ಬೆಂಗಳೂರು : ಅನಿವಾಸಿ ಭಾರತೀಯರ ವ್ಯವಹಾರ ಇಲಾಖೆ ಬದಲಿಗೆ ‘ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ’ ರಚನೆ ಕುರಿತು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಜತೆಗೆ ವಾರ್ಷಿಕ ರಾಜ್ಯದಲ್ಲಿ ಮಾರಾಟವಾಗುವ ಮದ್ಯದ ಬಾಟಲುಗಳ ಮೇಲೆ ಅಂಟಿಸುವ ಭದ್ರತಾ ಚೀಟಿ ಮುದ್ರಣಕ್ಕೆ ವರ್ಷಕ್ಕೆ 135 ಕೋಟಿ ರು.ಗಳಂತೆ ಟೆಂಡರ್‌ ವಹಿಸುವ ಕುರಿತು ತೀರ್ಮಾನ ಆಗಲಿದೆ.

ಇತರೆ ವಿಷಯಗಳು:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ 15 ಜಿಲ್ಲಾ ಆಸ್ಪತ್ರೆಗಳಲ್ಲಿರುವ ಐಪಿಎಚ್‌ಎಲ್‌ ಪ್ರಯೋಗಾಲಯಗಳಿಗೆ ಪಿಎಂ-ಅಭಿಮ್‌ ಯೋಜನೆಯಡಿ 11.67 ಕೋಟಿ ರು. ವೆಚ್ಚದಲ್ಲಿ ಪ್ರಯೋಗಾಲಯ ಉಪಕರಣ ಖರೀದಿಸಲು ಆಡಳಿತಾತ್ಮಕ ಅನುಮೋದನೆ ಪಡೆಯುವ ಸಾಧ್ಯತೆಯಿದೆ.


ಜತೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಾರ್ವಜನಿಕ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳ 164 ಕೋಟಿ ರು. ಪರಿಷ್ಕೃತ ಅಂದಾಜಿಗೆ ಅನುಮೋದನೆ, ಎನ್‌ಜಿಎಫ್‌ ಲಿಮಿಟೆಡ್ ಆವರಣದಲ್ಲಿ 26.23 ಕೋಟಿ ರು. ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಅಂಗೀಕಾರ ನೀಡುವ ಬಗ್ಗೆ ಚರ್ಚೆಯಾಗಲಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದ ವಿವಿಧ ವಸತಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಕ್ರೀಡಾ ಉಡುಪು, ಶೂಗಳು ಮತ್ತು ಮೌಲಾನಾ ಆಜಾದ್‌ ಮಾದರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳು ಮತ್ತು ಶೂಗಳನ್ನು ಒಟ್ಟು 33.06 ಕೋಟಿ ರು.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ತೀರ್ಮಾನಿಸಲಿದ್ದಾರೆ.

ವಿಧಾನಮಂಡಲ ಅಧಿವೇಶನ, ಸ್ಪೀಕರ್‌ ಎಲೆಕ್ಷನ್‌ ದಿನ ನಿಗದಿ

ಸಂಪುಟ ಸಭೆಯಲ್ಲಿ ಮುಂದಿನ ಮಳೆಗಾಲದ ವಿಧಾನಮಂಡಲ ಅಧಿವೇಶನ ಕರೆಯುವ ಕುರಿತು ಹಾಗೂ ವಿಧಾನಸಭೆ ಸಭಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವ ದಿನಾಂಕದ ಬಗ್ಗೆ ತೀರ್ಮಾನ ಆಗಲಿದೆ.