ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಜನೌಷಧಿ । ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜನೌಷಧಿ ಕೇಂದ್ರಗಳನ್ನು ಆಸ್ಪತ್ರೆ ಆವರಣದಿಂದ ತೆರವುಗೊಳಿಸಲು ಮುಂದಾದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ದೀನ ದುರ್ಬಲರು, ಬಡವರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿ ಆಸರೆಯಾಗಿದ್ದನ್ನು ಸಹಿಸದ ರಾಜ್ಯ ಕಾಂಗ್ರೆಸ್ ಸರ್ಕಾರ ಜನೌಷಧಿ ಕೇಂದ್ರ ಮುಚ್ಚಿಸಿ ಜನರಿಗೆ ಇನ್ನಷ್ಟು ಬರೆ ಎಳೆಯಲು ಮುಂದಾಗಿದೆ ಎಂದು ಆರೋಪಿಸಿದರು.ನರೇಂದ್ರ ಮೋದಿ ಜನಪರ ಆಡಳಿತ ಹಾಗೂ ಆಸ್ಪತ್ರೆಗಳಲ್ಲಿ ಅಳವಡಿಸಿರುವ ಫ್ಲೆಕ್ಸ್ಗಳನ್ನು ಜನರ ಮನಸ್ಸಿನಿಂದ ಹೊರ ದಾಟಿಸಲು ಆರೋಗ್ಯ ಸಚಿವರು ಈ ನಿರ್ಧಾರ ಕೈಗೊಂಡಿರುವುದು ತರವಲ್ಲ. ಸರ್ಕಾರಿ ಕಚೇರಿಗಳು ಸಾರ್ವಜನಿಕರ ಆಸ್ತಿ, ಕಾಂಗ್ರೆಸ್ಸಿಗೆ ಬರೆದು ಕೊಟ್ಟಿಲ್ಲ, ಕಡಿಮೆ ದರದಲ್ಲಿ ದೊರೆಯುವ ಔಷಧಿ ಕೇಂದ್ರಗಳನ್ನು ಮುಚ್ಚಿಸಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ಸೂಕ್ತ ಸಮಯದಲ್ಲಿ ಆರೋಗ್ಯ ಸುಧಾರಿಸಲು ಮೋದಿ ಸರ್ಕಾರ ಕಡಿಮೆ ವೆಚ್ಚದಲ್ಲಿ ಔಷಧಿ, ಶಸ್ತ್ರ ಚಿಕಿತ್ಸೆಗಾಗಿ ₹3-4 ಲಕ್ಷ ಗಳವರೆಗೆ ಆರ್ಥಿಕ ಸಹಾಯ ನೀಡಿದೆ. ಆದರೆ, ರಾಜ್ಯದಲ್ಲಿ ಪಹಣಿ, ಹಾಲು, ಪೆಟ್ರೋಲ್ ಸೇರಿದಂತೆ ಇದೀಗ ರೋಗಿಗಳನ್ನು ಬಿಡದೇ ಖಾಸಗಿ ಮೆಡಿಕಲ್ ಶಾಪ್ಗಳಲ್ಲಿ ಖರೀದಿಸ ಬೇಕೆಂದು ರಾಜ್ಯ ಸರ್ಕಾರ ನಿರ್ಣಯಿಸಿ ಹಗಲು ದರೋಡೆ ಮಾಡುತ್ತಿದೆ ಎಂದರು.ರಾಜ್ಯ ಸರ್ಕಾರಕ್ಕೆ ಜನಸಾಮಾನ್ಯರ ಕಾಳಜಿಯಿದ್ದಲ್ಲಿ ಆರನೇ ಗ್ಯಾರಂಟಿಯಾಗಿ ಉಚಿತ ಶಿಕ್ಷಣ, ಆರೋಗ್ಯ ಸೇವೆ ಒದಗಿಸಲಿ. ಜೊತೆಗೆ ಪ್ರತಿ ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡಲು ಘೋಷಿಸಲಿ ಎಂದ ಅವರು, ಇದನ್ನು ಬಿಟ್ಟು ಬಡವರಿಗೆ ಉಪಕಾರಿಯಾದ ಜನೌಷಧಿ ಕೇಂದ್ರಗಳ ಮೇಲೆ ಕಣ್ಣಿಟ್ಟು ನಿರಂತರವಾಗಿ ಶೋಷಿಸಲು ತಯಾರಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಲು ಕೈಗೊಂಡಿರುವ ನಿರ್ಣಯವನ್ನು ಹಿಂಪಡೆಯದಿದ್ದಲ್ಲಿ ರಾಜ್ಯಾದ್ಯಂತ ತೀವ್ರವಾಗಿ ಪ್ರತಿಭಟನೆ ನಡೆಸುತ್ತೇವೆ. ಜೊತೆಗೆ ಮೋದಿಯವರ ಫ್ಲೆಕ್ಸ್ಗಳ ತೆರವಿಗೆ ಮುಂದಾದರೆ ರಾಜ್ಯ ಸರ್ಕಾರದ ಫ್ಲೆಕ್ಸ್ಗಳು ಬೆಂಕಿಗಾಹುತಿ ಯಾಗಲಿವೆ ಎಂದು ಎಚ್ಚರಿಸಿದರು.