ತಂತ್ರಜ್ಞಾನ, ವಿವೇಚನೆಗಳಿಂದ ಅಭಿವೃದ್ಧಿ ಪಥದತ್ತ ಜಗತ್ತು: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Mar 30, 2026, 03:15 AM IST
ರಾಷ್ಟ್ರೀಯ ಸಮ್ಮೇಳನವನ್ನು ಶಾಸಕ ವಿಜಯೇಂದ್ರ ಉದ್ಘಾಟಿಸಿದರು | Kannada Prabha

ಸಾರಾಂಶ

ಪ್ರಸ್ತುತ ಜಗತ್ತು ವಿವಿಧ ರೀತಿಯ ಸವಾಲುಗಳನ್ನು ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ತಂತ್ರಜ್ಞಾನ ಮತ್ತು ವಿವೇಚನೆಗಳು ಮಾತ್ರ ಜಗತ್ತನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಕ್ಷೇತ್ರದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪ್ರಸ್ತುತ ಜಗತ್ತು ವಿವಿಧ ರೀತಿಯ ಸವಾಲುಗಳನ್ನು ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ತಂತ್ರಜ್ಞಾನ ಮತ್ತು ವಿವೇಚನೆಗಳು ಮಾತ್ರ ಜಗತ್ತನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಕ್ಷೇತ್ರದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಬಹುಶಿಸ್ತಿನ ಮತ್ತು ಸಮಕಾಲೀನ ವಿಧಾನಗಳಲ್ಲಿನ ನಾವೀನ್ಯತೆ ಹಾಗೂ ಸುಸ್ಥಿರತೆಯನ್ನು ಕಂಡುಕೊಳ್ಳುವಲ್ಲಿನ ಸವಾಲುಗಳ’ ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಬೆಳವಣಿಗೆಗೆ ಹೊಸ ಭರವಸೆ ಹಾಗೂ ಸ್ವರೂಪವನ್ನು ನೀಡುವಲ್ಲಿ ಶೈಕ್ಷಣಿಕ ಸಮ್ಮೇಳನಗಳು ಅಗತ್ಯವಾಗಿದ್ದು, ಇವುಗಳು ಹೊಸ ಹೊಸ ಸಂಶೋಧನೆ ಆವಿಷ್ಕಾರಗಳ ಮಾಹಿತಿ ವಿನಿಮಯ ವೇದಿಕೆಗಳಾಗಿವೆ ಎಂದು ಅಭಿಪ್ರಾಯಪಟ್ಟ ಅವರು ಪ್ರಧಾನಿ ಮೋದಿ ಸಂಶೋಧನೆಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಹಾಗೂ ಅನುದಾನಗಳನ್ನು ನೀಡುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರೂ.1 ಲಕ್ಷ ಕೋಟಿ ಸಹಾಯಧನವನ್ನು ಸಂಶೋಧನಾ ಕ್ಷೇತ್ರಕ್ಕೆ ನೀಡಲಾಗಿದೆ.2047 ರಲ್ಲಿ ಸಂಪೂರ್ಣ ಅಭಿವೃದ್ಧಿಶೀಲ ಭಾರತ ಆಗಬೇಕೆಂಬ ಕನಸು ಮೋದಿಜಿ ಹೊಂದಿದ್ದು,ಅತಿ ಹೆಚ್ಚು ಯುವ ಜನಾಂಗವನ್ನು ಹೊಂದಿರುವ ದೇಶದ ಯುವ ಪೀಳಿಗೆ ಮೋದಿರವರ ಕಳಕಳಿ ಅರ್ಥೈಸಿಕೊಂಡು ತಂದೆ ತಾಯಿಗಳ ಕನಸುಗಳೊಂದಿಗೆ ಸನ್ಮಾರ್ಗದ ಮೂಲಕ ಸದೃಡ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.

