ವಕ್ಫ್ ಬೋರ್ಡ್‌ನಿಂದ ಜಮೀನು ಕಬಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Nov 23, 2024, 12:30 AM IST
22ಕೆಪಿಎಲ್3:ವಕ್ಫ್ ಬೋರ್ಡ್ ಕಾಯ್ದೆ ವಿರೋಧಿಸಿ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ಬಿಜೆಪಿ ಘಟಕ ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿತು. | Kannada Prabha

ಸಾರಾಂಶ

ವಕ್ಫ್ ಹೆಸರಿನಲ್ಲಿ ರೈತರ ಭೂಮಿ, ಮಠ, ಜನಸಾಮಾನ್ಯರ ಆಸ್ತಿ ಕಬಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಿಲುವನ್ನು ಖಂಡಿಸಿ ಶುಕ್ರವಾರ ಬಿಜೆಪಿ ಪ್ರತಿಭಟನೆ ನಡೆಸಿತು.

ಕೊಪ್ಪಳ: ವಕ್ಫ್ ಹೆಸರಿನಲ್ಲಿ ರೈತರ ಭೂಮಿ, ಮಠ, ಜನಸಾಮಾನ್ಯರ ಆಸ್ತಿ ಕಬಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಿಲುವನ್ನು ಖಂಡಿಸಿ ಶುಕ್ರವಾರ ಬಿಜೆಪಿ ಪ್ರತಿಭಟನೆ ನಡೆಸಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ್‌ಕುಮಾರ ಗುಳಗಣ್ಣನವರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ವಕ್ಫ್ ಹೆಸರಿಲ್ಲಿ ರೈತರ ಭೂಮಿ ಕೊಳ್ಳೆ ಹೊಡೆಯುತ್ತಿದೆ. ಒಂದು ಕೋಮಿನ ಜನರನ್ನು ಓಲೈಸುವ ಮೂಲಕ ರಾಜ್ಯದಲ್ಲಿರುವ ಕೋಮು ಸೌಹಾರ್ದ ಹಾಳು ಮಾಡುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಈ ಕುರಿತು ಸರಕಾರ ಕ್ರಮ ಕೈಗೊಳ್ಳಬೇಕು. ವಕ್ಫ್ ಬೋರ್ಡ್‌ ರದ್ದುಗೊಳಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಗಂಭೀರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕುಕನೂರಿನ ಶ್ರೀಅನ್ನದಾನೇಶ್ವರ ಮಠದ ಸ್ವಾಮೀಜಿ ಮಾತನಾಡಿ, ಈಗಿನ ಸರಕಾರ ಹಿಂದುಗಳನ್ನು ಟಾರ್ಗೆಟ್ ಮಾಡಿ ತಲೆಮಾರುಗಳಿಂದ ಭೂಮಿ ಹೊಂದಿರುವ ರೈತರ ಭೂಮಿ ಕಬಳಿಸಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಭೂಮಿ ಕಸಿದುಕೊಳ್ಳಲು ಹೊರಟಿದೆ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ನಾನು ಕೇಳಿದ ಪ್ರಶ್ನೆಗೆ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಅತಿಕ್ರಮಣವಾಗಿದೆ ಎಂಬ ವರದಿ ನೀಡಿದ್ದರು. ಆದರೆ, ಇಲ್ಲಿ ಯಾವುದು ವಾಸ್ತವ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದರು.

ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ೪೮೦೦ ರೈತರಿಗೆ ವಕ್ಫ್‌ನಿಂದ ಆಸ್ತಿಗಾಗಿ ನೋಟಿಸ್ ನೀಡಿದೆ. ಅವರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದನ್ನು ಜಿಲ್ಲಾಧಿಕಾರಿಗಳು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬೆಳಗ್ಗೆ ೧೦ಕ್ಕೆ ಆರಂಭವಾದ ಧರಣಿ ಸತ್ಯಾಗ್ರಹ ಸಂಜೆ ೫ರ ವರೆಗೆ ನಡೆಯಿತು. ಧರಣಿಯುದ್ದಕ್ಕೂ ಬಿಜೆಪಿ ಮುಖಂಡರು ಸರ್ಕಾರ ಹಾಗೂ ವಕ್ಫ್‌ ಬೋರ್ಡ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮೈನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚರ್ಯ ಸ್ವಾಮೀಜಿ, ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ್, ಸುನೀಲ್ ಹೆಸರೂರು, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮುಖಂಡರಾದ ಡಾ. ಬಸವರಾಜ, ಬಸವರಾಜ ಧಡೆಸುಗೂರು, ಕರಿಯಣ್ಣ ಸಂಗಟಿ, ಶರಣು ತಳ್ಳಿಕೇರಿ, ಬಸಲಿಂಗಪ್ಪ ಭೂತೆ, ಕಳಕಪ್ಪ, ಗಣೇಶ ಹೊರತಟ್ನಾಳ, ಮಹಿಳಾ ಮೋಚಾ ಜಿಲ್ಲಾಧ್ಯಕ್ಷೆ ರತ್ನಾ ಕುಮಾರಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಡೆಸ್ಗೂರು, ರಮೇಶ ಕವಲೂರು, ದೇವರಾಜ್ ಹಾಲಸಮುದ್ರ, ರವಿಚಂದ್ರ ಪಾಟೀಲ್, ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ, ವಕ್ತಾರ ಸೋಮಶೇಖರಗೌಡ, ಮಹಿಳಾ ಮುಖಂಡರಾದ ವಾಣಿಶ್ರೀ ಮಠದ, ಕೀರ್ತಿ ಪಾಟಿಲ್, ಶೋಭಾ ನಗರಿ ಸೇರಿ ಇತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