ಬೆಂಗಳೂರು : ಕೆಪಿಎಸ್ಸಿ ಅಧ್ಯಕ್ಷರು ಅಧಿಕಾರ ದುರ್ಬಳಕೆ ಮಾಡಿಕೊಂಡ ಪ್ರಕರಣದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೆಪಿಎಸ್ಸಿ ಕಾರ್ಯದರ್ಶಿಗಳಿಗೆ ಸೂಚಿಸುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರಿಗೆ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡ ಮಾಲೀಪಾಟೀಲ್ ದೂರು ಸಲ್ಲಿಸಿದ್ದಾರೆ.

ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್ ಸಾಹುಕಾರ್ ಅವರು ಅಧಿಕಾರ ದುರ್ಬಳಕೆ

ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್ ಸಾಹುಕಾರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕುಟುಂಬ ಸದಸ್ಯರಿಗೆ ನೇಮಕಾತಿ ನಡೆಸಿರುವ ಕುರಿತು ಕಳೆದ ಮೇ ತಿಂಗಳಲ್ಲಿಯೇ ಮಾಹಿತಿ ಹಕ್ಕು ಅಧಿನಿಯಮದ ಅಡಿ ಮಾಹಿತಿ ಕೋರಿದ್ದೆ. ಆದರೆ, ಆಯೋಗವು ಮಾಹಿತಿ ನೀಡಲು ನಿರಾಕರಿಸಿತ್ತು ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸುಳ್ಳು ಆದಾಯ ಪ್ರಮಾಣ ನೀಡಿರುವ ಕುರಿತು ಕ್ರಿಮಿನಲ್ ಪ್ರಕರಣ

ಜೊತೆಗೆ, ಸುಳ್ಳು ಆದಾಯ ಪ್ರಮಾಣ ನೀಡಿರುವ ಕುರಿತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜ್ಯೋತಿ ಅವರಿಗೂ ದೂರು ಸಲ್ಲಿಸಿದ್ದಾರೆ. ಏಳು ದಿನಗಳ ಒಳಗಾಗಿ ಕ್ರಿಮಿನಲ್ ಪ್ರಕರಣ ದಾಖಲಿಸದಿದ್ದರೆ ಆಯೋಗದ ಕಾರ್ಯದರ್ಶಿ ವಿರುದ್ಧವೂ ಕಾನೂನು ಹೋರಾಟ ಆರಂಭಿಸುವುದಾಗಿ ಮರಿಲಿಂಗಗೌಡ ಎಚ್ಚರಿಸಿದ್ದಾರೆ.


ಇದೇ ರೀತಿ ಸಾಮಾನ್ಯ ಅಭ್ಯರ್ಥಿಗಳು ಸುಳ್ಳು ದಾಖಲೆ ನೀಡಿದರೆ ಆಯೋಗ ತಿರಸ್ಕರಿಸಿ ಸುಮ್ಮನಾಗುವುದೇ? ಸಿಕ್ಕಿ ಬಿದ್ದ ಮೇಲೆ ಅಭ್ಯರ್ಥಿತ್ವ ರದ್ದು ಮಾಡಿ ಎಂದು ಕೇಳಿಕೊಂಡರೆ ಆಯೋಗ ಬಿಟ್ಟು ಬಿಡುವುದೇ? ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಆಯೋಗದೊಳಗಿನ ಅಧಿಕಾರವಂತರ ಅಕ್ರಮಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮರಿಲಿಂಗಗೌಡ ಹೇಳಿದ್ದಾರೆ.