ಕಾರ್ಕಳ ಪುರಸಭೆಗೆ ‘ಬ್ಲ್ಯಾಕ್ ಸ್ಪಾಟ್’ ತಲೆನೋವು

KannadaprabhaNewsNetwork |  
Published : Mar 30, 2026, 03:30 AM IST
ತ್ಯಾಜ್ಯ ರಾಶಿ | Kannada Prabha

ಸಾರಾಂಶ

ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಸ ಎಸೆಯುವುದು ಹಾಗೂ ನಿಯಮಬಾಹಿರವಾಗಿ ಪ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವುದು ಹೆಚ್ಚುತ್ತಿದೆ. ಪುರಸಭೆಯ ಸ್ವಚ್ಛತಾ ಸಿಬ್ಬಂದಿ ನಿತ್ಯ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರೂ, ಸಾರ್ವಜನಿಕರಲ್ಲಿ ನಿಯಮ ಪಾಲನೆ ಕೊರತೆಯಿಂದ ಸಮಸ್ಯೆ ಮುಂದುವರಿದಿದೆ.

ಕಾರ್ಕಳ: ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಸ ಎಸೆಯುವುದು ಹಾಗೂ ನಿಯಮಬಾಹಿರವಾಗಿ ಪ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವುದು ಹೆಚ್ಚುತ್ತಿದೆ. ಪುರಸಭೆಯ ಸ್ವಚ್ಛತಾ ಸಿಬ್ಬಂದಿ ನಿತ್ಯ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರೂ, ಸಾರ್ವಜನಿಕರಲ್ಲಿ ನಿಯಮ ಪಾಲನೆ ಕೊರತೆಯಿಂದ ಸಮಸ್ಯೆ ಮುಂದುವರಿದಿದೆ.

‘ತ್ಯಾಜ್ಯ ಎಸೆಯಬೇಡಿ’ ಎಂಬ ಸೂಚನಾ ಫಲಕಗಳನ್ನು ಅಳವಡಿಸಿದ ಸ್ಥಳಗಳಲ್ಲೇ ಕಸ ಎಸೆಯುತ್ತಿರುವುದು ಸಾಮಾನ್ಯವಾಗಿದ್ದು, ತಾಲೂಕು ಕಚೇರಿ ರಸ್ತೆ, ಬಂಗ್ಲೆಗುಡ್ಡೆ ಮಾರುಕಟ್ಟೆ ರಸ್ತೆ, ಬಸ್ ನಿಲ್ದಾಣ ಮತ್ತು ಬಂಡಿಮಠ ಪರಿಸರಗಳು ಪ್ರಮುಖ ‘ಬ್ಲ್ಯಾಕ್ ಸ್ಪಾಟ್’ ಪ್ರದೇಶಗಳಾಗಿ ಗುರುತಿಸಲಾಗಿದೆ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಕವರ್‌ಗಳು, ಆಹಾರದ ಪ್ಯಾಕೆಟ್‌ಗಳು, ಹಳೆಯ ಬಟ್ಟೆಗಳು ಹಾಗೂ ಮದ್ಯದ ಬಾಟಲಿಗಳು ರಾಶಿಯಾಗಿ ಬಿದ್ದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ತ್ಯಾಜ್ಯ ನೀರು ನೇರ ಚರಂಡಿಗೆ: ಸತ್ಯನಾರಾಯಣ ನಗರದಲ್ಲಿ ಮನೆಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಮಳೆನೀರು ಚರಂಡಿಗೆ ಬಿಡಲಾಗುತ್ತಿರುವ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಪೈಪ್‌ಗಳನ್ನು ಬಂದ್ ಮಾಡಿದ್ದಾರೆ. ಮನೆಗಳ ತ್ಯಾಜ್ಯ ನೀರಿಗಾಗಿ ಪ್ರತ್ಯೇಕ ಸೋಕೇಜ್ ಪಿಟ್ ನಿರ್ಮಾಣ ಕಡ್ಡಾಯ ಎಂದು ಸೂಚಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಷೇಧವಿದ್ದರೂ, ಪಟ್ಟಣದಾದ್ಯಂತ ಪ್ಲಾಸ್ಟಿಕ್ ಪ್ಲೆಕ್ಸ್ ಮತ್ತು ಬ್ಯಾನರ್‌ಗಳ ಬಳಕೆ ಮುಂದುವರಿದಿದೆ. ಪುರಸಭೆಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಯುತ್ತಿದ್ದು, ಮಣ್ಣಗೋಪುರ ಪ್ರದೇಶದಲ್ಲಿ ಅಕ್ರಮವಾಗಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ ₹2000 ದಂಡ ವಿಧಿಸಲಾಗಿದೆ. ಕೆಲ ಪ್ಲೆಕ್ಸ್ ತಯಾರಕರಿಗೆ ನೋಟಿಸ್ ನೀಡಲಾಗಿದೆ.ಏಪ್ರಿಲ್ 1ರಿಂದ ನಿಯಮ ಉಲ್ಲಂಘಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್ ತಿಳಿಸಿದ್ದಾರೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಪುರಸಭೆಗೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ
ಸಮಾಜದ ಎಲ್ಲ ರಂಗಗಳಲ್ಲೂ ಸಶಕ್ತರಾಗುತ್ತಿರುವ ಮಹಿಳೆಯರು