಟ್ರವಿರೋಧಿ ಮಾನಸಿಕತೆ, ಪಕ್ಷದ ಸಿದ್ಧಾಂತಕ್ಕೆ ವಿರೋಧಿಸುವ ಮಾನಸಿಕತೆ ಇರುವವರನ್ನು ಕಾಂಗ್ರೆಸ್ ದೇಶದೆಲ್ಲೆಡೆ ಬಳಸಿಕೊಂಡಿತ್ತು, ಅದರ ಫಲವಾಗಿ ನಮ್ಮವರೇ ನಮ್ಮ ಜಿಲ್ಲೆಯಿಂದ ಒಂದು ಸೀಟ್ ಕಡಿಮೆಯಾದರೇನು ತೊಂದರೆಯಿಲ್ಲ ಎಂಬಿತ್ಯಾದಿ ಚರ್ಚೆಗಳು ಮುನ್ನಲೆಗೆ ತಂದರು.
ನಾನು ಸಂಸದನಾಗಿರದೆ ಇರಬಹುದು, ಆದರೆ, ಕೇಂದ್ರದಲ್ಲಿ ನಮ್ಮದೆ ಸರ್ಕಾರವಿದೆ, ನನ್ನ ವ್ಯಯಕ್ತಿಕ ವರ್ಚಸ್ಸಿದೆ, ಈಗಾಗಲೆ ನಾನು ಈ ಹಿಂದೆ ಹತ್ತಾರು ಪ್ರಸ್ತಾವನೆಗಳು ಸರ್ಕಾರಕ್ಕೆ ಸಲ್ಲಿಸಿದ್ದೆ ಆ ಪ್ರಸ್ತಾ ವನೆಗಳೆ ಮುಂದಿನ 5 ವರ್ಷಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದರು.
ಮುಂದಿನ ಕೆಲವೆ ದಿನಗಳಲ್ಲಿ ಸಿಕಂದ್ರಾಬಾದ್-ಬೀದರ-ಸಿಕಂದ್ರಾಬಾದ್ ಹೊಸ ಡೇಮೋ ರೈಲು ಸಹ ಪ್ರಾರಂಭವಾಗಲಿದೆ, ಈ ತರಹ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರದಿಂದ ನನ್ನ ಪ್ರಸ್ತಾವನೆಗಳಿಗೆ ಮಂಜೂರಾತಿ ಸಿಗಲಿವೆ, ಅಭಿವೃದ್ಧಿ ನಿರಂತರವಾಗಿರಲಿದೆ ಎಂದರು.ಈ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ರಾಜುಗೌಡ, ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾದ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಡಾ. ಸಿದ್ದು ಪಾಟೀಲ್, ಶರಣು ಸಲಗಾರ, ಎಮ್.ಜಿ.ಮೂಳೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಗುಂಡಪ್ಪ ವಕೀಲ, ಮುಖಂಡರಾದ ಜೈಕುಮಾರ ಕಾಂಗೆ, ಬಾಬುರಾವ ಮದಕಟ್ಟಿ, ಈಶ್ವರಸಿಂಗ್ ಠಾಕೂರ್, ಶಿವರಾಜ ಗಂದಗೆ, ಪಿರಪ್ಪ ಔರಾದೆ ಮುಂತಾದವರು ಉಪಸ್ಥಿತರಿದ್ದರು.
--ಚಿತ್ರ 20ಬಿಡಿಆರ್59
ಬಿಜೆಪಿ ಪಕ್ಷದ ಕಚೇರಿಯಲ್ಲಿ ಶನಿವಾರ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು.--