ಕೊಪ್ಪಳ: ಜಿಲ್ಲಾಸ್ಪತ್ರೆಯಲ್ಲಿರುವ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದ್ದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಶುಕ್ರವಾರ ನಗರದ ಜಿಲ್ಲಾಸ್ಪತ್ರೆಯ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ಜನರಿಗೆ ಅಗ್ಗದ ದರದಲ್ಲಿ ಔಷಧಿಗಳು ದೊರೆಯುವಂತೆ ಮಾಡಿದೆ.ಆದರೆ,ಇದರಲ್ಲಿಯೂ ರಾಜಕೀಯ ಮಾಡುವ ರಾಜ್ಯ ಸರ್ಕಾರದ ಕ್ರಮ ನಿಜಕ್ಕೂ ನೋವಿನ ಸಂಗತಿ.ರಾಜಕೀಯ ದ್ವೇಷ ಇದ್ದರೆ ರಾಜಕೀಯ ಪಕ್ಷದ ಮೇಲೆ ತೀರಿಸಿಕೊಳ್ಳಬೇಕು, ಅದು ಬಿಟ್ಟು, ಜನರಿಗೆ ಕಡಿಮೆ ದರದಲ್ಲಿ ಔಷಧಿ ದೊರೆಯುವುದನ್ನು ಸ್ಥಗಿತ ಮಾಡುವುದು ಯಾವ ನ್ಯಾಯ ಎಂದು ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದರು.
ರಾಜ್ಯ ಸರ್ಕಾರ ಕೂಡಲೇ ಇಂಥ ನಿರ್ಧಾರ ಹಿಂದೆ ಪಡೆಯಬೇಕು.ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಉಚಿತ ಔಷಧ ನೀಡುವಂತ ಕ್ರಮಕ್ಕೆ ಮುಂದಾಗಬೇಕು.ಅಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲರಿಗೂ ಸಂಪೂರ್ಣ ಚಿಕಿತ್ಸೆ ನೀಡುವಂತಹ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸುಗೂರು ಮಾತನಾಡಿ, ಕಡಿಮೆ ಔಷಧಿ ಜಿಲ್ಲಾಸ್ಪತ್ರೆಯಲ್ಲಿ ದೊರೆಯುವಂತೆ ಮಾಡಲಾಗಿದೆ. ಅದನ್ನು ಪ್ರೋತ್ಸಾಹಿಸಬೇಕಾದ ರಾಜ್ಯ ಸರ್ಕಾರ ಅದನ್ನು ಬಂದ್ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂಥ ಸರ್ಕಾರದ ನಿರ್ಧಾರದಿಂದ ಬಡವರು, ಕಾರ್ಮಿಕರು ಸೇರಿದಂತೆ ಎಲ್ಲರೂ ತೊಂದರೆಯಾಗುತ್ತದೆ. ಅವರಿಗೆ ಅಗ್ಗದ ಔಷಧಿ ದೊರೆಯುವುದು ಇಲ್ಲದಂತೆ ಆಗುತ್ತದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಕವಲೂರು, ಗಣೇಶ ಹೊರತ್ನಾಳ, ಬಸವರಾಜ, ರಮೇಶ ಕವಲೂರು, ಮಹಾಲಕ್ಷ್ಮಿ ಕಂದಾರಿ ಮೊದಲಾದವರು ಇದ್ದರು.