ಎಚ್ಚೆಸ್ವಿ ಅಗಲಿಕೆ: ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ

KannadaprabhaNewsNetwork | Published : May 30, 2025 11:58 PM
ಚನ್ನಪಟ್ಟಣ: ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಭಾವಗೀತೆಗಳಿಗೆ ಭಾವನೆಗಳನ್ನು ಕಟ್ಟಿಕೊಟ್ಟಿದ್ದರು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಅಭಿಪ್ರಾಯಪಟ್ಟರು.

ಚನ್ನಪಟ್ಟಣ: ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಭಾವಗೀತೆಗಳಿಗೆ ಭಾವನೆಗಳನ್ನು ಕಟ್ಟಿಕೊಟ್ಟಿದ್ದರು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಗಾಂಧಿ ಭವನದ ಬಳಿ ಅಗಲಿದ ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಚ್‌ಎಸ್‌ವಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಸುಗಮ ಸಂಗೀತ, ಕಿರುತೆರೆ, ಬೆಳ್ಳಿತೆರೆ ಕ್ಷೇತ್ರದಲ್ಲೂ ಗಮನಾರ್ಹವಾದ ಸಾಧನೆ ಮಾಡಿದ್ದರು. ಕಲಬುರಗಿಯಲ್ಲಿ ನಡೆದ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದು ಹೇಳಿದರು.

ಶಿಕ್ಷಣ ಸಂಯೋಜಕ ಯೋಗೀಶ್ ಚಕ್ಕೆರೆ ಮಾತನಾಡಿ, ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಮುಂತಾದ ಚಲನಚಿತ್ರಗಳಿಗೆ ಗೀತಸಾಹಿತ್ಯ ರಚಿಸಿದ್ದು, ಹಲವಾರು ಧಾರಾವಾಹಿಗಳಿಗೆ ಶೀರ್ಷಿಕೆಗಳಾಗಿ ಮೂಡಿಬಂದಿವೆ ಎಂದು ತಿಳಿಸಿದರು.

ಲೇಖಕ ಶ್ರೀನಿವಾಸ ರಾಂಪುರ ಮಾತನಾಡಿ, ಮಕ್ಕಳನ್ನು ಧ್ಯೇಯವಾಗಿಟ್ಟುಕೊಂಡು ಎಚ್ಚೆಸ್ವಿ ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ಋತುಸಂಹಾರ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ. ಕ್ರಿಯಾಪರ್ವ, ಎ?ಂದು ಮುಗಿಲು, ನದೀತೀರದಲ್ಲಿ, ಉತ್ತರಾಯಣ ಮೊದಲಾದವು ಇವರ ಮುಖ್ಯ ಕಾವ್ಯಕೃತಿಗಳು. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ ಇವರ ಮುಖ್ಯ ನಾಟಕಗಳು. ಎಚ್ಚೆಸ್ವಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ ಎಂದರು.

ಕಾರ್ಯಕ್ರಮದಲ್ಲಿ ಹೋರಾಟಗಾರ ನಾಗವಾರ ಶಂಭೂಗೌಡ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಮತ್ತೀಕೆರೆ ಬಿ.ಚಲುವರಾಜು, ನಿವೃತ್ತ ಅಧ್ಯಾಪಕ ಚೌಡೇಗೌಡ, ಟಿ.ಎನ್.ನಾಮದೇವ್, ಕವಿಗಳಾದ ಮಂಜೇಶ್‌ಬಾಬು, ಕೂರಣಗೆರೆ ಕೃಷ್ಣಪ್ಪ, ಬಿ.ಎನ್.ಕಾಡಯ್ಯ, ಗಾಯಕರಾದ ಗೋವಿಂದಹಳ್ಳಿ ಶಿವಣ್ಣ, ಚೌ.ಪು.ಸ್ವಾಮಿ, ಪ್ರಸನ್ನಕುಮಾರ್, ಚಕ್ಕೆರೆ ಲೋಕೇಶ್, ಶಿವಪ್ಪ, ಮಂಜುನಾಥ್, ರಾಜೇಶ್, ಎಲ್ಲೇಗೌಡ ಮುಂತಾದವರಿದ್ದರು.

ಪೊಟೋ೩೦ಸಿಪಿಟಿ೨: ಚನ್ನಪಟ್ಟಣ ಗಾಂಧಿ ಭವನದ ಬಳಿ ಜಿಲ್ಲಾ ಕಸಾಪದಿಂದ ಅಗಲಿದ ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿಗೆ ಶ್ರದ್ಧಾಂಜಲಿ ಸಭೆ ನಡೆಯಿತು.