ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಪರವಿದ್ದ ಬಿಜೆಪಿ

KannadaprabhaNewsNetwork | Published : May 1, 2024 1:15 AM

ಸಾರಾಂಶ

ಕಾಂಗ್ರೆಸ್ ಸ್ವಾತಂತ್ರ್ಯದ ಹೋರಾಟಕ್ಕಾಗಿ ಉದಯಿಸಿದ ಪಕ್ಷ. ಆದರೆ, ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಅದು ಬ್ರಿಟಿಷರ ಪರವಾಗಿದ್ದ ಪಕ್ಷ ಎಂದು ಕೈಗಾರಿಕೆ, ಮೂಲಸೌಲಭ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಬಿಜೆಪಿ ವಿರುದ್ಧ ಗುಡುಗಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಂಗ್ರೆಸ್ ಸ್ವಾತಂತ್ರ್ಯದ ಹೋರಾಟಕ್ಕಾಗಿ ಉದಯಿಸಿದ ಪಕ್ಷ. ಆದರೆ, ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಅದು ಬ್ರಿಟಿಷರ ಪರವಾಗಿದ್ದ ಪಕ್ಷ ಎಂದು ಕೈಗಾರಿಕೆ, ಮೂಲಸೌಲಭ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಬಿಜೆಪಿ ವಿರುದ್ಧ ಗುಡುಗಿದರು.

ತಿಕೋಟಾ ತಾಲೂಕಿನ ಟಕ್ಕಳಕಿ ಮತ್ತು ಜಾಲಗೇರಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ಬಿಜೆಪಿಯವರ ಪ್ರಶ್ನೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳು ಉತ್ತರವಾಗಿವೆ. ಕಾಂಗ್ರೆಸ್ ದೇಶಕ್ಕಾಗಿ ಏನು ಮಾಡಿದೆ? ಎಂದು ಕೇಳುವ ಬಿಜೆಪಿಗರಿಗೆ ಪ್ರೊ.ರಾಜು ಆಲಗೂರ ಅವರಿಗೆ ಮತ ಹಾಕುವ ಮೂಲಕ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.ಸಂಸದ ರಮೇಶ ಜಿಗಜಿಣಗಿ ಏನೂ ಕೆಲಸ ಮಾಡಿಲ್ಲ. ಜಿಲ್ಲೆಯ ಪರ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಕಾಂಗ್ರೆಸ್ ತ್ಯಾಗ ಬಲಿದಾನಗಳ ಪಕ್ಷ. ಬಿಜೆಪಿ ಬ್ರಿಟಿಷರ ಪರವಾಗಿದ್ದ ಪಕ್ಷ. ಭಾರತದೊಂದಿಗೆ ಸ್ವಾತಂತ್ರ್ಯ ಹೊಂದಿರುವ ಅನೇಕ ರಾಷ್ಟ್ರಗಳು ಇನ್ನೂ ಅಭಿವೃದ್ಧಿಯಾಗದೇ ಆಹಾರಕ್ಕಾಗಿ ಹೆಣಗಾಡುತ್ತಿವೆ. ಆದರೆ, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದರಿಂದ ಭಾರತ ಇಂದು ಸದೃಢವಾಗಿ ನಿಂತಿದೆ ಎಂದರು.

ಮೋದಿ ಪೊಳ್ಳು ಭರವಸೆ ಬಗ್ಗೆ ಯುವಕರು ಸೇರಿದಂತೆ ಎಲ್ಲರಿಗೂ ಅರಿವಾಗಿದ್ದು, ಈ ಬಾರಿ ಜಾಗೃತರಾಗಿದ್ದಾರೆ. ಕಾಂಗ್ರೆಸ್ ಪರವಾಗಿದ್ದಾರೆ. ನ್ಯಾಯಕ್ಕಾಗಿ ಹೋರಾಟ ನಡೆಸಿದ ರೈತರ ಹೋರಾಟವನ್ನು ಲಾಠಿ ಬಳಸಿ ಜಲಫಿರಂಗಿ ಉಪಯೋಗಿಸಿ ಹತ್ತಿಕ್ಕಲಾಯಿತು. ಎಲೆಕ್ಟ್ರಾಲ್ ಬಾಂಡ್ ವಿಷಯದಲ್ಲಿ ಅವುಗಳನ್ನು ಖರೀದಿಸಿದವರ ಹೆಸರನ್ನು ಗೌಪ್ಯವಾಗಿಟ್ಟು ದೊಡ್ಡ ಹಗರಣ ಮಾಡಿದರು. ಸುಪ್ರೀಂ ಕೋರ್ಟಿನ ಆದೇಶದ ನಂತರ ಬಾಂಡ್ ಖರೀದಿಸಿದವರ ಹೆಸರುಗಳು ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕತೆಯ ಮುಖವಾಡ ಕಳಚಿದೆ ಎಂದರು.