ನಗರಸಭಾ ಮಾಜಿ ಅಧ್ಯಕ್ಷ ಪ್ರೇಮ್ಕುಮಾರ್ ಮಾತನಾಡಿ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯ ಸರ್ಕಾರ ಔಷಧಿ ದಂಧೆಗೆ ಮುಂದಾಗಿದೆ. ಬಡವರು, ಮಧ್ಯಮ ವರ್ಗದವರ ಅನುಕೂಲಕ್ಕೆ ತೆರೆದಿರುವ ಜನೌಷಧಿ ಕೇಂದ್ರಗಳಲ್ಲಿ ಸುಮಾರು 1500ಕ್ಕೂ ಹೆಚ್ಚು ಔಷಧಿಗಳು ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ದೊರಕುತ್ತಿರುವುದನ್ನು ತಪ್ಪಿಸಲು ಹೊರಟಿರುವುದು ನ್ಯಾಯ ಸಮಂಜಸವೇ ಎಂದು ಪ್ರಶ್ನಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ಮಾತನಾಡಿ, ಕಡಿಮೆ ದರದಲ್ಲಿ ಲಭ್ಯವಾಗುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಕೊಡಲಿಪೆಟ್ಟು ಹಾಕುತ್ತಿರುವ ರಾಜ್ಯ ಸರ್ಕಾರ ನಡೆ ಖಂಡನೀಯ. ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಸೌಲಭ್ಯ ಸಂಪೂರ್ಣವಾಗಿದೆಯೇ ಎಂದು ತಿಳಿದು ಸರಿಪಡಿಸಬೇಕೇ ಹೊರತು ಜನೌಷಧಿ ಕೇಂದ್ರಗಳನ್ನು ತೆರವಿಗೆ ಮುಂದಾಗಿರುವುದು ನಾಚಿಗೇಡಿನ ಸಂಗತಿ ಎಂದರು.ಬಿಜೆಪಿ ನಗರಾಧ್ಯಕ್ಷ ಕೆ.ಎಸ್. ಪುಷ್ಪರಾಜ್ ಮಾತನಾಡಿ, ಖಾಸಗಿ ಮೆಡಿಕಲ್ ಶಾಪ್ಗಳಲ್ಲಿ ₹100 ರು ಬೆಲೆಯಲ್ಲಿ ಲಭ್ಯ ವಾಗುವ ಔಷಧಗಳು, ಜನೌಷಧಿ ಕೇಂದ್ರದಲ್ಲಿ ಕೇವಲ ₹10 ಕ್ಕೆ ಸಿಗುತ್ತಿದೆ. ಹೀಗಾಗಿ ಉತ್ತಮ ಔಷಧಿ ಕೇಂದ್ರಗಳನ್ನು ತೆರವಿಗೆ ನೇರವಾಗಿ ನಮ್ಮ ವಿರೋಧವಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮಭರಣ್ಯ, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ತಾಪಂ ಮಾಜಿ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ, ನಗರಸಭೆ ಮಾಜಿ ಸದಸ್ಯ ರವಿಕುಮಾರ್, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರುಗಳಾದ ಡಾ.ನರೇಂದ್ರ, ಸಚ್ಚಿನ್ಗೌಡ, ಎಚ್.ಕೆ.ಕೇಶವಮೂರ್ತಿ, ಬಸವರಾಜ್, ಮೋಹನ್, ರೇವನಾಥ್, ಎಸ್ಡಿಎಂ ಮಂಜು ಹಾಜರಿದ್ದರು. 30 ಕೆಸಿಕೆಎಂ 1ಜನೌಷಧಿ ಕೇಂದ್ರಗಳನ್ನು ಆಸ್ಪತ್ರೆ ಆವರಣದಿಂದ ತೆರವುಗೊಳಿಸಲು ಮುಂದಾದ ರಾಜ್ಯ ಸರ್ಕಾರದ ನಡೆ ಖಂಡಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.