ಯಾದಗಿರಿ: ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಹಾಗೂ ಅವರ ಹಿರಿ ಸಹೋದರ, ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ್ ಅವರ ಜೋಡಿ ಒಂದು ರೀತಿಯಲ್ಲಿ ಅಗ್ನಿ-ಮಳೆಯಂತಿತ್ತು. ತಮ್ಮ ನೇರ ಹಾಗೂ ನಿಷ್ಠುರ ಮಾತುಗಳ ಮೂಲಕ ಯಾರ ಮುಲಾಜಿಗೂ ಬೀಳದ ವೆಂಕಟರೆಡ್ಡಿಯವರದ್ದು ಒಂದು ಗುಣವಾದರೆ, ಶಾಂತಚಿತ್ತ ಹಾಗೂ ನಗುಮುಖದಿಂದಲೇ ಎಲ್ಲರನ್ನೂ ಸಮಾಧಾನಪಡಿಸುವುದು ಡಾ. ಮುದ್ನಾಳ್ರ ವ್ಯಕ್ತಿತ್ವ. ವೆಂಕಟರೆಡ್ಡಿ ಕೋಪಗೊಂಡಾಗ ಅದನ್ನು ತಣಿಸಲು ಸಹೋದರ ಡಾ. ವೀರಬಸವಂತರೆಡ್ಡಿಯವರಿಂದ ಮಾತ್ರ ಸಾಧ್ಯ ಅನ್ನೋದು ಇಲ್ಲಿ ಜನಜನಿತ. ಡಾ. ಮುದ್ನಾಳ್ರ ಮಾತನ್ನು ವೆಂಕಟರೆಡ್ಡಿ ಮಾತು ಮೀರುತ್ತಿರಲಿಲ್ಲ.
ಡಾ. ವೀರಬಸವಂತರೆಡ್ಡಿ ಅಗಲಿಕೆ ವಿಚಾರ ಅರಿಯದ ವೆಂಕಟರೆಡ್ಡಿ ಮುದ್ನಾಳ್, ಕೆಲ ದಿನಗಳ ಹಿಂದೆ ಯಾದಗಿರಿಗೆ ಬಂದಿದ್ದಾಗ ಮೊದಲು ಅಣ್ಣನ ಮನೆಗೆ ಹೋಗಿ ಭೇಟಿಯಾಗಿ ಬರೋಣ ಎಂದು ಕುಟುಂಬಸ್ಥರಿಗೆ ಹೇಳಿದರಂತೆ. "ನನ್ನ ಚಿಕಿತ್ಸೆ ಇದ್ದೇ ಇರುತ್ತದೆ, ಬಹಳ ದಿನಗಳಾಗಿದ್ವು, ಅಣ್ಣನ ನೋಡಿಲ್ಲ ಮೊದಲು ಭೇಟಿಯಾಗಿ ಬರೋಣ. " ಎಂದು ಆಪ್ತರಲ್ಲಿ ಹೇಳಿದರು. ಅವರಿಗ್ಯಾರಿಗೂ ಡಾ. ಮುದ್ನಾಳ್ ನಿಧನ ವಿಷಯ ತಿಳಿಸಲು ಧೈರ್ಯ ಸಾಲದೆ, ಕೊನೆಗೆ ಅಬ್ಬೆತುಮಕೂರು ಶ್ರೀಮಠದ ಡಾ. ಗಂಗಾಧರ ಶ್ರೀಗಳೇ ಬಂದು ಇದನ್ನು ಸಾವಧಾನದಿಂದ ಹೇಳಿದಾಗ ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ ವೆಂಕಟರೆಡ್ಡಿ ಮುದ್ನಾಳ್, ಅಣ್ಣನ ಅಂತಿಮ ದರ್ಶನಕ್ಕೂ ತಮಗೆ ಬರಲಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದರಂತೆ.
-----17ವೈಡಿಆರ್13ಎ : ಮಾಜಿ ಶಾಸಕರುಗಳಾದ ಮುದ್ನಾಳ್ ಸಹೋದರರು, ವೆಂಕಟರೆಡ್ಡಿ, ಡಾ. ವೀರಬಸವಂತರೆಡ್ಡಿ.