ನರಗುಂದ: ದೇಶದ ಅನೇಕ ರಾಜ್ಯಗಳಲ್ಲಿ ಮತದಾರ ಪಟ್ಟಿಯ(ಎಸ್ಐಆರ್)ತೀವ್ರ ಪರಿಷ್ಕರಣೆಯಿಂದ ಲಕ್ಷಾಂತರ ಹೆಸರುಗಳು ಬಿಟ್ಟು ಹೋಗಿವೆ. 2002ರಲ್ಲಿನ ಮತದಾರರ ಪಟ್ಟಿಯಲ್ಲಿರುವ ಹೆಸರುಗಳು 2020ರಲ್ಲೂ ಇರಬೇಕು. ಪ್ರತಿ ಬೂತ್ನಲ್ಲಿರುವ ಬಿಎಲ್ಎ-೨ ಮತ್ತು ಬಿಎಲ್ಒಗಳು ಬಹಳ ಜಾಗ್ರತೆಯಿಂದ ಕೆಲಸ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಬೆಳಗಾವಿ ವಿಭಾಗದ ಸದಸ್ಯ ವಾಸುದೇವ ಮೂರ್ತಿ ತಿಳಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ರಾಜ್ಯದಲ್ಲಿ ಮತದಾರನು ಮತಪಟ್ಟಿಯಿಂದ ಹೊರಹೋಗಬಾರದು. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡಲು ಎಸ್ಐಆರ್ ಜಾರಿಗೆ ತಂದಿದೆ. ರಾಜ್ಯದ ಮಹಿಳೆಯರು ಮತ್ತು ಯುವಕರು ಕಾಂಗ್ರೆಸ್ ಪಕ್ಷದ ಪರ ಇದ್ದಾರೆ. 2014ರಲ್ಲಿ ಮೋದಿಯವರು ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ. ರೈತರ ಆದಾಯ ದ್ವಿಗುಣಗೊಳಿಸುತ್ತೇನೆ ಅಂದಿದ್ದರು. ಆದರೀಗ ತೈಲ ಬೆಲೆ, ರಸಗೊಬ್ಬರ ಬೆಲೆ, ಅನೇಕ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಈ ಎಲ್ಲ ವೈಫಲ್ಯವನ್ನು ಮರೆಮಾಚಲು ಬಿಜೆಪಿ ಎಸ್ಐಆರ್ ಜಾರಿಗೆ ತಂದಿದೆ ಎಂದರು.
ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಮಾತನಾಡಿ, ಎಸ್ಐಆರ್ ಮೂಲಕ ಬಿಜೆಪಿಯವರು ಕಾಂಗ್ರೆಸ್ ಮತದಾರರನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದೆ. ಬಡವರು, ದಲಿತರು ಮತ್ತು ಹಿಂದುಳಿದವರಿಗೆ ಎಸ್ಐಆರ್ನಿಂದ ತೊಂದರೆ ಆಗುತ್ತಿದೆ. ನಮ್ಮ ಮತಕ್ಷೇತ್ರದಲ್ಲಿ ನಾನು ಬಿಎಲ್ಎ- ೧ ಆಗಿದ್ದರೆ, 220 ಜನ ಕಾರ್ಯಕರ್ತರು ಬಿಎಲ್ಎ- ೨ಗಳಾಗಿ ಕೆಲಸ ಮಾಡುತ್ತಿದ್ದಾರೆಂದರು.ಈ ಸಂದರ್ಭದಲ್ಲಿ ವಿಶ್ವನಾಥ ದೇಸಾಯಿ, ಹೊಳೆಆಲೂರು ಮಂಡಲ ಅಧ್ಯಕ್ಷ ಮಲ್ಲಪ್ಪ ಕೋಳೇರಿ, ನರಗುಂದ ಮಂಡಲ ಅಧ್ಯಕ್ಷ ಪ್ರವೀಣ ಯಾವಗಲ್ಲ, ಗುರುಪಾದಪ್ಪ ಕುರಹಟ್ಟಿ, ಎಂ.ಬಿ. ಅರಹುಣಶಿ, ಬಿ.ಎನ್. ಮಾನೆ, ಶಂಕರಗೌಡ ಪಾಟೀಲ, ಪ್ರಕಾಶ ಹಡಗಲಿ, ವಿಷ್ಣು ಸಾಠೆ, ಸೇರಿದಂತೆ ಮುಂತಾದವರು ಇದ್ದರು.