ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಬಿಜೆಪಿಗೆ ಜಯ: ಜನಾರ್ದನ ರೆಡ್ಡಿ

KannadaprabhaNewsNetwork | Updated : Mar 30 2024, 12:51 AM IST

ಸಾರಾಂಶ

ದೇಶದ ಹಿತದೃಷ್ಟಿಯಿಂದ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಮೋದಿ ಅವರು ಪ್ರಧಾನಿಯಾಗಬೇಕಾಗಿದೆ. ಅಮೆರಿಕದಂತೆ ದೊಡ್ಡ ರಾಷ್ಟ್ರವಾಗಿ ಭಾರತ ಬೆಳೆದಿದೆ. ವಿಶ್ವಗುರು ಎನಿಸಿಕೊಂಡಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಅವರು ಗಂಗಾವತಿಯಲ್ಲಿ ಬಿಜೆಪಿ ಬೂತ್ ಮಟ್ಟದ ಸಮಾವೇಶ ಉದ್ಘಾಟಿಸಿದರು.

ಗಂಗಾವತಿ: ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸುವ ಮೂಲಕ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಬಿಜೆಪಿ ಬೂತ್ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಮೂರು ತಿಂಗಳ ಹಿಂದೆ ಮೋದಿ ಅವರು ಪ್ರಧಾನಿಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದೆ. ಅವರನ್ನು ಪ್ರಧಾನಿಯನ್ನಾಗಿ ಮಾಡಲು ದೇಶದ ಪ್ರಜೆಗಳು ತೀರ್ಮಾನಿಸಿದ್ದಾರೆ ಎಂದರು.

ದೇಶದ ಹಿತದೃಷ್ಟಿಯಿಂದ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಮೋದಿ ಅವರು ಪ್ರಧಾನಿಯಾಗಬೇಕಾಗಿದೆ. ಅಮೆರಿಕದಂತೆ ದೊಡ್ಡ ರಾಷ್ಟ್ರವಾಗಿ ಭಾರತ ಬೆಳೆದಿದೆ. ವಿಶ್ವಗುರು ಎನಿಸಿಕೊಂಡಿದೆ ಎಂದರು.

ಗಣಿಗಾರಿಕೆ ಉಳಿಸಿಕೊಳ್ಳಲು ಬಿಜೆಪಿ ಸೇರಿದ್ದಾರೆ ಎಂದು ಬಳ್ಳಾರಿಯ ನಾಗೇಂದ್ರ ಹಾಗೂ ಕಾಂಗ್ರೆಸ್ ಪ್ರಮುಖರು ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ, ಡಿ.ಕೆ. ಸುರೇಶ ಎಲ್ಲರೂ ಜೈಲು ಸೇರಿ ಜಾಮೀನು ಮೇಲೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ನನ್ನ ವಿರುದ್ಧ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ. ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಡಾ. ಬಸವರಾಜ ಜಯ ಸಾಧಿಸುತ್ತಾರೆ ಎಂದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಶಾಸಕ ದೊಡ್ಡನಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಮಾಜಿ ಶಾಸಕ ಶರಣಪ್ಪ, ಪ್ರತಾಪಗೌಡ ಮಸ್ಕಿ, ಕರಿಯಪ್ಪ ಸಿಂಧನೂರು, ಗಿರೇಗೌಡ , ಎಚ್.ಎಂ. ಸಿದ್ದರಾಮಸ್ವಾಮಿ, ಜೋಗದ ನಾರಾಯಣಪ್ಪನಾಯಕ, ವೀರಭದ್ರಪ್ಪನಾಯಕ, ಜೋಗದ ನಾರಾಯಣಪ್ಪನಾಯಕ, ನರಸಿಂಗರಾವ್ ಕುಲಕರ್ಣಿ, ಚೆನ್ನಪ್ಪ ಮಳಗಿ, ಕಾಶೀನಾಥ ಚಿತ್ರಗಾರ, ನಗರಸಭಾ ಸದಸ್ಯ ವಾಸುದೇವ ನವಲಿ, ಕಟ್ಟಿಮನಿ, ರಾಚಪ್ಪ ಸಿದ್ದಾಪುರ ಸೇರಿತಂತೆ ಅನೇಕರು ಇದ್ದರು.

ತಾಯಿ ಮಡಿಲಿಗೆ ಸೇರಿದ ಖುಷಿ ನನಗಿದೆ: ಜನಾರ್ದನ ರೆಡ್ಡಿ

ಬಿಜೆಪಿ ತಾಯಿ ಇದ್ದಂತೆ, ಈಗ ನಾನು ಬಿಜೆಪಿ ಸೇರಿರುವುದರಿಂದ ತಾಯಿ ಮಡಿಲಿಗೆ ಸೇರಿದ ಖುಷಿ ನನಗಾಗಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಬಿಜೆಪಿ ಸೇರಿದ ಆನಂತರ ಪ್ರಥಮ ಬಾರಿಗೆ ಗಂಗಾವತಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಕೆಲವೊಂದು ಅನಿವಾರ್ಯ ಕಾರಣಗಳಿಂದ ಬೇರೆ ಪಕ್ಷ ಕಟ್ಟಿದ್ದೆ. ಈಗ ಮತ್ತೆ ನನ್ನ ತಾಯಿ ಪಕ್ಷ ಬಿಜೆಪಿ ಸೇರಿದ್ದು ನನಗೆ ತೃಪ್ತಿ ತಂದಿದೆ ಎಂದರು. ಈ ಹಿಂದೆ 2008ರಲ್ಲಿ ಪರಣ್ಣ ಮುನವಳ್ಳಿ ಅವರ ಪರ ಪ್ರಚಾರಕ್ಕೆ ಬಂದು ಅವರ ಗೆಲುವಿಗೆ ಶ್ರಮಿಸಿದ್ದೇನೆ ಎಂದರು.

ನಾನು ಬಿಜೆಪಿ ಕಾನೂನುಬದ್ಧವಾಗಿ ಸೇರ್ಪಡೆಯಾಗಿದ್ದು, ಪಕ್ಷದ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಿದ್ದೇನೆ. ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ನಮ್ಮ ಗುರಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಅಭ್ಯರ್ಥಿ ಡಾ. ಬಸವರಾಜ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಇದ್ದರು.

Share this article