ರಾಮನಗರ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು.ಗಳ ಹಗರಣದ ರುವಾರಿ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಚಿವ ಬಿ.ನಾಗೇಂದ್ರ ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಬಳಸಿಕೊಂಡಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಕಪ್ಪುಚುಕ್ಕೆ. ಬಡವರಿಗೆ ಸಿಗಬೇಕಾದ ಮನೆಗಳು, ಯುವಕರಿಗೆ ಸಾಲ ಸೌಲಭ್ಯಗಳು, ರೈತರಿಗೆ ಭೂಮಿ ಕೊಡುವುದಕ್ಕೆ ಖರ್ಚಾಗಬೇಕಿದ್ದ ಹಣ ತೆಲಂಗಾಣದ ಕಾಂಗ್ರೆಸ್ ಪಾರ್ಟಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ, ಬಾರ್, ಬೇನಾಮಿ ಖಾತೆಗಳಿಗೆ ಕೋಟ್ಯಂತರ ರು.ಪಾಯಿ ಕಳುಹಿಸಿದ್ದಾರೆ ಎಂದು ದೂರಿದರು.
ವಾಲ್ಮೀಕಿ ಹಗರಣದ ಬಗ್ಗೆ ಬಿಜೆಪಿಯು ಧ್ವನಿ ಎತ್ತಿದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 89 ಕೋಟಿ ಹಗರಣವಾಗಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದರು. ಈ ಹಗರಣದ ಹಣದಲ್ಲಿ ಹೈಕಮಾಂಡ್ ಪಾಲು ಸಹ ಇರುವುದರಿಂದಲೇ ಬಿ.ನಾಗೇಂದ್ರ ಅವರನ್ನು ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ನಾಗೇಂದ್ರ ಅವರಿಗೆ ಇಲ್ಲಿವರೆಗೂ ಕ್ಲೀನ್ ಚಿಟ್ ಸಿಕ್ಕಿಲ್ಲ. ಅವರ ವಿರುದ್ಧ ಈಗಲೂ ತನಿಖೆ ನಡೆಯುತ್ತಿದೆ. ಆದರೂ ಮತ್ತೆ ಅವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, ಅವರದೇ ಸಮುದಾಯದ ಬೇರೊಬ್ಬರಿಗೆ ಸಚಿವರನ್ನಾಗಿ ಮಾಡುವಂತೆ ಸದನ ಆರಂಭವಾಗುವ ಮೊದಲೇ ಬಿಜೆಪಿ ಆಗ್ರಹಿಸಿದೆ. ಹಾಗಾಗಿ ನಾಗೇಂದ್ರ ರಾಜೀನಾಮೆ ಪಡೆದು ಪರಿಶಿಷ್ಟ ಪಂಗಡಕ್ಕೆ ನ್ಯಾಯ ನೀಡಬೇಕು ಎಂದು ಪ್ರಸಾದ್ ಗೌಡ ಆಗ್ರಹಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಕೇಳಿದರೆ ತಮಗೆ ಫೋನ್ ಮಾಡುವಂತೆ ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೀಗ ಭ್ರಷ್ಟಾಚಾರಿಯನ್ನೇ ಮುಖ್ಯಮಂತ್ರಿಗಳು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ನಾವು ಯಾರಿಗೆ ಫೋನ್ ಮಾಡಿ ದೂರು ಹೇಳಬೇಕು. ಡಿಕೆಶಿ ಸಚಿವ ಸಂಪುಟದಲ್ಲಿ ಇರುವವರೆಲ್ಲರೂ ಭ್ರಷ್ಟಾಚಾರಿಗಳೇ ಎಂದು ದೂರಿದರು.
17ಕೆಆರ್ ಎಂಎನ್ 1.ಜೆಪಿಜಿ