ವಿಜ್ಞಾನ ತಂತ್ರಜ್ಞಾನಾಧಾರಿತ ಶೈಕ್ಷಣಿಕ ಸಮ್ಮೇಳನಗಳು ಮಾತ್ರ ಶಿಕ್ಷಣ ಕ್ಷೇತ್ರದ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಲು ಸಹಾಯಕವಾಗಿವೆ ಈ ದಿಸೆಯಲ್ಲಿ ಶೈಕ್ಷಣಿಕ ಸಮ್ಮೇಳನಗಳು,ಕಾರ್ಯಾಗಾರಗಳು ಹೆಚ್ಚು ಹೆಚ್ಚು ಆಯೋಜನೆಯಿಂದ ಸಂಶೋಧನೆ ಆವಿಷ್ಕಾರಗಳಿಗೆ ವೇದಿಕೆ ಕಲ್ಪಿಸಿಕೊಡಬೇಕಾಗಿದೆ ಎಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಬಿ.ಜೆ ಗಿರೀಶ್ ಮಾತನಾಡಿ, ಸಂಶೋಧನೆಗಳು ಜ್ಞಾನದ ಅನ್ವೇಷಣೆ, ಸಮಸ್ಯೆಗಳಿಗೆ ಪರಿಹಾರ ಮತ್ತು ಹೊಸ ಆವಿಷ್ಕಾರಗಳಿಗೆ ಅಡಿಪಾಯವಾಗಿದೆ.ಸಂಶೋಧನೆ ಕ್ಷೇತ್ರದಲ್ಲಿ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ,ವಿಶ್ಲೇಷಿಸಿ,ಅಸ್ತಿತ್ವದಲ್ಲಿರುವ ಸಿದ್ಧಾಂತಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿ ಡಾ.ಶಿವಕುಮಾರ್ ಜಿ.ಎಸ್. ಮಾತನಾಡಿ, ಸಂಶೋಧನೆಗಳು ಹೊಸ ಜ್ಞಾನದ ಅನ್ವೇಷಣೆಯ ಉದ್ದೇಶವನ್ನು ಹೊಂದಿದೆ.ಶಿಕ್ಷಣ ವಿಜ್ಞಾನ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಸಂಶೋಧನೆಗಳು ಪ್ರಮುಖ ಪಾತ್ರ ವಹಿಸುತ್ತದೆ.ಇಂದಿನ ದಿನಗಳಲ್ಲಿ ಇಂತಹ ಸಮ್ಮೇಳನಗಳು ಅತಿ ಅಗತ್ಯವಾಗಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಶಿವಕುಮಾರ ಎಂ ಬಿ. ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳು ವಿಶೇಷ ಉಪನ್ಯಾಸಗಳನ್ನು ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳ, ಅಂತರ್ ರಾಜ್ಯದ ಹಲವು ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ತಮ್ಮ ವಿದ್ವತ್ಪೂರ್ಣ ಲೇಖನಗಳನ್ನು ಮಂಡಿಸಿದರು.

ಪ್ರಾಚಾರ್ಯ ಡಾ.ರವೀಂದ್ರ ಕೆ.ಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪನ್ಯಾಸಕಿ ದಾನೇಶ್ವರಿ ನಿರೂಪಿಸಿ ಅಶ್ವಿನಿ ವಂದಿಸಿದರು.ಸಂಸ್ಥೆಯ ಅಧ್ಯಾಪಕ ವರ್ಗದವರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೀರಶೈವ ಪಂಚಸೂತ್ರೀಯ ಪ್ರವಚನ ಮೇರು ದಾರ್ಶನಿಕ ಕೃತಿ: ಡಾ. ಚಂದ್ರಶೇಖರ ಶಿವಾಚಾರ್ಯರು
ರಂಗಭೂಮಿ ನಾಡಿನ ಸಂಸ್ಕೃತಿ ಪರಂಪರೆಯ ಪ್ರತಿಬಿಂಬ