ತುಂಗಭದ್ರಾ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹಿಸದಿರಲು ಆಗ್ರಹ

KannadaprabhaNewsNetwork | Published : May 30, 2025 11:57 PM
ಕ್ರಸ್ಟ್‌ಗೇಟ್‌ ಸವಕಳಿ ಹೊಂದಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ 25 ಟಿಎಂಸಿ ನೀರು ಸಂಗ್ರಹವಾಗುತ್ತಿದ್ದಂತೆಯೇ ಎಚ್‌ಎಲ್‌ಸಿ, ಎಲ್‌ಎಲ್‌ಸಿ, ಎಲ್‌ಬಿಎಂಸಿಗಳಿಗೆ ನೀರು ಹರಿಸಬೇಕು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ. ಪುರುಷೋತ್ತಮಗೌಡ ಒತ್ತಾಯಿಸಿದ್ದಾರೆ.

ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ 25 ಟಿಎಂಸಿ ನೀರು ಸಂಗ್ರಹವಾಗುತ್ತಿದ್ದಂತೆಯೇ ಎಚ್‌ಎಲ್‌ಸಿ, ಎಲ್‌ಎಲ್‌ಸಿ ಹಾಗೂ ಎಲ್‌ಬಿಎಂಸಿ ಕಾಲುವೆಗಳಿಗೆ ನೀರು ಹರಿಸುವಂತೆ "ತುಂಗಭದ್ರಾ ರೈತ ಸಂಘ " ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಿ. ಪುರುಷೋತ್ತಮಗೌಡ, ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಕೆ ಕುರಿತು ರೈತರಲ್ಲಿ ಸಾಕಷ್ಟು ಗೊಂದಲಗಳಿದ್ದು, ಜಲಸಂಪನ್ಮೂಲ ಸಚಿವರು ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರೈತ ಸಂಘಗಳ ಮುಖಂಡರ ಸಭೆ ಕರೆದು ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.

ಕ್ರಸ್ಟ್‌ ಗೇಟ್‌ಗಳು ಸವೆತ ಆಗಿರುವುದರಿಂದ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡುವಂತಿಲ್ಲ. ಜಲಾಶಯ ಭರ್ತಿಯಾದರೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅವುಗಳಿಗಿಲ್ಲ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ. ಈ ಬಾರಿ ಬೇಸಿಗೆ ಬೆಳೆಗೆ ನೀರು ಸಿಗುತ್ತದೆಯೋ? ಇಲ್ಲವೋ ಎಂದು ರೈತರು ಆತಂಕಗೊಂಡಿದ್ದಾರೆ. ಹೀಗಾಗಿ ಜಲ ಸಂಪನ್ಮೂಲ ಸಚಿವರು ಸಭೆ ಕರೆಯಬೇಕು. ಸಭೆಯಲ್ಲಿ ಕ್ರಸ್ಟ್‌ಗೇಟ್ ಅಳವಡಿಕೆ ವಿಚಾರ ಸಂಬಂಧ ಸ್ಪಷ್ಟ ಮಾಹಿತಿ ನೀಡಬೇಕು. ಸವೆತ ಕಂಡಿರುವ ಗೇಟ್‌ಗಳನ್ನು ಬದಲಾಯಿಸುವ ಕಾರ್ಯ ಎಂದು ಆರಂಭವಾಗುತ್ತದೆ? ಪೂರ್ಣಗೊಳ್ಳುವುದು ಯಾವಾಗ? ಎಂಬಿತ್ಯಾದಿ ಮಾಹಿತಿಯನ್ನು ರೈತರಿಗೆ ಖಚಿತಪಡಿಸಬೇಕು. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸದೆ ಕಾಲುವೆಗಳಿಗೆ ಹರಿದುಬಿಡಬೇಕು. ಇದರಿಂದ ರೈತರ ಬೆಳೆಗಳಿಗೂ ಅನುಕೂಲವಾಗಲಿದೆ ಎಂದು ಪುರುಷೋತ್ತಮಗೌಡ ಒತ್ತಾಯಿಸಿದರು.

ಜನಪ್ರತಿನಿಧಿಗಳ ಪಾತ್ರವೇನು?: ರೈತರ ಹಿತ ಕಾಯುವ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಪಾತ್ರವೇನು? ಎಂಬುದು ಈ ವರೆಗೆ ಗೊತ್ತಾಗುತ್ತಿಲ್ಲ. ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಕೆ ಸೇರಿದಂತೆ ರೈತರ ಹಿತ ಕಾಯುವ ಸಂಬಂಧ ಯಾವುದೇ ಹೊಣೆಗಾರಿಕೆಯನ್ನು ಜಿಲ್ಲೆಯ ಸಚಿವರು, ಶಾಸಕರು ಹಾಗೂ ಸಂಸದರು ತೆಗೆದುಕೊಳ್ಳುತ್ತಿಲ್ಲ. ಜಲಾಶಯ ವಿಷಯವಾಗಿ ಆಗುತ್ತಿರುವ ಬೆಳವಣಿಗೆ ಕುರಿತು ಜನಪ್ರತಿನಿಧಿಗಳಾದವರು ಸಂಬಂಧಿಸಿದ ಸಚಿವರ ಜತೆಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳುವ ಯಾವ ಕಾಳಜಿಯೂ ಜಿಲ್ಲೆಯ ಜನಪ್ರತಿನಿಧಿಗಳಿಂದ ಕಂಡುಬರುತ್ತಿಲ್ಲ. ಕಳೆದ ಮಾರ್ಚ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲೆಯ ಶಾಸಕರು ರೈತರ ಹಿತ ಕಾಯುವ ಯಾವ ನಿರ್ಧಾರಕ್ಕೂ ಬದ್ಧತೆ ಪ್ರದರ್ಶಿಸಲಿಲ್ಲ. ಜಿಲ್ಲೆಯ ರೈತರಾಗುತ್ತಿರುವ ಅನ್ಯಾಯ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದಾಗ ನಮ್ಮನ್ನು ಸಮಾಧಾನಪಡಿಸುವ ಕೆಲಸ ಮಾಡುತ್ತಾರೆಯೇ ವಿನಃ ಅನ್ನದಾತರ ಅಳಲು ಕೇಳಲು ಯಾರೂ ತಯಾರಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಪ್ರಮುಖರಾದ ಖಾಜಾವಲಿ ಚನ್ನಪಟ್ಟಣ, ಗೆಣಿಕೆಹಾಳು ಶರಣನಗೌಡ, ಮುಷ್ಠಿಗಟ್ಟೆ ಭೀಮನಗೌಡ, ದೊಡ್ಡ ಮಲ್ಲಪ್ಪ ಕೊಂಚಿಗೇರಿ, ಗೋವಿಂದಪ್ಪ, ಉಮೇಶ್ ಎ.ಪಿ., ಮಲ್ಲಾರೆಡ್ಡಿ ಡಿ. ಕಗ್ಗಲ್, ಶ್ರೀಧರಗೌಡ ಜಾಲಿಹಾಳು, ವೀರನಗೌಡ, ಬಾಣಾಪುರ ಪಂಪನಗೌಡ ಸುದ್ದಿಗೋಷ್ಠಿಯಲ್ಲಿದ್ದರು.