ಹಾವೇರಿ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಶುಕ್ರವಾರ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರದ ಎದುರು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ಜಿಲ್ಲಾಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಿಸುವ ಹಾಗೂ ಸ್ಥಳಾಂತರಗೊಳಿಸಬೇಕೆಂಬ ಆದೇಶ ಸರಿಯಾದ ಕ್ರಮವಲ್ಲ. ಜನೌಷಧಿ ಕೇಂದ್ರಗಳು ಬಡವರ ಪಾಲಿನ ಸಂಜೀವಿನಿಗಳಾಗಿವೆ.
ದೀನ- ದಲಿತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಜನೌಷಧಿ ಕೇಂದ್ರಗಳು ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳು ಸಿಗುತ್ತದೆ. ಈ ಕೂಡಲೇ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದನ್ನು ಹಿಂಪಡೆಯಬೇಕು. ಯಥಾವತ್ತಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜನಔಷಧ ಕೇಂದ್ರ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ಹಾಗೂ ಮಧ್ಯಮವರ್ಗದ ರೋಗಿಗಳಿಗೆ ವರದಾನವಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಉಪಯುಕ್ತ ಔಷಧಿಗಳು ದೊರೆಯುತ್ತದೆ. ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರ್ಕಾರ ಜನೌಷಧ ಮಳಿಗೆಗಳನ್ನು ಸ್ಥಳಾಂತರ ಮಾಡಿಸುವುದು ಸರಿಯಾದ ಕ್ರಮವಲ್ಲ. ಸರ್ಕಾರದ ಈ ನೀತಿಯಿಂದ ಕೋಟ್ಯಂತರ ಜನರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸಿದಂತಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸ್ಥಳಾಂತರ ಇಲ್ಲವೇ ಬಂದ್ ಮಾಡಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಬಾರದೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಶಹರ ಘಟಕದ ಅಧ್ಯಕ್ಷ ಗಿರೀಶ ತುಪ್ಪದ, ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣಿ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ನೀಲಪ್ಪ ಚಾವಡಿ, ಮೃತ್ಯುಂಜಯ ಮುಷ್ಠಿ, ನಾಗರಾಜ ಹಾರಿಗೋಲ, ಹನುಮಂತ ದಾಸರ, ಶಂಭು ಹತ್ತಿ, ಹೊನ್ನಪ್ಪ ಅಗಸಿಬಾಗಿಲ, ಲಲಿತಾ ಗುಂಡೇನಹಳ್ಳಿ, ರೋಹಿಣಿ ಪಾಟೀಲ, ಪುಷ್ಪಾ ಚಕ್ರಸಾಲಿ, ಚನ್ನಮ್ಮ ಬ್ಯಾಡಗಿ, ರತ್ನಾ ಭೀಮಕ್ಕನವರ ಸೇರಿದಂತೆ ಇತರರು ಇದ್ದರು. ಔಷಧಿ ವ್ಯಾಪಾರಿಗಳ ಮಾಫಿಯಾಕ್ಕೆ ಮಣಿದ ರಾಜ್ಯ ಸರ್ಕಾರಹಾನಗಲ್ಲ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರಕ್ಕೆ ಬಡವರ ಹಿತ ಬೇಕಾಗಿಲ್ಲ. ಬಂಡವಾಳಶಾಹಿಗಳ ತಾಳಕ್ಕೆ ಕುಣಿಯುತ್ತ ಜನಸಾಮಾನ್ಯರ ಹಿತ ಕಡೆಗಣಿಸಲಾಗುತ್ತಿದೆ. 1300ಕ್ಕೂ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಲು ಹೊರಟ ಕಾರಣ ಹೇಳಿ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಕಿಡಿಕಾರಿದರು.ಶುಕ್ರವಾರ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಎದುರು ಬಿಜೆಪಿ ಆಯೋಜಿಸಿದ್ದ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ನಡೆದ ಮೌನ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಬಡವರ ಪರ ಯೋಜನೆಗಳು ಬೇಕಾಗಿಲ್ಲ. ಔಷಧಿ ವ್ಯಾಪಾರಿಗಳ ಮಾಫಿಯಾಕ್ಕೆ ತಲೆದೂಗುತ್ತಿದೆ. ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಇಂತಹ ಮಾರ್ಗಗಳನ್ನು ಯೋಜಿಸುತ್ತಿದೆ. ಬೆಲೆ ಏರಿಕೆಯ ಹಿಂದೆ ಇಂತಹ ಕುತಂತ್ರವಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಮುಖಂಡರಾದ ಬಿ.ಎಸ್. ಅಕ್ಕಿವಳ್ಳಿ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ರಾಜಣ್ಣ ಪಟ್ಟಣದ, ಶಿವಲಿಂಗಪ್ಪ ತಲ್ಲೂರ, ಜಗದೀಶ ಕೊಂಡೋಜಿ, ರಾಘವೇಂದ್ರ ತಹಶೀಲ್ದಾರ, ರಾಮು ಯಳ್ಳೂರ, ಡಾ. ಸುನೀಲ ಹಿರೇಮಠ, ನಾಗೇಂದ್ರ ಬಂಕಾಪುರ, ಮನೋಜ ದೇಸಾಯಿ, ವಿಜೇಂದ್ರ ಕನವಳ್ಳಿ, ಬಸವರಾಜ ಮಟ್ಟಿಮನಿ, ಶಿವಾನಂದ ಸಂಗೂರಮಠ, ಅಬ್ದುಲ್ರಹೆಮಾನ ಸೌದಾಗರ, ಮಹೇಶ ಹರಿಜನ, ನಿಯಾಜ ಉಪ್ಪಿನ, ರಾಜು ಗೌಳಿ, ಸಂತೋಷ ಭಜಂತ್ರಿ, ದಯಾನಂದ ನಾಗಜ್ಜನವರ, ಸದಾನಂದ ಮೆಳ್ಳಳ್ಳಿ, ಬಸವರಾಜ ಹಾದಿಮನಿ, ಅಣ್ಣಪ್ಪ ಚಾಕಾಪುರ ಶೋಭಾ ಉಗ್ರಣ್ಣನವರ, ಸುನಕವ್ವ ಚಿಕ್ಕಣ್ಣನವರ, ಕಾವ್ಯಾ ಬೆಲ್ಲದ, ವೀಣಾ ವಿರುಪಣ್ಣನವರ ಮೊದಲಾದವರು ಇದ್ದರು. ಇದೇ ಸಂದರ್ಭದಲ್ಲಿ ರಾಜ್ಯಪಾಲರಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.