ಹಿಜಾಬ್, 2ಬಿ ಮೀಸಲಾತಿ ರದ್ದು, ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ತಡೆ ಕಾನೂನು ರದ್ದುಗೊಳಿಸಬೇಕು ಎನ್ನುವುದು ಎಲ್ಲ ಮತೀಯ ಭಾಷೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಆಗ್ರಹವಾಗಿದೆ.
ಭಟ್ಕಳ:
ಇಲ್ಲಿನ ಮಜ್ಲಿಸೆ ಇಸ್ಲಾಹ ವ ತಂಝೀಂ ನಿಯೋಗ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಅಲ್ಪಸಂಖ್ಯಾತ ಮುಸ್ಲಿಂ ವಿರೋಧಿ ಕಾನೂನು ರದ್ದುಗೊಳಿಸುವುದು ಹಾಗೂ ಜಿಲ್ಲೆಯಲ್ಲಿ ಕೋಮುದ್ವೇಷ, ಉದ್ವಿಗ್ನತೆ ಸೃಷ್ಟಿಸಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಆಗ್ರಹಿಸಿದೆ.ಹಿಜಾಬ್, 2ಬಿ ಮೀಸಲಾತಿ ರದ್ದು, ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ತಡೆ ಕಾನೂನು ರದ್ದುಗೊಳಿಸಬೇಕು ಎನ್ನುವುದು ಎಲ್ಲ ಮತೀಯ ಭಾಷೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಆಗ್ರಹವಾಗಿದೆ. ಬಿಜೆಪಿ ಸರ್ಕಾರದ ಕೋಮುವಾದಿ ಮತ್ತು ಪ್ಯಾಸಿಸ್ಟ್ ನೀತಿ ಧಿಕ್ಕರಿಸಿದ ರಾಜ್ಯದ ಜನತೆ ಮತ್ತು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯ ಏಕಮತದಿಂದ ಕಾಂಗ್ರೆಸ್ಸಿಗೆ ಬಹುಮತ ನೀಡಿದೆ ಎಂದು ಮುಖ್ಯಮಂತ್ರಿಗೆ ನಿಯೋಗ ತಿಳಿಸಿದೆ.ಮುಸ್ಲಿಂ ಸಮುದಾಯವನ್ನು ಪ್ರವರ್ಗ 2ಬಿ ಯಿಂದ ಕೈಬಿಡುವುದು, ಹಿಜಾಬ್ ನಿಷೇಧ, ಗೋಹತ್ಯೆ ತಡೆ ನಿರ್ಬಂಧಕ ಕಾಯ್ದೆ ಹಾಗೂ ಮತಾಂತರ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ರದ್ದುಗೊಳಿಸಿ ಕಾನೂನು ರೂಪಿಸಬೇಕೆಂದು ತಂಝೀಂ ನಿಯೋಗ ಸಿಎಂ ಅವರಲ್ಲಿ ಆಗ್ರಹಿಸಿದೆ. ಅದರಂತೆ ಮನವಿಯಲ್ಲಿ ಲೋಕಸಭೆ ಚುನಾವಣೆ ಮೊದಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ಮತ್ತು ಕೋಮುಗಲಭೆ ಉಂಟು ಮಾಡುವ, ಧಾರ್ಮಿಕ ಗಲಭೆ ಸೃಷ್ಟಿಸುವ ಯತ್ನ ನಡೆಸಿರುವುದು ಕಳವಳಕಾರಿಯಾಗಿದೆ. ಇಂತಹ ಚಟುವಟಿಕೆ ತಡೆಯಲು ನಾಗರಿಕರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದರೂ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.ಜ. 14ರಂದು ಜಾಲಿ ಪಪಂ ವ್ಯಾಪ್ತಿಯ ಮಸೀದಿ ಮುಂಭಾಗದಲ್ಲಿ ಕೇಸರಿ ಧ್ವಜ ಅಳವಡಿಸಲು ಕಂಬ ಹುಗಿದು ಕಾನೂನು ಉಲ್ಲಂಘಿಸಿ ಸಮಸ್ಯೆ ಸೃಷ್ಟಿಸಲಾಗಿದೆ. ಜ. 15ರಂದು ಹೆಬಳೆ ಗ್ರಾಪಂ ವ್ಯಾಪ್ತಿಯಲ್ಲಿ ಪದೇ ಪದೇ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಮು ಉದ್ವಿಘ್ನತೆ ಹೆಚ್ಚಾಗಿದ್ದು, ಕೆಲವು ಜವಾಬ್ದಾರಿಯುತ ವ್ಯಕ್ತಿಗಳು ಮತ್ತು ಗುಂಪುಗಳು ದ್ವೇಷದ ಭಾಷಣ ಪ್ರಚಾರ ಮಾಡುತ್ತಿರುವುದು ಆತಂಕ ತಂದಿದೆ. ಇದಕ್ಕೆ ಕ್ರಮ ಕೈಗೊಳ್ಳಬೇಕಾದ ಪೊಲೀಸರಿಂದಲೂ ನಿಷ್ಕ್ರಿಯರಾಗಿದ್ದಾರೆ. ತಾವೇ ಖುದ್ದು ಮಧ್ಯಪ್ರವೇಶಿಸಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ತಂಝೀಂ ನಿಯೋಗದಲ್ಲಿ ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಉಪಾಧ್ಯಕ್ಷ ಅತೀಖುರೆಹಮಾನ ಮುನೀರಿ, ಮೊಹಿನುದ್ದೀನ್ ರುಕ್ನುದ್ದೀನ್, ಇಕ್ಬಾಲ್ ಸುಹೈಲ್, ವಕೀಲ ಇಮ್ರಾನ್ ಲಂಕಾ, ಕೆ.ಎಂ. ಅಸ್ಫಾಕ್, ಫಝಾನ್ ಬರ್ಮಾವರ, ಅಶ್ರಪ್ ಶಾಬಂದ್ರಿ, ಮುಬೀನ್ ದಾಮುದಿ ಮುಂತಾದವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.