ನಾವು 2013-18 ರ ಅವಧಿಯಲ್ಲಿ ನೀರಾವರಿ ಮಾಡಿ ರೈತರ ಆದಾಯ ದ್ವಿಗುಣ ಮಾಡಿದ್ದೇವೆ. ಒಂದು ಕಾಲದಲ್ಲಿ 711 ಟ್ಯಾಂಕರ್ ನೀರು ಪೂರೈಕೆಯಾಗುತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಈಗ ನಾವು ಕೈಗೊಂಡಿರುವ ನೀರಾವರಿ ಯೋಜನೆಗಳಿಂದಾಗಿ ಕೇವಲ 38 ಟ್ಯಾಂಕರ್ ಬಳಕೆಯಾಗುತ್ತಿವೆ. ಅದನ್ನು ಮುಂದಿನ ಆರು ತಿಂಗಳಲ್ಲಿ 10ಕ್ಕೆ ಇಳಿಸುತ್ತೇವೆ. ಈ ಭಾಗದಲ್ಲಿ ಬಾಕಿ ಉಳಿದಿರುವ ರೈತರ ಜಮೀನಿಗೆ ನೀರು ಹರಿಸಲು ಹೊಲಗಾಲುವೆ ಕಾಮಗಾರಿ ಪ್ರಾರಂಭವಾಗಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಬಸವನಾಡಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಿ ಕೆಲಸ ಮಾಡಲು ಪ್ರೊ.ರಾಜು ಆಲಗೂರ ಅವರನ್ನು ಆಯ್ಕೆ ಮಾಡುವ ಮೂಲಕ ಬದಲಾವಣೆ ತರಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸೀನಾ ರಾಠೋಡ, ಪ್ರಶಾಂತ ಝಂಡೆ, ಗೀತಾಂಜಲಿ ಪಾಟೀಲ ಮತ್ತು ಅನೀಲ ಚವ್ಹಾಣ ಮಾತನಾಡಿದರು. ಇದೇ ವೇಳೆ ಟಕ್ಕಳಕಿ ಗ್ರಾಮದಲ್ಲಿ ಹುಬನೂರ ಎಲ್. ಟಿ. -1 ರ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮಧುಕರ ಜಾಧವ, ವಿಠ್ಠಲ ಪೂಜಾರಿ, ಪೋಪಟ ಮಹಾರಾಜರು, ಬಾಳು ಮಹಾರಾಜರು, ಪಿಂಟೂ ಮಹಾರಾಜರು, ರಾಮಣ್ಣ ಮಾಳಿ, ಗೀತಾಂಜಲಿ ಪಾಟೀಲ, ರಾಜುಗೌಡ ಪೊಲೀಸ್ ಪಾಟೀಲ, ರಾಘು ಕುಲಕರ್ಣಿ, ವಾಮನ ಚವ್ಹಾಣ, ಭೀಮರಾಯಗೌಡ ಪಾಟೀಲ, ಸತೀಶ ನಾಯಕ, ಉತ್ತಮ ಝಂಡೆ, ಶಿವಪ್ಪ ಚಲವಾದಿ, ಸಂಜು ಪವಾರ, ಆತ್ಮಾರಾಮ ಕಾಟಕರ, ಅನುಬಾಯಿ ರಾಠೋಡ, ಅಪ್ಪು ದಳವಾಯಿ, ರಾಜು ಪವಾರ, ತಾವರು ರಾಠೋಡ, ಓಗೆಪ್ಪ ಗೋಪಣೆ, ಈರನಗೌಡ ಬಿರಾದಾರ, ಧನಸಿಂಗ ಚವ್ಹಾಣ, ಬೂತಾಳಸಿದ್ದ ಒಡೆಯರ, ಅನೀಲ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.

Share this article