ಬೆಂಗಳೂರು : ಕೈಗಾರಿಕಾ ವಿಸ್ತರಣಾಧಿಕಾರಿಗಳ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ನಡೆದುಕೊಂಡಿರುವ ರೀತಿ ಗಂಭೀರ ಹಾಗೂ ಕಳವಳಕಾರಿ ಎಂದು ಹೇಳಿರುವ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಈ ಬಗ್ಗೆ ಉನ್ನತ ಮಟ್ಟದ ಸೂಕ್ತ ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ

ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಆಯೋಗದ ಕಾರ್ಯದರ್ಶಿಗಳು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆಯೋಗದ ಅಧ್ಯಕ್ಷರು ತಾವು ಅಧಿಕಾರದಲ್ಲಿರುವ ಸಂದರ್ಭದಲ್ಲಿ, ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಸ್ವಂತ ಪುತ್ರಿಯರನ್ನು ಪರಿಗಣಿಸುವಾಗ ಅವರು ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಇತ್ತೀಚೆಗೆ ಮುಕ್ತಾಯಗೊಂಡ ಈ ನೇಮಕಾತಿಯ ನಡಾವಳಿಗಳಿಗೆ ತಾವೇ ಸಹಿ ಹಾಕುವ ಮೂಲಕ ಅವರು ‘ನೈಸರ್ಗಿಕ ನ್ಯಾಯದ ತತ್ವಗಳನ್ನು’ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.

ಮೀಸಲಾತಿ ಅರ್ಹತೆ ಮೇಲೆಯೂ ಗಂಭೀರವಾದ ಸಂಶಯ

ಇದಲ್ಲದೆ, ಅವರ ಪುತ್ರಿಯರಲ್ಲೊಬ್ಬರು ಪಡೆದುಕೊಂಡಿರುವ ಮೀಸಲಾತಿ ಅರ್ಹತೆ ಮೇಲೆಯೂ ಗಂಭೀರವಾದ ಸಂಶಯಗಳು ಉದ್ಭವಿಸಿದ್ದು, ಇದು ಸ್ವಜನಪಕ್ಷಪಾತಕ್ಕೆ ಸಾಕ್ಷಿಯಾಗಿದೆ. ಆಯೋಗದ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಆರ್ಹತೆ ಆಧಾರಿತ ವ್ಯವಸ್ಥೆಗೆ ಉಂಟಾದ ದೊಡ್ಡ ಕಪ್ಪುಚುಕ್ಕೆ. ಈ ಮೇಲಿನ ವಿಷಯದ ಗಂಭೀರತೆಯನ್ನು ಪರಿಗಣಿಸಿ, ಉನ್ನತ ಮಟ್ಟದ ಸೂಕ್ತ ತನಿಖೆಗೆ ಆದೇಶಿಸಬೇಕಾಗಿ ಅತ್ಯಂತ ಕೃತಜ್ಞತೆಯಿಂದ ವಿನಂತಿಸಿಕೊಳ್ಳುತ್ತೇನೆ ಎಂದು ಜೋಶಿ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.